ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ‘ಶ್ಲೋಕಭಾರತೀ’ ಸ್ಪರ್ಧೆ ಉದ್ಘಾಟನೆ

0

ಶಿಕ್ಷಣದೊಂದಿಗೆ ಧರ್ಮಪ್ರಜ್ಞೆ ಬೆಳೆಯಬೇಕು : ಅನಂತನಾರಾಯಣ ಭಟ್ ಪರಕ್ಕಜೆ

ಪುತ್ತೂರು: ವಿದ್ಯಾರ್ಜನೆ ಎಂಬುದು ಹಣ ಗಳಿಸುವುದಕ್ಕೆ ಇರುವ ವ್ಯವಸ್ಥೆ ಎಂದು ನಾವು ಭಾವಿಸಬಾರದು. ಜ್ಞಾನವನ್ನು ಹೊಂದಿ ಅದನ್ನು ದೇಶದ ಉನ್ನತಿಕೆಗಾಗಿ ಬಳಸುವ ಮನಸ್ಥಿತಿ ನಮ್ಮ ಮಕ್ಕಳಲ್ಲಿ ಒಡಮೂಡಬೇಕಿದೆ. ಈ ಹಿನ್ನೆಲೆಯಲ್ಲಿ ಹೆತ್ತವರು ಮಕ್ಕಳ ಉತ್ಕೃಷ್ಟ ಬೆಳವಣಿಗೆಗೆ ಪೂರಕವಾದ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಸೇರಿಸಬೇಕಾದ ಅಗತ್ಯವಿದೆ ಎಂದು ವೈದಿಕರಾದ ಬ್ರಹ್ಮಶ್ರೀ ಅನಂತನಾರಾಯಣ ಭಟ್ ಪರಕ್ಕಜೆ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ವತಿಯಿಂದ ಮೂರು, ನಾಲ್ಕು ಹಾಗೂ ಐದು ವರ್ಷದ ಪುಟಾಣಿಗಳಿಗಾಗಿ ಆಯೋಜಿಸಿದ ಶ್ಲೋಕ ಭಾರತೀ ಎಂಬ ಶ್ಲೋಕ ಕಂಠಪಾಠ ಸ್ಪರ್ಧೆಯನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು. ಶಿಲೆಯೊಂದು ಶಿಲ್ಪಿಯ ಕೈಚಳಕದಿಂದ ಮೂರ್ತಿಯಾಗಿ ಪರಿವರ್ತಿತವಾದರೂ ಧಾರ್ಮಿಕ ವಿಧಿವಿಧಾನಗಳ ಮೂಲಕ ಆ ಶಿಲ್ಪದಲ್ಲಿ ಜೀವಕಳೆಯನ್ನು ತುಂಬಿದಾಗ ಪೂಜೆಗೆ ಅರ್ಹವೆನಿಸುತ್ತದೆ. ಹಾಗೆಯೇ ಮಕ್ಕಳಿಗೆ ಕೇವಲ ವಿದ್ಯೆ ಕೊಟ್ಟಾಗ ವ್ಯಕ್ತಿ ರೂಪುಗೊಂಡರೂ ವ್ಯಕ್ತಿತ್ವ ರೂಪುಗೊಳ್ಳುವಂತಹ ಸತ್ವವನ್ನು ಶಿಕ್ಷಣದೊಂದಿಗೆ ಒದಗಿಸಿಕೊಡಬೇಕಾಗಿದೆ. ಸನಾತನ ಸಂಸ್ಕೃತಿ, ಆಚಾರ ವಿಚಾರಗಳ ಬಗೆಗೆ ಮಕ್ಕಳಲ್ಲಿ ಅರಿವು ಮೂಡಿಸಿದಾಗ ಆ ಮಕ್ಕಳಲ್ಲಿ ಜೀವಕಳೆ ಮೂಡಿ ಗೌರವಾರ್ಹರೆನಿಸುತ್ತಾರೆ ಎಂದು ನುಡಿದರು.


ಶಿಕ್ಷಣ ಪಡೆಯುವುದರ ಜತೆಗೆ ಧರ್ಮಿಷ್ಟರಾಗಿಯೂ ಮಕ್ಕಳು ಬೆಳೆಯಬೇಕು. ಧರ್ಮದ ಕಲ್ಪನೆ ಇಲ್ಲದೆ ಅದೆಷ್ಟೇ ಶಿಕ್ಷಣ ಹೊಂದಿದರೂ ಅದು ರಾಮಾಯಣ ಕಾಲದ ರಾವಣನಂತೆ ವ್ಯರ್ಥವಾಗಿಹೋಗುತ್ತದೆ. ಆದ್ದರಿಂದ ಧರ್ಮಪ್ರಜ್ಞೆಯನ್ನು ಮಕ್ಕಳಲ್ಲಿ ಬೆಳೆಸುವ ಕಾರ್ಯವನ್ನು ಮಾಡಲೇಬೇಕಿದೆ. ಯಾವ ಮಗುವೂ ಅಯೋಗ್ಯ ಅಲ್ಲ. ಸರಿಯಾದ ಮಾರ್ಗದರ್ಶನ ಒದಗಿಸಿಕೊಡುವ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರೆ ಪ್ರತಿಯೊಂದು ಮಗುವೂ ಸಾಧನೆ ಮೆರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ, ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ಅನಂತನಾರಾಯಣ ಭಟ್ ಪರಕ್ಕಜೆ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.


ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿನಿಯರಾದ ಆರಾಧ್ಯ ಅಮೈ, ಯಶ್ವಿ ಯು.ನಾಯ್ಕ್, ಹೇಮಾಂಗಿನಿ ಕೆ. ವಸಿಷ್ಠ ಹಾಗೂ ಆಕರ್ಷ ಎಚ್.ಪಿ. ಪ್ರಾರ್ಥಿಸಿದರು. ಅಂಬಿಕಾ ವಿದ್ಯಾಲಯದ ಶಿಕ್ಷಕಿ ಗೌರಿ ಸ್ವಾಗತಿಸಿ, ಶಿಕ್ಷಕ ಹೇಮಂತ್ ವಂದಿಸಿದರು. ಶಿಕ್ಷಕಿ ಪ್ರಿಯಾಶ್ರೀ ಕೆ.ಎಸ್. ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here