ಪುತ್ತೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿಯ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವತಿಯಿಂದ ಸಭಾ ಕಾರ್ಯಕ್ರಮಗಳನ್ನು ನಿರ್ವಹಣೆ ಮಾಡುವ ಕುರಿತು ಒಂದು ದಿನದ ಕಾರ್ಯಾಗಾರವನ್ನು ಮೇ 10 ರಂದು ಆಯೋಜಿಸಲಾಯಿತು.
ಕಾರ್ಯಗಾರವನ್ನು ನಡೆಸಿಕೊಟ್ಟ ಕಾಲೇಜಿನ ಐಕ್ಯೂಎಸಿ ಸಂಚಾಲಕರು ಮತ್ತು ರಾಷ್ಟ್ರೀಯ ಸೇವಾಯೋಜನಾಧಿಕಾರಿ ಹರಿಪ್ರಸಾದ್ ಎಸ್. ಇವರು ಸಭಾ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಅನುಸರಿಸಬೇಕಾದ ನಿಯಮಗಳು ಮತ್ತು ಸೂಕ್ಷ್ಮತೆಗಳನ್ನು ತಿಳಿಸಿದರು. ತದನಂತರದಲ್ಲಿ ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸಿ ಒಂದೊಂದು ವಿಷಯದ ಕುರಿತು ಸಭಾ ಕಾರ್ಯಕ್ರಮವನ್ನು ನಿರ್ವಹಿಸಲು ಸೂಚಿಸಲಾಯಿತು. ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ವನಮಹೋತ್ಸವ, ವಾಣಿಜ್ಯ ಸಂಕೀರ್ಣದ ಉದ್ಘಾಟನೆ ಈ ಮೊದಲಾದ ವಿಷಯಗಳ ಕುರಿತಾದ ಸಭಾಕಾರ್ಯಕ್ರಮದ ಪ್ರಾತ್ಯಕ್ಷಿಕಾ ನಿರ್ವಹಣೆಯನ್ನು ನೀಡಿದ ಸ್ವಯಂಸೇವಕರು ಸಭಾಕಾರ್ಯಕ್ರಮ ನಿರ್ವಹಣೆಯ ಜ್ಞಾನ ಪಡೆದುಕೊಂಡರು.
ಕಾಲೇಜು ಸಭಾಂಗಣದಲ್ಲಿ ನಡೆದ ಈ ಕಾರ್ಯಗಾರದಲ್ಲಿ ನಾಯಕರುಗಳಾದ ಸಾರ್ಥಕ್ ಟಿ, ಶೃತಿಕಾ ಪಿ, ಶೋಭಿತ್ ಕುಮಾರ್ ಕೆ ಮತ್ತು ಲಿಖಿತಾ ಕೆ ಹಾಗೂ ಸ್ವಯಂಸೇವಕರುಗಳು ಉಪಸ್ಥಿತರಿದ್ದರು.