- ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಲಂಚ, ಭ್ರಷ್ಟಾಚಾರ ಕಡಿಮೆಯಾಗುತ್ತಿದೆ ?
- ಯಾಕೆಂದರೆ ಜನರು ಎಚ್ಚರಗೊಂಡಿದ್ದಾರೆ, ದಂಡ ಪ್ರಯೋಗಕ್ಕೆ ಸಿದ್ಧರಾಗಿದ್ದಾರೆ
ಈ ಮೇಲಿನ ಜನಾಂದೋಲನ ಯಶಸ್ವಿ ಯಾಗಲು ಜನರು ಬಹಳ ಸರಳವಾದ ಹೆಚ್ಚು ಶ್ರಮವಿಲ್ಲದ, ಖರ್ಚಿಲ್ಲದ ಕೆಲಸ ಮಾಡಬೇಕಾಗಿದೆ. ಗ್ರಾಮದಲ್ಲಿಯ ಪ್ರತಿಯೊಂದು ಮನೆಯ ಓರ್ವ ಸದಸ್ಯನಂತೆ ಊರಿನ ಎಲ್ಲಾ ಮನೆಯವರು ಸೇರಿ ಲಂಚ, ಭ್ರಷ್ಟಾಚಾರದ ನಿವಾರಣೆಗೆ ಊರಿನ ಅಭಿವೃದ್ಧಿ ಬಗ್ಗೆ ಗ್ರಾಮದಲ್ಲಿಯೇ ಸಭೆ ನಡೆಸಬೇಕಾಗಿದೆ. ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಅಥವಾ 3 ರಿಂದ5 ಗಂಟೆಯವರೆಗೆ ನಡೆಯುವ ಸಭೆಯಲ್ಲಿ ಊರಿನಲ್ಲಿ ಈಗ ಇರುವ ಎಲ್ಲರ ಸಮಸ್ಯೆಗಳನ್ನು, ಬೇಡಿಕೆಗಳನ್ನು ಎತ್ತಿಕೊಂಡು ಅದರ ಪಟ್ಟಿ ಮಾಡಬೇಕು. ಅದನ್ನು ವಿವರಗಳೊಂದಿಗೆ ಸುದ್ದಿ ಜನಾಂದೋಲನ ವೇದಿಕೆಗೆ ನೀಡಿದರೆ ಆ ಪಟ್ಟಿಯನ್ನು ಸಂಬಂಧಪಟ್ಟ ಇಲಾಖೆಗಳಿಗೆ, ಜನಪ್ರತಿನಿಧಿಗಳಿಗೆ, ಮಂತ್ರಿಗಳಿಗೆ ನೀಡಿ ಅದಕ್ಕೆ ಸರಿಯಾದ ಉತ್ತರವನ್ನು ಪಡೆದು, ಊರಿನ ಜನರಿಗೆ ನೀಡಲಾಗುವುದು. ಆ ರೀತಿ ಮಾಡುವುದರಿಂದ ಊರಿನ ಎಲ್ಲಾ ಜನರು ಒಗ್ಗಟ್ಟಾಗಿ ಸಮಸ್ಯೆಯನ್ನು, ಲಂಚ, ಭ್ರಷ್ಟಾಚಾರವನ್ನು ಎದುರಿಸುವುದಲ್ಲದೆ ಒಗ್ಗಟ್ಟಾಗಿ ಪರಿಹಾರಕ್ಕೆ ಪ್ರಯತ್ನಿಸುವಂತೆ ಮಾಡಲಾಗುವುದು.
ಅಂದಿನ ಸಭೆಯಲ್ಲಿ ಯಾವುದೇ, ಪಕ್ಷದ, ಧರ್ಮದ, ಜಾತಿಯ ವಿಷಯ ಬಾರದೆ ಊರಿನ ಅಭಿವೃದ್ಧಿ, ಮತ್ತು ಸಮಸ್ಯೆಗಳ ಬಗ್ಗೆ ಮಾತ್ರ ಚರ್ಚಿಸಲಾಗುವುದು. ಸಭೆಯ ಎಲ್ಲಾ ಕಾರ್ಯಕ್ರಮಗಳನ್ನು ದಾಖಲಿಸಿ ನೇರಪ್ರಸಾರ ಮಾಡುವುದರಿಂದ ಅದರ ದಾಖಲಾತಿಗಳು ಶಾಶ್ವತವಾಗಿ ಉಳಿದು ಸಂಬಂಧಪಟ್ಟವರಿಗೆ ಆಧಾರ ಸಹಿತ ಒದಗಿಸಲು, ಪರಿಹಾರ ಪಡೆಯಲು ಸಹಕಾರಿಯಾಗುವುದು. ಸಭೆ ಬೆಳಿಗ್ಗೆ 10 ರಿಂದ 12ರವರೆಗೆ ಅಥವಾ ಸಂಜೆ 3ರಿಂದ 5ರವರೆಗೆ ಆ ಗ್ರಾಮದಲ್ಲಿಯೇ ನಡೆಯುವುದರಿಂದ ಅದರಲ್ಲಿ ಊರಿನ ಎಲ್ಲಾ ಜನಪ್ರತಿನಿಧಿಗಳು, ಸಂಘಸಂಸ್ಥೆಗಳು ಭಾಗವಹಿಸುವುದರಿಂದ ಹೆಚ್ಚು ಖರ್ಚು ವೆಚ್ಚವಿಲ್ಲದೆ ಕಾರ್ಯಕ್ರಮ ಯಶಸ್ವಿಯಾಗಿ ಆ ಊರಿನ ಹೆಸರು ಹೇಳಿದರೆ ಅಧಿಕಾರಿಗಳಿಗೆ ನಡುಕ ಉಂಟಾಗುವುದು ಮಾತ್ರವಲ್ಲ ಊರು, ಗ್ರಾಮ ಲಂಚ, ಭ್ರಷ್ಟಾಚಾರ ಮುಕ್ತವಾಗುವುದು ಖಂಡಿತ. ಈ ಆಂದೋಲನ ಇತರ ಗ್ರಾಮಗಳಿಗೂ ವಿಸ್ತರಣೆಯಾಗುವುದರಿಂದ ಇಡೀ ತಾಲೂಕು ಲಂಚ, ಭ್ರಷ್ಟಾಚಾರ ಮುಕ್ತವಾಗುತ್ತದೆ ಎಂದು ಹೇಳಿದರೆ ತಪ್ಪಾದೀತೇ? ನಂಬುವುದಿಲ್ಲವಾದರೆ ಬೆಟ್ ಕಟ್ಟಲು ತಯಾರಿದ್ದೀರಾ ? ತಿಳಿಸಿ.
-ಡಾ. ಯು.ಪಿ.ಶಿವಾನಂದ