ಉಪ್ಪಿನಂಗಡಿ: ಬಿ.ಸಿ.ರೋಡು- ಅಡ್ಡಹೊಳೆ ಚತುಷ್ಪಥ ಕಾಮಗಾರಿಯಿಂದಾಗಿ ಮುಂಗಾರಿನ ಮೊದಲ ಭಾರೀ ಮಳೆಗೆ ಈ ಭಾಗದಲ್ಲಿ ರಸ್ತೆ ಜಲಾವೃತಗೊಂಡು, ಅಂಗಡಿ, ಕೃಷಿ ತೋಟಗಳಿಗೆ ನೀರು ನುಗ್ಗುವಂತಾಗಿದೆ.
ಹೆದ್ದಾರಿ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ಸಂದರ್ಭ ಇದ್ದ ಚರಂಡಿಯನ್ನೆಲ್ಲಾ ಮುಚ್ಚಿ ಹಾಕಿರುವುದರಿಂದ ಭಾನುವಾರ ಈ ಭಾಗದಲ್ಲಿ ಸುರಿದ ಭಾರೀ ಮಳೆಗೆ ಸರಾಗವಾಗಿ ನೀರು ಹರಿಯದೇ ಹಲವು ಸಮಸ್ಯೆಗಳಿಗೆ ಕಾರಣವಾಯಿತು. ೩೪ ನೆಕ್ಕಿಲಾಡಿ ಗ್ರಾಮದ ಬೊಳ್ಳಾರು, ಬಜತ್ತೂರು ಗ್ರಾಮದ ಕಾಂಚನ ಕ್ರಾಸ್ ಸಮೀಪದ ಬಾರಿಕೆ, ಉಪ್ಪಿನಂಗಡಿ ಗ್ರಾಮದ ಮಠ ಎಂಬಲ್ಲಿ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯು ಜಲಾವೃತಗೊಂಡರೆ, ಹೆದ್ದಾರಿಯಿಂದ ನಟ್ಟಿಬೈಲು ಸಂಪರ್ಕಿಸುವ ಅಡ್ಡ ರಸ್ತೆ, ಕೃಷಿ ಭೂಮಿಗಳು ಜಲಾವೃತಗೊಂಡವು. ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿ ಸಮೀಪದ ಸತೀಶ್ ನಾಯಕ್ ಅವರ ಅಂಗಡಿ ಗೋಡಾನ್ಗೆ ಹಾಗೂ ಅಶ್ವಿನಿ ಎಲೆಕ್ಟ್ರಿಕಲ್ಸ್ನ ನೆಲಮಹಡಿಯ ಗೋಡಾನ್ಗೆ ನೀರು ನುಗ್ಗಿತ್ತು. ಇದಕ್ಕೆ ಒಂದೆಡೆ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಕಾರಣವಾದರೆ, ಗ್ರಾ.ಪಂ.ಗಳು ಮಳೆಗಾಲ ಪೂರ್ವವಾಗಿ ಚರಂಡಿಯ ಹೂಳು ತೆಗೆಯದಿರುವುದೂ ಕಾರಣವಾಗಿದೆ. ಭಾರೀ ಮಳೆಯಿಂದಾಗಿ ಪೆರಿಯಡ್ಕದಲ್ಲಿ ಚಂದ್ರ ಗೌಡ ಅವರ ಮನೆ ಬಳಿಯ ಧರೆ ಸೇರಿದಂತೆ ಹಲವು ಕಡೆ ಧರೆ ಕುಸಿತವೂ ನಡೆದಿದೆ