ಪುತ್ತೂರು:ಬೆಂಗಳೂರು ಇಂದಿರಾನಗರ ಶ್ರೀ ಸುಂದರಾಂಜನೇಯ ಸ್ವಾಮಿ ದೇವಾಲಯದ ನೂತನ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಪುತ್ತೂರಿನ ಉರಮಾಲ್ ಮನೆಯವರಾಗಿರುವ ಬೆಳ್ಳಿಪ್ಪಾಡಿ ಐಶ್ವರ್ಯ ರೈ ಆಯ್ಕೆಯಾಗಿದ್ದಾರೆ.
ಮುಂದಿನ ಮೂರು ವರ್ಷಗಳ ಅವಧಿಗೆ ವ್ಯವಸ್ಥಾಪನಾ ಸಮಿತಿಗೆ 9 ಮಂದಿ ಸದಸ್ಯರನ್ನು ಆಯ್ಕೆ ಮಾಡಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಧಾರ್ಮಿಕ ಪರಿಷತ್ ಅಧ್ಯಕ್ಷರೂ ಆಗಿರುವ ಕೆ.ಮಂಜುನಾಥ್ ಅವರು ಆದೇಶ ಹೊರಡಿಸಿದ್ದಾರೆ.
ಇಲ್ಲಿನ ಉರಮಾಲ್ ನಿವಾಸಿಗಳಾಗಿರುವ ಬಿ.ಗುಣಶೇಖರ ರೈ ಮತ್ತು ವೀಣಾಗುಣಶೇಖರ ರೈಯವರ ಪುತ್ರಿಯಾಗಿರುವ ಐಶ್ವರ್ಯ ರೈಯವರು ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲಿ ಹೈಕೋರ್ಟ್ ವಕೀಲರಾಗಿ ವೃತ್ತಿ ನಿರತರಾಗಿದ್ದು ಬೆಂಗಳೂರಿನಲ್ಲಿಯೇ ವಾಸವಿದ್ದಾರೆ.ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿರುವ ಇವರು ಆದಿಷ್ಟಾನ್ ಫೌಂಡೇಶನ್ನ ಸ್ಥಾಪಕರು.ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿನಿಯಾಗಿರುವ ಇವರು ೬ನೇ ತರಗತಿಯಿಂದ ಮೈಸೂರಿನ ಜ್ಞಾನ ಸರೋವರ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಹಾಗೂ ಕಾನೂನು ಪದವಿ ವಿದ್ಯಾಭ್ಯಾಸವನ್ನು ಪೂನಾದ ಸಿಂಬಿಯಾಸಿಸ್ ಇಂಟರ್ನ್ಯಾಷನಲ್ ಯುನಿವರ್ಸಿಟಿಯಲ್ಲಿ ಪೂರ್ಣಗೊಳಿಸಿದ್ದರು.ಬಿಕಾಂ ಎಲ್ಎಲ್ಬಿ ಜೊತೆಗೆ ಸೈಕಾಲಜಿಯಲ್ಲಿ ಎಂಎ ಪದವೀಧರರಾಗಿರುವ ಇವರು ಯೋಗಗುರುವೂ ಆಗಿದ್ದಾರೆ.ಬೆಂಗಳೂರಿನ ವಿವಿಧ ಸಂಘ ಸಂಸ್ಥೆಗಳಲ್ಲಿ ಇವರು ಸಕ್ರಿಯರಾಗಿದ್ದಾರೆ.