ಪುತ್ತೂರು: ಯಕ್ಷಗಾನದ ವಾದನ ಪರಿಕರಕ್ಕೆ ಮತ್ತು ವಾದನಕ್ಕೆ ಹೊಸ ಆಯಾಮವನ್ನು ತೋರಿದ ಪುತ್ತೂರು ಗೋಪಾಲಕೃಷ್ಣಯ್ಯ ಯಾ ಗೋಪಣ್ಣ ಇವರ ಸ್ಮೃತಿ ಕಾರ್ಯಕ್ರಮವು ಜೂ.26ರಂದು ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರ ಬಪ್ಪಳಿಗೆ ’ಅಗ್ರಹಾರ’ ನಿವಾಸದಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಯಕ್ಷಗಾನ ಭಾಗವತ, ಮದ್ಲೆಗಾರ ಪದ್ಯಾಣ ಜಯರಾಮ ಭಟ್ಟರಿಗೆ ’ಗೋಪಣ್ಣ ಸ್ಮೃತಿ ಗೌರವ’ ಪ್ರದಾನಿಸಲಾಗುವುದು ಎಂದು ಪಿ.ಜಿ.ಜಗನ್ನಿವಾಸ ರಾವ್ ತಿಳಿಸಿದ್ದಾರೆ.
ಇತ್ತೀಚೆಗೆ ನಿಧನರಾದ ಭಾಗವತ ಪದ್ಯಾಣ ಗಣಪತಿ ಭಟ್ಟರ ಸಹೋದರ ಅಗಿರುವ ಪದ್ಯಾಣ ಜಯರಾಮ ಭಟ್ ಅವರು ಕೇಳಿ ನೋಡಿ ಕಲಿತ ಏಕಲವ್ಯ ಸಾಧನೆ. ಕದ್ರಿ ಮೇಳ, ಕುಂಟಾರು ಮೇಳ, ಕರ್ನಾಟಕ ಮೇಳ, ಮಂಗಳಾದೇವಿ ಮೇಳಗಳಲ್ಲಿ ಭಾಗವತರಾಗಿದ್ದರು. ಬಳಿಕ ಎಡನೀರು, ಹೊಸನಗರ, ಹನುಮಗಿರಿ ಮೇಳಗಳಲ್ಲಿ ಮದ್ಲೆಗಾರರಾಗಿ ಸೇವೆ ನೀಡಿದ್ದಾರೆ. ಜೂ. 26ರಂದು ಗೋಪಣ್ಣ ಸ್ಮೃತಿ ಕಾರ್ಯಕ್ರಮದ ಬಳಿಕ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.