




ಗಿಡಗಳ ಮೇಲಿನ ಪ್ರೀತಿಯನ್ನು ಬೆಳಗಾವಿಯಲ್ಲೂ ಮರೆಯಲಿಲ್ಲ..




ಪುತ್ತೂರು: ಮಳೆಗಾಲ ಬಂದಾಗ ನಾವು ಹಲವು ಕಡೆ ವನಮಹೋತ್ಸವ ಮಾಡುವುದನ್ನು ಕಾಣುತ್ತೇವೆ. ಗಿಡಗಳನ್ನು ತಾವು ನೆಡುವ ಮೂಲಕ ನೀವು ಗಿಡಗಳನ್ನು ನೆಟ್ಟು ಬೆಳೆಸಬೇಕು, ಪರಿಸರ ಪ್ರೇಮ ಬೆಳೆಸಿಕೊಳ್ಳಿ ಎಂದು ಹೇಳುತ್ತಾರೆ. ವನಮಹೋತ್ಸವ ಪುಣ್ಯದಿನದಂದು ನೆಟ್ಟಗಿಡ ಬದುಕಿದೆಯೋ ಸತ್ತಿದೆಯೋ ಎಂದು ಆ ಬಳಿಕ ನೋಡುವವರೇ ಇಲ್ಲ.. ಇದು ಎಲ್ಲೆಡೆಯೂ ನಡೆಯುವ ಸಂಗತಿ.. ಪುತ್ತೂರು ಉಪ್ಪಿನಂಗಡಿ ರಸ್ತೆಯ ಬದಿಗಳಲ್ಲಿ ಹಾಗೂ ಇನ್ನಿತರ ರಸ್ತೆ ಹಾದು ಹೋಗುವ ಕಡೆಗಳಲ್ಲಿ ಕಳೆದ ಎರಡು ವರ್ಷದಿಂದ ವಿವಿಧ ಗಿಡಗಳನ್ನು ನೆಡಲಾಗಿದೆ. ನೆಟ್ಟದ್ದು ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ, ಆದರೆ ಗಿಡ ನೆಡಿಸಿದ್ದು ಪುತ್ತೂರು ಶಾಸಕ ಅಶೋಕ್ ರೈ.






ಶಾಸಕನಾಗಿ ಆಯ್ಕೆಯಾದ ಮೊದಲ ದಿನದಿಂದಲೇ ಈ ಕೆಲಸವನ್ನು ಆರಂಭ ಮಾಡಿದ್ದರು. ಇಂದು ಬಹುತೇಕ ರಸ್ತೆ ಬದಿಯಲ್ಲಿ ಗಿಡಗಳು ಸೊಂಪಾಗಿ ಬೆಳೆಯುತ್ತಿರುವುದನ್ನು ಕಂಡು ಅನೇಕರು ಖುಷಿ ಪಟ್ಟಿದ್ದಾರೆ. ವಿಶೇಷವೆಂದರೆ ಮರದಿಂದ ಕಾಟುಮಾವನ್ನೂ ಕೊಯ್ಯದಂತೆ ಸೂಚನೆಯನ್ನೂ ನೀಡಿದ್ದರು.
ಪುತ್ತೂರು ಶಾಸಕರ ಗಿಡಗಳ ಮೇಲಿನ ಈ ಪ್ರೀತಿ ದೂರದ ಬೆಳಗಾವಿಗೂ ಪಸರಿಸಿತ್ತು. ಶಾಸಕರಾದ ಬಳಿಕ ಬೆಳಗಾವಿ ಅಧಿವೇಶನದಲ್ಲಿ ಮೊದಲ ಬಾರಿಗೆ ಭಾಗವಹಿಸಿದಾಗ ಅಲ್ಲೊಂದು ಹಲಸಿನ ಗಿಡ ನೆಟ್ಟಿದ್ದರು. ಅಂದು ಅದಕ್ಕೆ ನೀರು, ಗೊಬ್ಬರ ಹಾಕಿ ನೋಡಿಕೊಳ್ಳಿ ಎಂದು ಹೇಳಿ ಬಂದಿದ್ದರು. ಇಂದು ಆ ಗಿಡಕ್ಕೆ ಎರಡರ ಹರೆಯ… ತಾನು ನೆಟ್ಟ ಗಿಡ ಏನಾಗಿದೆ ಎಂದು ನೋಡಲು ಸದನದ ಕಲಾಪದ ವಿರಾಮದ ವೇಳೆ ತೆರಳಿದ್ದಾರೆ. ಗಿಡ ಬದುಕಿದೆ, ದೊಡ್ಡದಾಗಿದೆ ,ಅದಕ್ಕೆ ನೀರು ಗೊಬ್ಬರ ಹಾಕಿ ಅಲ್ಲಿನ ಸಿಬ್ಬಂದಿಗಳು ಪೋಷಣೆ ಮಾಡಿದ್ದನ್ನು ಕಂಡು ತೃಪ್ತರಾದರು. ತಾನೂ ಇವತ್ತು ಅದೇ ಗಿಡಕ್ಕೆ ನೀರು, ಗೊಬ್ಬರ ಹಾಕಿ ಬಂದಿದ್ದೇನೆ ಎಂದು ಗಿಡದ ಬಳಿ ಮಾತನಾಡಿದಂತೆ ಭಾಸವಾಗುವ ರೀತಿಯಲ್ಲಿ ಸಂತೈಸಿ ಬಂದಿದ್ದಾರೆ.










