- ಶಿಕ್ಷಣದಿಂದಲೇ ಸಾಮರಸ್ಯ ಸಾಧ್ಯ-ಶೈಖುನಾ ಕಾಡೇರಿ ಉಸ್ತಾದ್
ಪುತ್ತೂರು: ಕರ್ನಾಟಕದ ಪ್ರಸಿದ್ಧ ಸಮನ್ವಯ ಶಿಕ್ಷಣ ಸಂಸ್ಥೆಯಾದ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಇದರ 8ನೇ ಬ್ಯಾಚ್ ಉದ್ಘಾಟನೆ ಮತ್ತು ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ ಮಾಡನ್ನೂರು ನೂರುಲ್ ಹುದಾ ವಿದ್ಯಾಸಂಸ್ಥೆಯಲ್ಲಿ ನಡೆಯಿತು. ದುವಾ ಮತ್ತು ನೂತನ ಬ್ಯಾಚ್ ಉದ್ಘಾಟನೆ ನೆರವೇರಿಸಿದ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಕಾಡೇರಿ ಮುಹಮ್ಮದ್ ಮುಸ್ಲಿಯಾರ್ ಮಾತನಾಡಿ ಶಿಕ್ಷಣದಿಂದಲೇ ಸಾಮರಸ್ಯ ಸಾಧ್ಯ, ವಿದ್ಯಾರ್ಥಿಗಳು ವಿಶ್ವಾಸವನ್ನು ಗೆದ್ದು ಶಿಕ್ಷಣ ತನ್ನದಾಗಿಸಿಕೊಂಡು ಶಿಕ್ಷಣದೊಂದಿಗೆ ನಾಗರಿಕತೆಯನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಅವರು ಹೇಳಿದರು.
ಪ್ರವೇಶಾತಿ ಪರೀಕ್ಷೆಗೆ ೨೦೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಉನ್ನತ ಅಂಕದೊಂದಿಗೆ ತೇರ್ಗಡೆ ಹೊಂದಿದ 45 ವಿದ್ಯಾರ್ಥಿಗಳನ್ನು ಸ್ವಾಗತಿಸಿ ಸಂಸ್ಥೆಯ ಪದಾಧಿಕಾರಿಗಳು ಬರಮಾಡಿಕೊಂಡರು. ವಿದ್ಯಾ ಸಂಸ್ಥೆಯ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಹನೀಫ್ ಹುದವಿ ದೇಲಂಪಾಡಿ ಮುಖ್ಯ ಪ್ರಭಾಷಣಗೈದರು. ಸಯ್ಯದ್ ಬುರ್ಹಾನ್ ಅಲಿ ತಂಙಳ್ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಮಾಡನ್ನೂರು ಮಸೀದಿಯ ಖತೀಬ್ ಸಿರಾಜುದ್ದೀನ್ ಫೈಝಿ, ಪದಾಧಿಕಾರಿಗಳಾದ ಮಂಗಳ ಅಬೂಬಕ್ಕರ್ ಹಾಜಿ, ಸಿ.ಎಚ್ ಅಬ್ದುಲ್ ಅಝೀಝ್, ಎಂ.ಡಿ ಹಸೈನಾರ್, ಜಮಾಅತ್ ಅಧ್ಯಕ್ಷ ಕೆ.ಕೆ ಇಬ್ರಾಹಿಂ ಹಾಜಿ, ಕಾರ್ಯದರ್ಶಿ ಅಬ್ದುಲ್ ಖಾದರ್ ಮುಸ್ಲಿಯಾರ್, ವಿದ್ಯಾರ್ಥಿಗಳು, ಅಧ್ಯಾಪಕರು, ಮದ್ರಸ ಉಸ್ತಾದ್ಗಳು, ವಿದ್ಯಾರ್ಥಿಗಳ ಪೋಷಕರು ಹಾಗೂ ಊರವರು ಭಾಗವಹಿಸಿದ್ದರು. ನೂರುಲ್ ಹುದಾ ಮ್ಯಾನೇಜರ್ ಕೆ. ಯು ಖಲೀಲುರ್ರಹ್ಮಾನ್ ಅರ್ಶದಿ ಸ್ವಾಗತಿಸಿ ವಂದಿಸಿದರು.