ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರಕಾರದಿಂದ ಕಟ್ಟುನಿಟ್ಟಿನ ಕ್ರಮ ಜ.7ರಿಂದ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ

0

 

ಜ.5ರ ರಾತ್ರಿ 10 ಗಂಟೆಯಿಂದ ಜ.19ರ ಸಂಜೆ 5 ಗಂಟೆ ತನಕ ಕಟ್ಟುನಿಟ್ಟಿನ ನಿಯಮ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣ ನಿಟ್ಟಿನಲ್ಲಿ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿದ್ದು ಪ್ರಸ್ತುತ ಜಾರಿಯಲ್ಲಿರುವ ನೈಟ್ ಕರ್ಫ್ಯೂ ಜೊತೆಗೆ ಎರಡು ವಾರ ಕಾಲ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ.ಜ.5ರ ರಾತ್ರಿಯಿಂದಲೇ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ 10, 11 ಮತ್ತು 12ನೇ ತರಗತಿ ಹಾಗೂ ಮೆಡಿಕಲ್, ಪ್ಯಾರಾ ಮೆಡಿಕಲ್ ಹೊರತು ಪಡಿಸಿ ಉಳಿದ ಎಲ್ಲಾ ತರಗತಿಗಳನ್ನು ಜ.೬ರಿಂದ ಮುಚ್ಚಲಾಗುತ್ತದೆ. ಉಳಿದ ತರಗತಿಗಳಿಗೆ ಆನ್‌ಲೈನ್ ಕ್ಲಾಸ್ ನಡೆಸುವಂತೆ ಸೂಚನೆಯನ್ನು ನೀಡಲಾಗಿದೆ.ಜನವರಿ ೫ರಿಂದ ರಾತ್ರಿ 10 ಗಂಟೆಯಿಂದಲೇ ಹೊಸ ರೂಲ್ಸ್ ಜಾರಿಗೆ ಬರಲಿದೆ.ಜ.7ರ ರಾತ್ರಿ 10 ಗಂಟೆಯಿಂದ ಜ.10ರ ಸೋಮವಾರ ಬೆಳಿಗ್ಗೆ 5 ಗಂಟೆ ತನಕ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ.ಸದ್ಯ ಜಾರಿಯಲ್ಲಿರುವ ನೈಟ್ ಕರ್ಪ್ಯೂ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಮಾಲ್, ಚಿತ್ರಮಂದಿರ, ಪಬ್, ಬಾರ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಶೇ.೫೦ರಷ್ಟು ಸಾಮರ್ಥ್ಯಕ್ಕೆ ಅನುಮತಿ ನೀಡಲಾಗಿದೆ.
ಮದುವೆಗೆ ೨೦೦ ಮಂದಿ:
ಮದುವೆ ಹೊರಾಂಗಣ 200, ಒಳಾಂಗಣ 100 ಜನರಿಗೆ ಮಾತ್ರವೇ ಅವಕಾಶ ನೀಡಲಾಗಿದೆ. ಎಲ್ಲಾ ಕಡೆಗಳಲ್ಲಿಯೂ ಎರಡು ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಲೇ ಬೇಕು. ಇನ್ನು ಹೊರರಾಜ್ಯದ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಸದ್ಯದ ಈ ನಿಯಮ ಮುಂದಿನ ಹತ್ತು ದಿನಗಳ ಕಾಲ ಜಾರಿಯಲ್ಲಿರಲಿದೆ.
ಸಭೆ, ಸಮಾರಂಭ ರದ್ದು:
ಎಲ್ಲ ಸಂಘ ಸಂಸ್ಥೆಗಳಿಗೆ ಸಮನ್ಸ್ ನೀಡಲಾಗುತ್ತದೆ. ಯಾವುದೇ ಸಭೆ ಮತ್ತು ಸಮಾರಂಭಗಳು ಎರಡು ವಾರಗಳವರೆಗೆ ನಡೆಸಲು ನಿರ್ಬಂಧ ಹೇರಲಾಗಿದೆ.ಸಾರ್ವಜನಿಕ ಸಾರಿಗೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳು ಸಂಬಂಧಿತ ಸಂಸ್ಥೆಗಳಿಂದಲೇ ಪ್ರಕಟಣೆಯಾಗಲಿವೆ. ಯಾವುದೇ ಪ್ರತಿಭಟನೆ, ಮೆರವಣಿಗೆಗೂ ಅವಕಾಶ ನಿರ್ಬಂಧಿಸಲಾಗಿದೆ.ಜಾತ್ರೆ, ಜನಜಂಗುಳಿಗಳಿಗೆ ಅವಕಾಶವಿಲ್ಲ. ಜ.7ರಿಂದ 17ರ ತನಕ ಯಾವುದೇ ಸಭೆ ಸಮಾರಂಭಗಳಲ್ಲಿ ಯಾರೂ ಪಾಲ್ಗೊಳ್ಳಬಾರದು. ಇದು ರಾಜಕೀಯ ಪಕ್ಷಗಳು ಸೇರಿದಂತೆ ಎಲ್ಲರಿಗೂ ಅನ್ವಯಿಸುತ್ತದೆ.
ಹೊಟೇಲ್, ಬಾರ್ ಶೇ.೫೦ ಜನರಿಗೆ ಅವಕಾಶ:
ಪಬ್ಸ್, ಕ್ಲಬ್ಸ್, ಬಾರ್, ಹೊಟೇಲ್‌ಗಳಲ್ಲಿ ಸಾಮರ್ಥ್ಯದ ಶೇ.50 ಜನರಿಗ ಮಾತ್ರ ಅವಕಾಶ. ಕೋವಿಡ್ ನಿಯಮ ಪಾಲನೆ ಕಡ್ಡಾಯವಾಗಿದ್ದು ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ನೀಡಬೇಕು.
ಸರಕಾರಿ ಕಚೇರಿಗಳಲ್ಲಿ 5 ದಿನ ಕೆಲಸ:
ಮುಂದಿನ ಎರಡು ವಾರಗಳ ಕಾಲ ಎಲ್ಲಾ ಸರಕಾರಿ ಕಚೇರಿಗಳು ಸೋಮವಾರದಿಂದ ಶುಕ್ರವಾರ ತನಕ ವಾರದ 5 ದಿನ ಮಾತ್ರ ಕಾರ್ಯನಿರ್ವಹಿಸಲಿವೆ.
ಚಿತ್ರಮಂದಿರ, ಮಾಲ್, ಬಾರ್, ಪಬ್‌ಗಳ ಒಟ್ಟು ಸಾಮರ್ಥ್ಯದ ಅರ್ಧದಷ್ಟು ಜನರಿಗೆ ಮಾತ್ರ ಪ್ರವೇಶ ಇರುತ್ತದೆ. ಇಲ್ಲಿಗೆ ಭೇಟಿ ನೀಡುವವರಿಗೆ ಲಸಿಕೆ ಕಡ್ಡಾಯ ಆಗಿರಲಿದೆ.
ಬಸ್, ರೈಲು ಸೇರಿದಂತೆ ಸಾರ್ವಜನಿಕ ಸಂಚಾರ ಮುಂದುವರಿಯಲಿದೆ. ಈಜು ಕೊಳ ಮತ್ತು ಜಿಮ್‌ಗಳನ್ನು ಶೇ.50 ಸಾಮರ್ಥ್ಯದೊಂದಿಗೆ ನಡೆಸಲು ಅವಕಾಶ ಕಲ್ಪಿಸಲಾಗಿದೆ.ಸ್ಪೋರ್ಟ್ಸ್, ಕಾಂಪ್ಲೆಕ್ಸಸ್ ಮತ್ತು ಸ್ಟೇಡಿಯಂಗಳನ್ನೂ ಶೇ.50 ಸಾಮರ್ಥ್ಯದೊಂದಿಗೆ ಮುಂದುವರಿಸಲು ಅವಕಾಶವಿದೆ. ಎಲ್ಲಾ ಸಾರ್ವಜನಿಕ ಪಾರ್ಕ್‌ಗಳು ಬಂದ್.
ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ.ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಮಿತಿಯ ಸಭೆ ನಡೆಯಿತು.ಸಭೆಯಲ್ಲಿ ಹಿರಿಯ ಸಚಿವರು, ಅಧಿಕಾರಿಗಳು ಭಾಗಿಯಾಗಿದ್ದರು.
ನೆರೆಯ ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿಯೂ ಕೊರೋನಾ ಸ್ಪೋಟವಾಗಿದ್ದು, ದೆಹಲಿ, ಪಶ್ವಿಮಬಂಗಾಲ, ತೆಲಂಗಾಣದಲ್ಲಿಯೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.ಈ ಹಿನ್ನೆಲೆಯಲ್ಲಿ ಮಹತ್ವದ ಸಭೆಯನ್ನು ನಡೆಸಲಾಗಿತ್ತು.ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಸರಕಾರ ಜೊತೆಗೆ ಕೇರಳ, ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಲದಲ್ಲಿ ಈಗಾಗಲೇ ಕೋವಿಡ್ ಹಾಗೂ ಓಮಿಕ್ರಾನ್ ಬಗ್ಗೆ ತೀರ್ಮಾನ ಕೈಗೊಂಡಿದೆ.ಕೋವಿಡ್‌ಗಿಂತ ಓಮಿಕ್ರಾನ್ ಐದು ಪಟ್ಟು ಜಾಸ್ತಿ ಹರಡುತ್ತಿದೆ ಎಂದು ತಜ್ಞರು ವರದಿಯನ್ನು ನೀಡಿದ್ದಾರೆ.ಬೆಂಗಳೂರಲ್ಲಿ ಒಂದೇ ದಿನ 3048 ಕೊರೋನಾ ಪ್ರಕರಣ ದಾಖಲಾಗಿದ್ದು, 147 ಓಮಿಕ್ರಾನ್ ಪ್ರಕರಣ ಜ.4ರಂದು ಒಂದೇ ದಿನ ದಾಖಲಾಗಿದೆ.ಕೊರೋನಾ ಸೋಂಕು ಎರಡರಿಂದ ಮೂರು ದಿನದಲ್ಲಿ ದುಪ್ಪಟ್ಟಾಗುತ್ತಿದೆ.ಐದಾರು ದಿನದಲ್ಲಿ ನಿತ್ಯವೂ ಹತ್ತು ಸಾವಿರ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.20ರಿಂದ 40 ವರ್ಷದವರನ್ನೇ ಹೆಚ್ಚಾಗಿ ಕಾಡುತ್ತಿದೆ.ಈ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಇತರ ಜಿಲ್ಲೆಗಳಿಗೆ ಪ್ರತ್ಯೇಕ ರೂಲ್ಸ್ ಜಾರಿ ಮಾಡಲಾಗುತ್ತಿದೆ.

LEAVE A REPLY

Please enter your comment!
Please enter your name here