ಪುತ್ತೂರು: ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಮಿತ್ತಳಿಕೆ ಮಲರಾಯ ಧರ್ಮಚಾವಡಿಯಲ್ಲಿ ಜ್ಯೋತಿಷಿ ವಳಕುಂಜ ವೆಂಕಟ್ರಮಣ ಭಟ್ ಹಾಗೂ ಜ್ಯೋತಿಷಿ ಶಂಭೂರು ಸದಾನಂದ ಕಾರಂತರ ಪ್ರಶ್ನೆ ಚಿಂತನೆಯ ಪ್ರಕಾರ ವಾಸ್ತುಶಿಲ್ಪಿ ಬೆದ್ರಡ್ಕ ರಮೇಶ ಕಾರಂತರ ಮಾರ್ಗದರ್ಶನದಲ್ಲಿ ಸೀಮೆಯ ತಂತ್ರಿಗಳಾದ ಕುಂಟುಕುಡೇಲು ರಘುರಾಮ ತಂತ್ರಿಗಳ ಪೌರೋಹಿತ್ಯದಲ್ಲಿ ವಿಟ್ಲ ಸೀಮೆಯ ಅರಸರ ಮತ್ತು ಸೀಮೆಯ ಗುರಿಕಾರರ ನೇತೃತ್ವದಲ್ಲಿ ಮಿತ್ತಳಿಕೆ ಮಲರಾಯ ಧರ್ಮಚಾವಡಿ ಮನೆಯಲ್ಲಿ `ಬ್ರಹ್ಮಕಲಶ, ಪುನರ್ ನಿರ್ಮಿತ ಮನೆಯ ಗೃಹಪ್ರವೇಶ ಮತ್ತು ಶ್ರೀ ಮಲರಾಯ ದೈವದ ನೂತನ ಉಯ್ಯಾಲೆಯ ಪುನರ್ ಪ್ರತಿಷ್ಠೆ ಹಾಗೂ ಧರ್ಮನೇಮ’ವು ಮಾ.24 ರಿಂದ 26ರ ತನಕ ನಡೆಯಲಿರುವುದು.
ಶುಕ್ರವಾರ ಬೆಳಿಗ್ಗೆ ಗಣಹೋಮ, ಕಲಶಾಧಿವಾಸ ಹೋಮ, ಪ್ರಾಯಶ್ಚಿತ ಹೋಮ, ಬ್ರಹ್ಮಕಲಶ ಪೂಜೆ, ಪ್ರಾಯಾಶ್ಚಿತ್ತ ಕಲಶ ಪೂಜೆ ಬಳಿಕ ವೃಷಭ ಲಗ್ನ ಸುಮೂಹರ್ತಕ್ಕೆ ಮಲರಾಯ ಉಯ್ಯಾಲೆಯ ಪುನರ್ ಪ್ರತಿಷ್ಠೆ, ಕಲಶ ಪೂಜೆ, ಮಿಥುನ ಲಗ್ನ ಸುಮೂಹೂರ್ತದಲ್ಲಿ ನೂತನ ಗೃಹ ಪ್ರವೇಶ, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ವೆಂಕಟರಮಣ ದೇವರ ಪೂಜೆ, ಮಲರಾಯ ಧರ್ಮಚಾವಡಿಯಲ್ಲಿ ಬ್ರಹ್ಮಕಲಶಾಭಿಷೇಕ, ಪೂಜಾ ತಂಬಿಲ, ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಸಭಾ ಕಾರ್ಯಕ್ರಮ ಜರಗಲಿದ್ದು, ವಿಟ್ಲ ಅರಮನೆ ಬಂಗಾರು ಅರಸರು ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಪುತ್ತೂರು ಶಾಸಕ ಸಂಜೀವ ಮಠಂದೂರು, ಬಂಟ್ವಾಳ ತಾಲೂಕು ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ, ಮಾಜಿ ಸಚಿವ ರಮಾನಾಥ ರೈ ಬೆಳ್ಳಿಪ್ಪಾಡಿ, ವಿಟ್ಲ ಕ್ಷೇತ್ರದ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಅಳಿಕೆ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ್ ಭಟ್, ಕೇಪು ಸುಬ್ರಾಯ ದೇವಸ್ಥಾನದ ಪ್ರಧಾನ ಅರ್ಚಕ ಸೂರ್ಯನಾರಾಯಣ ಕೇಕುಣ್ಣಾಯರವರು ಭಾಗವಹಿಸಲಿದ್ದಾರೆ.
ಶನಿವಾರ ಬೆಳಿಗ್ಗೆ ಕೇಪು ಶ್ರೀ ಮಲರಾಯ ದೈವಸ್ಥಾನದಿಂದ ಭಂಡಾರ ಹೊರಡುವುದು, ಮಲರಾಯ ದೈವದ ಧರ್ಮನೇಮ, ಸಂಜೆ ಕೇಪು ಶ್ರೀ ಮಲರಾಯ ದೈವಸ್ಥಾನಕ್ಕೆ ಭಂಡಾರ ಹಿಂತಿರುಗುವುದು, ನೆಕ್ಕಿತ್ತ ಪುಣಿಯಿಂದ ಭಂಡಾರ ಹೊರಡುವುದು, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ದೈವಗಳಿಗೆ ನೇಮ, ಕೊರಗ ತನಿಯ, ಗುಳಿಗ ಕೋಲ ನಡೆಯಲಿದೆ. ಮಧ್ಯಾಹ್ನ ಹಾಗೂ ರಾತ್ರಿ ಭಕ್ತರಿಗೆ ಅನ್ನಸಂತರ್ಪಣೆ ಜರಗಲಿದೆ. ಈ ಪುಣ್ಯ ಕಾರ್ಯದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಿ ದೈವಾನುಗ್ರಹಕ್ಕೆ ಪಾತ್ರರಾಗಬೇಕೆಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮಿತ್ತಳಿಕೆ ಯಜಮಾನ್ ಸಂಕಪ್ಪ ಶೇಖ, ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಐತ್ತಪ್ಪ ಆಳ್ವ ಕಡಂಬು, ಕಾರ್ಯಾಧ್ಯಕ್ಷರಾದ ಮಿತ್ತಳಿಕೆ ದಯಾನಂದ ಆಳ್ವ ಕಡಂಬು ಹಾಗೂ ಮಿತ್ತಳಿಕೆ ಜಗನ್ನಾಥ ಆಳ್ವ ಬೆಂಗಳೂರು, ಪ್ರಧಾನ ಕಾರ್ಯದರ್ಶಿ ಮಿತ್ತಳಿಕೆ ಸೂರ್ಯನಾಥ ಆಳ್ವ ಪುತ್ತೂರು, ಕಾರ್ಯದರ್ಶಿ ಗೋಳ್ತಮಜಲು ಗಣೇಶ್ ಶೆಟ್ಟಿ, ಕೋಶಾಧಿಕಾರಿ ಮಿತ್ತಳಿಕೆ ವಿಜಯಶಂಕರ ಆಳ್ವ ಹಾಗೂ ಮಿತ್ತಳಿಕೆ ಕುಟುಂಬಿಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ
ಗುರುವಾರ ಶ್ರೀ ಕ್ಷೇತ್ರದಲ್ಲಿ ಸಂಜೆ ಸೀಮೆಯ ತಂತ್ರಿಗಳಾದ ಕುಂಟುಕುಡೇಲು ರಘುರಾಮ ತಂತ್ರಿಗಳ ಆಗಮನ ಹಾಗೂ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ದೊರೆತಿದೆ. ಸಂಜೆ ಶಿಲ್ಪಿ, ಮೇಸ್ತ್ರಿ, ಆಚಾರಿಗಳಿಂದ ನೂತನ ಧರ್ಮಚಾವಡಿ ಹಾಗೂ ಶ್ರೀ ಮಲರಾಯನ ಉಯ್ಯಾಲೆಯ ಪರಿಗ್ರಹ ಕಾರ್ಯಕ್ರಮ, ಬಳಿಕ ಸ್ಥಳ ಶುದ್ಧಿ, ಖನನಾದಿ ಪಂಚಕವ್ಯಾಧಿ ಸಪ್ತಶುದ್ಧಿ, ಪ್ರಸಾದ ಶುದ್ಧಿ, ವಾಸ್ತುಪೂಜೆ, ವಾಸ್ತುಬಲಿ, ರಕ್ಷೆಘ್ನ ಹೋಮ, ಅಸ್ತ್ರ ಕಲಶ ಪೂಜೆ, ನೂತನ ಉಯ್ಯಾಲೆ ಶುದ್ಧಿ ಕಾರ್ಯಗಳು, ಉಯ್ಯಾಲೆ ದ್ಯಾನಾಧಿವಾಸ ಕ್ರಿಯೆಗಳು, ಪ್ರಾಕಾರ ಬಲಿ ಇತ್ಯಾದಿ ಕಾರ್ಯಗಳು ನಡೆದವು.
ಮನರಂಜನೆ
ಶುಕ್ರವಾರ ಮಧ್ಯಾಹ್ನ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ `ಗೀತಾ ಸಾಹಿತ್ಯ ಸಂಭ್ರಮ’, ಸಂಜೆ ಮಿತ್ತಳಿಕೆ ಮನೆಯವರಿಂದ ವಿವಿಧ ವಿನೋದಾವಳಿಗಳು ಬಳಿಕ ಡಾ|ನಂದಕಿಶೋರ ಆಳ್ವರ ನೇತೃತ್ವದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಿಂದ `ಯಕ್ಷಗಾನ ಬಯಲಾಟ’ ಜರಗಲಿರುವುದು.