ಪಡಂಗಡಿ: ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಅ.3ರಂದು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಪಡಂಗಡಿ ಇಲ್ಲಿ ಉದ್ಘಾಟನೆಗೊಂಡಿತು.
ಏಳು ದಿನಗಳ ಕಾಲ ನಡೆಯುವ ಈ ವಾರ್ಷಿಕ ವಿಶೇಷ ಶಿಬಿರವನ್ನು ಕರ್ನಾಟಕ ಸರಕಾರದ ವಿಧಾನ ಪರಿಷತ್ ಶಾಸಕರು ಪ್ರತಾಪ್ ಸಿಂಹ ನಾಯಕ್ ರವರು ಉದ್ಘಾಟಿಸಿ ಮಾತನಾಡಿದ ಅವರು ತಾನು ವಿದ್ಯಾರ್ಥಿಯಾಗಿದ್ದಾಗ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕ ಹಾಗೂ ಶಿಬಿರಾರ್ಥಿಯಾಗಿ ಭಾಗವಹಿಸಿದ ದಿನಗಳನ್ನು ನೆನಪಿಸಿಕೊಂಡರು ಈ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ಗ್ರಾಮೀಣ ಪ್ರದೇಶದ ಜೀವನ ಅನುಭವವನ್ನು ಪಡೆಯಲಿದ್ದಾರೆ . ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಸಂಕಲ್ಪಗಳನ್ನ ಈಡೇರಿಸುವಲ್ಲಿ ಈ ಶಿಬಿರವು ಸಹಕಾರಿಯಾಗಲಿವೆ ಎಂಬ ಮಾತುಗಳೊಂದಿಗೆ ಶಿಬಿರಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪಡಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್ ಜೈನ್ ರವರು ಈ ಶಿಬಿರಕ್ಕೆ ಶುಭವನ್ನು ಹಾರೈಸಿ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಪಡಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮೀನಾಕ್ಷಿ , ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕೆಎಂ ಇಸ್ಮಾಯಿಲ್ ಹಾಗೂ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಕುಮಾರ್ ಎಂ ಡಿ ಮೊದಲದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಮಹಮ್ಮದ್ ಸದಾ ಕತ್ ರವರು ವಹಿಸಿದ್ದರು.
ಸಂಸ್ಕೃತ ವಿಭಾಗದ ಮುಖ್ಯಸ್ಥ ಅಂಬರೀಶ ಚಿಪಳೂಣಕರ್ ಕಾರ್ಯಕ್ರಮವನ್ನು ನಿರೂಪಿಸಿ, ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮ ಅಧಿಕಾರಿ ಹಾಗೂ ಶಿಬಿರ ಅಧಿಕಾರಿ ಶಾಲೆಟ್ ಮೋನಿಸ್ ರವರು ಸ್ವಾಗತಿಸಿದರು. ಸಹ ಶಿಬಿರ ಅಧಿಕಾರಿ ಮೇಘನ ವಂದಿಸಿದರು. ಕಾರ್ಯಕ್ರಮದಲ್ಲಿ ಸಹ ಶಿಬಿರ ಅಧಿಕಾರಿ ಶ್ರೀಧರ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಮಂಜಿತ್ ಹಾಗೂ ಕೀರ್ತನ್ ಪೈಂಜ ಉಪಸ್ಥಿತರಿದ್ದರು.