ಸವಣೂರು: ಬೆಳ್ಳಾರೆ ಪೊಲೀಸ್ ಠಾಣೆಗೆ ನೂತನ ಕಟ್ಟಡ ಮಂಜೂರಾಗಿದೆ. ನೂತನ ಕಟ್ಟಡಕ್ಕೆ ಫೆ.2ರಂದು ಶಿಲಾನ್ಯಾಸ ನೆರವೇರಿಸಲಾಯಿತು. ಭೂಮಿ ಪೂಜೆ ಹಾಗು ವೈದಿಕ ವಿಧಿ ವಿಧಾನಗಳು ನಡೆದ ಬಳಿಕ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ನವೀನ್ಚಂದ್ರ ಜೋಗಿ ಶಿಲಾನ್ಯಾಸ ನೆರವೇರಿಸಿದರು.
ಬೆಳ್ಳಾರೆ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಆಂಜನೇಯ ರೆಡ್ಡಿ,ಎಎಸೈ ಸುಧಾಕರ, ಚಂದ್ರಶೇಖರ್, ಬಾಲಕೃಷ್ಣ ದೇವರಾಜ್ , ಪೊಲೀಸ್ ಗೃಹ ನಿರ್ಮಾಣ ಮಂಡಳಿಯ ಕಾಳಿದಾಸ್ ಮೊದಲಾದವರಿದ್ದರು.
ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಮೀಪದಲ್ಲಿರುವ ಪೊಲೀಸ್ ಇಲಾಖೆಯ ಸ್ಥಳದಲ್ಲಿ 1.05 ಕೋಟಿ ರೂ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಆಗಲಿದೆ. ಇಲ್ಲಿ ಪೊಲೀಸ್ ಇಲಾಖೆಗೆ 70 ಸೆಂಟ್ಸ್ ಜಾಗ ಮೀಸಲಿರಿಸಲಾಗಿದೆ. ಪೊಲೀಸ್ ಗೃಹ ನಿರ್ಮಾಣ ಮಂಡಳಿ ನೂತನ ಪೊಲೀಸ್ ಠಾಣೆಯ ನಿರ್ಮಾಣ ಕಾರ್ಯ ನಡೆಸುತ್ತಿದೆ.
ಬೆಳ್ಳಾರೆಯು ಈ ಹಿಂದೆ ಸುಳ್ಯ ಠಾಣೆಯ ಹೊರಠಾಣೆಯಾಗಿತ್ತು 2016 ಆ.15 ರಿಂದ ಪೂರ್ಣ ಪ್ರಮಾಣದ ಪೊಲೀಸ್ ಠಾಣೆ ಕಾರ್ಯಾರಂಭ ಮಾಡಿತ್ತು. ಮೊದಲ ಎಸೈ ಆಗಿ ಎಂ.ವಿ.ಚೆಲುವಯ್ಯ,ನಂತರ ಡಿ.ಎನ್.ಈರಯ್ಯ ಅವರು ಕರ್ತವ್ಯ ನಿರ್ವಹಿಸಿದ್ದರು.ಪ್ರಸ್ತುತ ಆಂಜನೇಯ ರೆಡ್ಡಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.