ಕಳೆದ 15ವರ್ಷಗಳಿಂದ ತೊಡಕಾಗಿದ್ದ ಸುಳ್ಯದ ತ್ಯಾಜ್ಯ ವಿಲೇವಾರಿ ಘಟಕದ ಜಾಗದ ಸಮಸ್ಯೆಗೆ ಅಂತಿಮ ಪರಿಹಾರ ಲಭ್ಯವಾಗಲಿದೆ.
ಅಲೆಟ್ಟಿ ಗ್ರಾಮದ ಕಲ್ಚರ್ಪೆಯಲ್ಲಿ 2008ರಲ್ಲಿ ಸುಳ್ಯ ನಗರದ ಘನತ್ಯಾಜ್ಯ ಘಟಕಕ್ಕೆ 3.00ಎಕ್ರೆ ಸ್ಥಳವನ್ನು ಕಾದಿರಿಸಲಾಗಿತ್ತು. ಅಲ್ಲಿಂದ ಬಳಿಕ ಕಲ್ಚರ್ಪೆ ತ್ಯಾಜ್ಯ ವಿಲೇವಾರಿ ಘಟಕವು ಅನೇಕ ಕಾರಣಗಳಿಂದ ವಿವಾದಗ್ರಸ್ತವಾಗಿತ್ತು. ಮೊದಲಿಗೆ ಹತ್ತಿರದ ನಿವಾಸಿಗಳು ಹಾಗೂ ಫೆರಾಜೆ ಗ್ರಾಮ ಪಂಚಾಯತ್ ನ ನಿವಾಸಿಗಳು ಕಲ್ಚರ್ಪೆಯಲ್ಲಿ ಕಸ ಹಾಕುವುದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿ ನ್ಯಾಯಾಲಯಕ್ಕೂ ಕೂಡ ಹೋಗಿದ್ದರು. ಜೊತೆಗೆ ಈ ಜಾಗದ ಕುರಿತು ಅರಣ್ಯ ಇಲಾಖೆಯು ತಕರಾರರು ಎತ್ತಿದ್ದು ನಗರ ಪಂಚಾಯತ್ಗೆ ಕೇವಲ ಒಂದು ಎಕರೆಯಷ್ಟು ಸ್ಥಳವು ಮಾತ್ರ ವಶದಲ್ಲಿದ್ದು ಕಸವನ್ನು ಡಂಪ್ ಮಾಡಿದ ಕಾರಣದಿಂದಾಗಿ ಸ್ಥಳೀಯ ನಿವಾಸಿಗಳ ಪ್ರತಿಭಟನೆಯಿಂದಾಗಿ ನಗರ ಪಂಚಾಯತ್ ನ ಕಸವಿಲೆವಾರಿಗೆ ಸ್ಥಳವೇ ಇಲ್ಲದ ಸ್ಥಿತಿ ನಿರ್ಮಾಣವಾಗಿತ್ತು.
ಇದರಿಂದಾಗಿ ಇದೀಗ ಸುಳ್ಯ ನಗರ ಪಂಚಾಯಿತಿಗೆ ತ್ಯಾಜ್ಯ ನಿರ್ವಹಣೆಗೆ ಸಂಬಂಧಪಟ್ಟ ದೊಡ್ಡ ತೊಡಕೊಂದು ನಿವಾರಣೆಯಾದಂತಾಗಿದೆ. ಕಲ್ಚರ್ಪೆಯಲ್ಲಿ ಪೂರ್ಣ ಮೂರೂ ಎಕರೆ ಸ್ಥಳವನ್ನು ಬಳಸಿಕೊಂಡು ವ್ಯವಸ್ಥಿತವಾದಂತಹ ತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಾಪಿಸಲು ನಗರ ಪಂಚಾಯಿತಿಗೆ ಅವಕಾಶ ಲಭಿಸಲಿದೆ. ಈ ದಿನ ಆನ್ಲೈನ್ ಮುಖಾಂತರ ನಡೆದಂತಹ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸತಹ ಭಾಗವಹಿಸಿ ಈ ಜಾಗವನ್ನು ನಗರ ಪಂಚಾಯಿತಿಗೆ ನೀಡಬೇಕಾದ ಅವಶ್ಯಕತೆಯನ್ನು ವಿಭಾಗಿಯ ಸಮಿತಿಗೆ ಮನದಟ್ಟು ಮಾಡುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ನಗರ ಯೋಜನಾ ನಿರ್ದೇಶಕರಾದ ಅಭಿಷೇಕ್, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಮುಖ್ಯ ಅಧಿಕಾರಿ ಸುಧಾಕರ್ ರವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆನ್ಲೈನ್ ಸಭೆಯಲ್ಲಿ ಭಾಗವಹಿಸಿದ್ದರು.
ಸುಳ್ಯ ನಗರ ಪಂಚಾಯಿತಿನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೇಕಾದ ಸ್ಥಳವನ್ನು ಮಾಡಿಕೊಡುವಲ್ಲಿ ಶ್ರಮವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ನ.ಪಂ
ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ತಿಳಿಸಿದ್ದಾರೆ.