ರಾಷ್ಟ್ರೀಯ ಸೇವಾ ಯೋಜನೆಯೆಂಬುವುದು ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರಲ್ಲಿಯೂ ನಾಯಕತ್ವ ಗುಣವನ್ನು ಬೆಳೆಸುತ್ತದೆ ಮತ್ತು ಸಾಮಾಜಿಕ ಕಾರ್ಯ, ದೇಶ ಸೇವೆ ಮತ್ತು ಸಮಾಜಮುಖಿ ಚಿಂತನೆಗಳಲ್ಲಿ ಬದುಕುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತದೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷರಾದ ಡಾ| ರೇಣುಕಾ ಪ್ರಸಾದ್ ಕೆ.ವಿ.ಯವರು ಅಭಿಮತ ವ್ಯಕ್ತ ಪಡಿಸಿದರು.
ಒಬ್ಬ ಎನ್.ಎಸ್.ಎಸ್ ವಿದ್ಯಾರ್ಥಿಯು ಸಮಾಜದಲ್ಲಿ ಗುರುತಿಸಿಕೊಳ್ಳುವ ರೀತಿ ಮತ್ತು ಅಳವಡಿಸಿಕೊಂಡ ಮಾನವೀಯ ಮೌಲ್ಯಗಳು ಉಳಿದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿರುತ್ತದೆ. ಆಧುನಿಕತೆಯ ಸ್ಪರ್ಶಕ್ಕೆ ಸ್ಮಾರ್ಟ್ ಕ್ಲಾಸ್ ಎನ್ನುವ ಕೊಡುಗೆಗಳನ್ನು ನೀಡುವ ಮೂಲಕ ಈ ಶಾಲೆಯು ನಗರ ಪ್ರದೇಶದ ಇತರ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಅಭಿವೃದ್ಧಿ ಹೊಂದಿದೆ. ಈ ಚಿಂತನೆಗಳಿಗೆ ರೂಪ ಕೊಟ್ಟ ಎನ್.ಎಸ್.ಎಸ್. ಸೇವಾ ಸಂಗಮದ ಎಲ್ಲಾ ಪದಾಧಿಕಾರಿಗಳು ಅಭಿನಂದನೆಗೆ ಅರ್ಹರು. ಮುಂದೆಯು ನಿಮ್ಮ ಸಮಾಜಮುಖಿ ಕಾರ್ಯಗಳು ಇನ್ನಷ್ಟು ಮುಂದುವರಿಯಲಿ ಎಂದು ಶುಭ ಹಾರೈಸಿದರು.
ವೇದಿಕೆಯಲಿದ್ದ ಇನ್ನೊರ್ವ ಮುಖ್ಯ ಅತಿಥಿ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಉಜ್ವಲ್ ಊರುಬೈಲುರವರು ಮಾತನಾಡಿ ನಮ್ಮ ಸಂಸ್ಥೆಯಲ್ಲಿರುವ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸ್ಮಾರ್ಟ್ ಕ್ಲಾಸ್ ಬಗ್ಗೆ ತರಭೇತಿ ನೀಡಲು ಮತ್ತು ಈ ಶಾಲೆಯ ಅಭಿವೃದ್ಧಿಗೆ ಸರ್ವ ರೀತಿಯ ಸಹಕಾರ ನೀಡುವುದಾಗಿ ಭರವಸೆ ಕೊಟ್ಟು ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದರು. ವೇದಿಕೆಯಲ್ಲಿ ಕುಸುಮಾ ಯೋಗೇಶ್ವರ್, ಎನ್. ಆರ್. ಗಣೇಶ್, ರಾಮಚಂದ್ರ ಗೌಡ ಪಲ್ಲತ್ತಡ್ಕ , ಮಾಧವ ಬಿ.ಟಿ, ಪಾಲಚಂದ್ರ ವೈ.ವಿ, ಶಿವರಾಮ ಕೆ, ರೇಖಾ ಯು.ಎಸ್. ಉಪಸ್ಥಿತರಿದ್ದರು.