ಪುತ್ತೂರು: ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ.ಜಯಂತ ಆಠವಲೆಯವರ ಜನ್ಮೋತ್ಸವದ ಅಂಗವಾಗಿ ದೇಶದಲ್ಲೆಡೆ ನಡೆದ ಹಿಂದೂ ರಾಷ್ಟ್ರ ಜಾಗೃತಿ ಅಭಿಯಾನದ ಪ್ರಯುಕ್ತ ಪುತ್ತೂರಿನಲ್ಲಿ ಮೇ.10ರಂದು ಹಿಂದೂ ಐಕ್ಯತಾ ಮೆರವಣಿಗೆ ನಡೆಯಿತು.
ಬೊಳುವಾರು ಶ್ರೀಆಂಜನೇಯ ಮಂತ್ರಾಲಯದ ಮುಂಭಾಗದಲ್ಲಿ ಧ್ವಜಪೂಜೆ ನಡೆಸಿ ಐಕ್ಯತಾ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬೊಳುವಾರು ವೃತ್ತದಿಂದ ಶ್ರೀಧರ್ ಭಟ್ ಅಂಗಡಿಯ ವೃತ್ತ, ಮಾರ್ಕೆಟ್ ವೃತ್ತ, ಆನಂತರ ಕೋರ್ಟ್ ರಸ್ತೆಯಿಂದ ಮುಖ್ಯ ರಸ್ತೆ ಮುಖಾಂತರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ತನಕ ಹಿಂದೂ ಐಕ್ಯತಾ ಮೆರವಣಿಗೆ ಸಾಗಿ ಸಮಾಪನಗೊಂಡಿತು. ಮೆರವಣಿಗೆಯಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಸ್ವಸಂರಕ್ಷಣೆಯ ಮಹತ್ವ ತಿಳಿಸುವ ಲಾಠಿ, ನಾನ್ ಚಾಕುಗಳ ಪ್ರದರ್ಶನ ಮಾಡಿ ತೋರಿಸಲಾಯಿತು. ಮೆರವಣಿಗೆ ಬಳಿಕ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಅಂಬಿಕಾ ವಿದ್ಯಾಲಯದ ಸಂಚಾಲಕ ಸುಬ್ರಹ್ಮಣ್ಯ ನಟೋಜ, ಸನಾತನ ಸಂಸ್ಥೆಯ ಲಕ್ಷ್ಮಿ ಪೈ ಮಾತನಾಡಿದರು.
ಆಕರ್ಷಕ ಮೆರವಣಿಗೆ: ವಾದ್ಯ ಮೇಳ, ಡಾ. ಜಯಂತ ಆಠವಲೆಯವರ ಭಾವಚಿತ್ರದ ಅಲಂಕೃತ ವಾಹನ, ಜಾಗೃತಿ ಭಿತ್ತಿ ಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದ ಮಹಿಳೆಯರು ಮೆರವಣಿಗೆಯ ವಿಶೇಷತೆಯಾಗಿತ್ತು. ವಿವಿಧ ಧಾರ್ಮಿಕ ಸಂಸ್ಥೆಗಳು, ಹಿಂದೂ ಸಂಘಟನಗಳು, ಭಜನಾ ಮಂಡಳಿಗಳ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡರು.
ವಿಶ್ವ ಹಿಂದೂ ಪರಿಷತ್ನ ಪುತ್ತೂರ ಪ್ರಖಂಡದ ಮಾಜಿ ಅಧ್ಯಕ್ಷ ಅನಿಲ್ ಕುಮಾರ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಲಕ್ಷ್ಮಣ ಬೆಳ್ಳಿಪ್ಪಾಡಿ, ಲಕ್ಷ್ಮೀದೇವಿ ಬೆಟ್ಟ ದೇವಸ್ಥಾನದ ವ್ಯವಸ್ಥಾಪಕ ಕೃಷ್ಣ ಪ್ರಸಾದ್, ಈಶ ವಿದ್ಯಾಲಯದ ಸಂಚಾಲಕ ಗೋಪಾಲಕೃಷ್ಣ ಪಾಟಾಳಿ, ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಸಮನ್ವಯಕರಾದ ಚಂದ್ರ ಮೊಗೇರ, ಹರಿಪ್ರಸಾದ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.