ಉಪ್ಪಿನಂಗಡಿ: ಟೂರಿಸ್ಟ್ ಟೆಂಪೋ ಹಾಗೂ ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾಗಿ ದ್ವಿಚಕ್ರ ಸವಾರ ಗಂಭೀರ ಗಾಯಗೊಂಡ ಘಟನೆ ಕರ್ವೇಲ್ ಸಮೀಪದ ಹನಂಗೂರು ಎಂಬಲ್ಲಿ ನಡೆದಿದೆ.
ಹಿರೇಬಂಡಾಡಿ ಗ್ರಾಮದ ಹರಿನಗರ ನಿವಾಸಿ ದಿವಾಕರ (೨೫ ವ.) ಗಂಭೀರ ಗಾಯಗೊಂಡ ದ್ವಿಚಕ್ರ ಸವಾರ. ಉಪ್ಪಿನಂಗಡಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಹೋಗುತ್ತಿದ್ದ ಟೂರಿಸ್ಟ್ ಟೆಂಪೋ ಹಾಗೂ ಕರ್ವೇಲ್ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಟೂರಿಸ್ಟ್ ಟೆಂಪೋ ಕೈಕಂಬ ಕಡೆಯಿಂದ, ೩೪ ನೆಕ್ಕಿಲಾಡಿ ಗ್ರಾಮದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದಕ್ಕೆ ಜನರನ್ನು ಕರೆದುಕೊಂಡು ಬಂದು ವಾಪಸ್ ಹಿಂದಿರುಗುವಾಗ ಈ ದುರ್ಘಟನೆ ನಡೆದಿದೆ.
ಘಟನೆಯಿಂದ ದಿವಾಕರ ಅವರ ತಲೆಗೆ ಗಾಯವಾಗಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಗೊಂಡ ದ್ವಿಚಕ್ರ ವಾಹನ ಹೊಸದಾಗಿದ್ದು, ಇನ್ನೂ ನೋಂದಣಿ ಸಂಖ್ಯೆ ಆಗಿಲ್ಲ. ಅಪಘಾತದಿಂದ ದ್ವಿಚಕ್ರ ವಾಹನ ಸಂಪೂರ್ಣ ಜಖಂಗೊಂಡಿದೆ.