- ಸದಾಸ್ಮಿತ ಟ್ರಸ್ಟ್ ನಿಂದ ಶಾಲೆಗೆ ಕಂಪ್ಯೂಟರ್ ಕೊಡುಗೆ
ಪುತ್ತೂರು: ಸದಾಸ್ಮಿತ ಟ್ರಸ್ಟ್ ನ ವತಿಯಿಂದ ಬೆಳ್ಳಿಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಡುಗೆಯಾಗಿ ನೀಡಿದ ಎಂಟು ಕಂಪ್ಯೂಟರ್ ಗಳ ಉದ್ಘಾಟನೆಯು ಎ.2ರಂದು ನೆರವೇರಿತು.
ಕೇಂದ್ರದ ಮಾಜಿ ಸಚಿವರು, ಸದಾಸ್ಮಿತ ಟ್ರಸ್ಟ್ ನ ಸಲಹೆಗಾರರೂ ಆಗಿರುವ ಡಿ.ವಿ ಸದಾನಂದ ಗೌಡ ನೂತನ ಕಂಪ್ಯೂಟರ್ ನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳಲ್ಲಿರುವ ತಳಮಟ್ಟದ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಪಡೆಯಬೇಕು. ಅವರಿಗೂ ಪ್ರಾಥಮಿಕ ಹಂತದಲ್ಲಿಯೂ ತಾಂತ್ರಿಕ ಶಿಕ್ಷಣಗಳು ದೊರೆಯಬೇಕು ಎನ್ನುವ ಉದ್ದೇಶದಿಂದ ಶಾಲೆಗಳಿಗೆ ಟ್ರಸ್ಟ್ ನಿಂದ ಕಂಪ್ಯೂಟರ್ ನೀಡಲಾಗುತ್ತಿದೆ. ನನ್ನ ಲೋಕಸಭಾ ಕ್ಷೇತ್ರದಲ್ಲಿ ಸುಮಾರು ಆರುನೂರು ಕಂಪ್ಯೂಟರ್ ವಿತರಿಸಲಾಗಿದೆ. ಈ ಭಾಗದ ನಾಯಕರ ಬೇಡಿಕೆಯಂತೆ ಈ ಶಾಲೆಗೂ ಎಂಟು ಕಂಪ್ಯೂಟರ್ ನೀಡಲಾಗಿದೆ. ಇವುಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಬೆಳ್ಳಿಪ್ಪಾಡಿ ಶಾಲೆಯ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣದಲ್ಲಿ ಎಲ್ಲರಿಗೂ ಮಾದರಿಯಾಗಿರಬೇಕು. ಸಮರ್ಪಕವಾಗಿ ಸದ್ವಿಯೋಗವಾದರೆ ಇನ್ನೂ ಐದು ಕಂಪ್ಯೂಟರ್ ಗಳನ್ನು ನೀಡಲಾಗುವುದು ಎಂದ ಅವರು ಕಂಪ್ಯೂಟರ್ ಶಿಕ್ಷಣಕ್ಕೆ ಅಗತ್ಯವಾದ ಟೇಬಲ್ ಮತ್ತು ಚೆಯರ್ ಗಳನ್ನು ಸ್ಥಳೀಯರು, ದಾನಿಗಳು ನೀಡಿ ಸಹಕರಿಸುವಂತೆ ಅವರು ತಿಳಿಸಿದರು.
ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಉದ್ಯಮಿ ಆಶೋಕ್ ಕುಮಾರ್ ರೈ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ತಾ.ಪಂ ಮಾಜಿ ಸದಸ್ಯರಾದ ನೇತ್ರಾವತಿ ಕೆ.ಪಿ ಗೌಡ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಕೋಡಿಂಬಾಡಿ ಗ್ರಾ.ಪಂ ಅಧ್ಯಕ್ಷ ರಾಮಚಂದ್ರ ಪೂಜಾರಿ ಶಾಂತಿನಗರ, ಸದಸ್ಯರಾದ ರಾಮಣ್ಣ ಗೌಡ ಗುಂಡೋಲೆ, ಮೋಹಿನಿ, ಮಾಜಿ ಉಪಾಧ್ಯಕ್ಷ ಮೋಹನ ಪಕ್ಕಳ ಕುಂಡಾಪು, ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಬಾಳಪ್ಪ ಗೌಡ ಮಳುವೇಲು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಯಶೋಧ ಎಂ. ಸ್ವಾಗತಿಸಿದರು. ಎಸ್.ಡಿ.ಎಂಸಿ ಅಧ್ಯಕ್ಷೆ ಭವ್ಯ ಶೆಟ್ಟಿ ವಂದಿಸಿದರು.