ಪುತ್ತೂರು: ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದ ವಿದ್ಯಾರ್ಥಿನಿಯನ್ನು ಕ್ಷಣ ಮಾತ್ರದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಕಾಪಾಡಿದ ವ್ಯಕ್ತಿಗೆ ಒಂದು ವರ್ಷದ ಬಳಿಕ ಅಭಿನಂದನೆ ಸಲ್ಲಿಸುವ ಮೂಲಕ ಮಾನವೀಯ ಸೇವೆಗೆ ಸೆಲ್ಯೂಟ್ ಹೊಡೆದಿದ್ದಾರೆ.
2021 ಮಾರ್ಚ್ 31 ರಂದು ಪುತ್ತೂರಿನ ಚೇತನ ಸ್ಟುಡಿಯೋ ಮಾಲಕರಾದ ಅಶೋಕ್ ಕುಂಬ್ಲೆ ಕುಟುಂಬದವರು ತೆರಳುತ್ತಿದ್ದ ಕಾರು ಸುಳ್ಯ ಸಮೀಪದ ಆನೆಗುಂಡಿಯಲ್ಲಿ ಅಪಘಾತವುಂಟಾಗಿತ್ತು. ಚಾಲಕನ ನಿಯಂತ್ರಣ ತಪ್ಪಿದ ಕಾರು ಧರೆಗೆ ಡಿಕ್ಕಿ ಹೊಡೆದಿತ್ತು. ಕಾರಿನಲ್ಲಿದ್ದ ಒಂದಿಬ್ಬರಿಗೆ ಗಾಯವಾಗಿತ್ತು. ಆದರೆ ಅಶೋಕ್ ಕುಂಬ್ಲೆಯವರ ಪುತ್ರಿ ಆಶ್ರಯರವರಿಗೆ ಗಂಭೀರ ಏಟಾಗಿತ್ತು. ತಕ್ಷಣ ಅವರನ್ನು ಕುಂಬ್ರದ ಉದ್ಯಮಿ ನಾಸಿರುದ್ದೀನ್ ಎಂಬವರು ತನ್ನ ಸ್ನೇಹಿತ ಸಂಶುದ್ದೀನ್ ಕುಂಬ್ರ ಅವರ ಜೊತೆ ಬಾಲಕಿಯನ್ನು ಕಾರಿನಲ್ಲಿ ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಿ ಬಳಿಕ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತ ಕಾರಣ ಬಾಲಕಿ ಚೇತರಿಸಿಕೊಂಡಿದ್ದಳು. ಘಟನೆ ನಡೆದು ಒಂದು ವರ್ಷ ಕಳೆದಿದ್ದು ಗಾಯಗೊಂಡಿದ್ದ ವಿದ್ಯಾರ್ಥಿನಿ ಮತ್ತು ಅವರ ತಂದೆ ಅಶೋಕ್ ಕುಂಬ್ಲೆಯವರು ನಾಸಿರುದ್ದೀನ್ ಅವರ ಸುಳ್ಯದಲ್ಲಿರುವ ಮನೆಗೆ ತೆರಳಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಾಲಕಿ ತಂದೆ ಮಾನವೀಯ ಸೇವೆಗೆ ಬೆಲೆ ಕಟ್ಟಲು ಸಾದ್ಯವಿಲ್ಲ. ತನ್ನ ಪುತ್ರಿಯ ಪ್ರಾಣ ರಕ್ಷಿಸಿದ ನಾಸಿರುದ್ದೀನ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದೇವೆ ಅವರ ಸೇವೆಯನ್ನು ಮರೆಯಲು ಸಾದ್ಯವಿಲ್ಲ ಎಂದು ಹೇಳಿದ್ದಾರೆ.
ನಾನು ಸುಳ್ಯಕ್ಕೆ ಹೋಗುತ್ತಿರುವಾಗ ಈ ಅಪಘಾತ ನಡೆದಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯ ಜೀವದ ಆಸೆ ಬಿಟ್ಟಿದ್ದರು ಆದರೆ ನಾನು ಮತ್ತು ಸಂಶುದ್ದೀನ್ ತಕ್ಷಣ ನನ್ನ ಕಾರಿನಲ್ಲಿ ಹಾಕಿ ಆಸ್ಪತ್ರೆಗೆ ಕರೆದೊಕೊಂಡು ಬಂದೆವು, ಆಸ್ಪತ್ರೆಯಲ್ಲಿ ಸಲಾಮುದ್ದೀನ್ ಕುಂಬ್ರ ಅವರು ಅಲ್ಲಿಗೆ ತಲುಪುವ ಮೊದಲೇ ತುರ್ತು ಚಿಕಿತ್ಸೆಯ ವ್ಯವಸ್ಥೆಯನ್ನು ಆಸ್ಪತ್ರೆಯವರಿಗೆ ಹೇಳಿ ಮಾಡಿಸಿದ್ದರು. ಎಲ್ಲರ ಪ್ರಯತ್ನದಿಂದ ಬಾಲಕಿಯ ಪ್ರಾಣ ಉಳಿಯಿತು. ನಾವು ನಮ್ಮ ಕರ್ತವ್ಯವನ್ನು ಮಾಡಿದ್ದೇವೆ, ಮಾನವೀಯತೆಗೆ ಜಾತಿ ಧರ್ಮದ ಬೇದವಿಲ್ಲ – ನಾಸಿರುದ್ದೀನ್ ಕುಂಬ್ರ