- ಸ್ಥಳೀಯರಿಂದ ರಕ್ಷಣೆ – ಆಸ್ಪತ್ರೆಗೆ ದಾಖಲು
ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಸಿಬ್ಬಂದಿಯೊಬ್ಬರು ಡೆತ್ ನೋಟು ಬರೆದಿಟ್ಟು ಬಂಟ್ವಾಳ ನೇತ್ರಾವತಿ ಸೇತುವೆಯ ಬಳಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಬಳಿಕದ ಬೆಳವಣೆಗೆಯಲ್ಲಿ ಆ ವ್ಯಕ್ತಿಯನ್ನು ಕಂಡ ಸ್ಥಳೀಯರು ತಡೆದು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ ಘಟನೆ ನಡೆದಿದೆ.
ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ರಾಜೇಶ್ ಎಂಬವರು ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದಾರೆ. ವಿಟ್ಲದ ಮಂಗಳಪದವು ಎಂಬಲ್ಲಿಯ ವ್ಯಕ್ತಿಯೊಬ್ಬರಿಗೆ ಮನೆ ಮಂಜೂರಾತಿ ವಿಚಾರದಲ್ಲಿ ಪಟ್ಟಣ ಪಂಚಾಯತ್ ಮಾಜಿ ಸದಸ್ಯರೊಬ್ಬರು ರಾಜೇಶ್ ರವರ ಮೇಲೆ ಲಂಚ ಕೇಳಿದ ಆರೋಪ ಹೊರಿಸಿ ಮೇಲಾಧಿಕಾರಿಗಳಿಗೆ ದೂರು ಕೊಡಿಸಿದ್ದರೆನ್ನಲಾಗಿದೆ.
ಜ.20ರಂದು ಬೆಳಿಗ್ಗೆ ರಾಜೇಶ್ ಕೆಲವರಿಗೆ ವಾಟ್ಸಾಪ್ ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿದ್ದು, ನನ್ನ ಬಗ್ಗೆ ಸುಳ್ಳು ಆರೋಪ ಮಾಡಿದ್ದು, ಇದರಿಂದ ಮಾನಸಿಕವಾಗಿ ಮನನೊಂದಿರುತ್ತೇನೆ. ಆದುರಿಂದ ನಾನು ಆತ್ಮಹತ್ಯೆ ಮಾಡುತ್ತೇನೆ ಎಂದು ಸಂದೇಶ ಕಳುಹಿಸಿ ನಾಪತ್ತೆಯಾಗಿದ್ದರೆನ್ನಲಾಗಿದೆ. ಆ ಬಳಿಕ ತನಗಾದ ಅನ್ಯಾಯದ ವಿರುದ್ಧ ಡೆತ್ ನೋಟು ಬರೆದಿಟ್ಟ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವಿಚಾರ ರಾಜೇಶ್ ಸ್ನೇಹಿತರ ಗಮನಕ್ಕೆ ಬಂದಿದ್ದು, ತಕ್ಷಣವೇ ಅವರು ರಾಜೇಶ್ ಗಾಗಿ ಹುಟುಕಾಟ ಪ್ರಾರಂಭಿಸಿದ್ದು, ಆ ವೇಳೆ ಅವರು ನೇತ್ರಾವತಿ ತಟದಲ್ಲಿ ಪತ್ತೆಯಾಗಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.