ನಿಡ್ಪಳ್ಳಿ; ಶ್ರೀ ವಿಷ್ಣುಮೂರ್ತಿ ದೇವಾಲಯ, ಗೋಪಾಲ ಕ್ಷೇತ್ರ ಇರ್ದೆ ಇದರ ಜೀರ್ಣೋದ್ಧಾರ ಮಾಡುವ ಬಗ್ಗೆ ಗ್ರಾಮಸ್ಥರ ಸಮಾಲೋಚನಾ ಸಭೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಭಟ್ ಘಾಟೆ ಇವರ ಅಧ್ಯಕ್ಷತೆಯಲ್ಲಿ ದೇವಾಲಯದಲ್ಲಿ ನಡೆಯಿತು.
ಖ್ಯಾತ ವಾಸ್ತು ಶಾಸ್ತ್ರಜ್ಞರಾದ ಪ್ರಸಾದ್ ಮುನಿಯಂಗಳ ಜೀರ್ಣೋದ್ಧಾರ ಮಾಡುವ ಕುರಿತು ಸಲಹೆ ಮಾರ್ಗದರ್ಶನ ನೀಡಿದರು. ಪ್ರಸ್ತುತ ಇರುವ ಗರ್ಭಗುಡಿ ಮತ್ತು ನಮಸ್ಕಾರ ಮಂಟಪ ಶಿಲೆಕಲ್ಲಿನಿಂದ ನಿರ್ಮಾಣವಾಗಿ ಸುಮಾರು ಹದಿನೇಳು ವರ್ಷ ಕಳೆದಿದ್ದು ಅದರ ಒಳಗೆ ನೀರು ಬೀಳುತ್ತಿದೆ. ಆದುದರಿಂದ ಅದನ್ನು ತೆರವು ಗೊಳಿಸಿ ನೂತನವಾಗಿ ನಿರ್ಮಿಸುವುದು ಮತ್ತು ಮರದ ಮಾಡು ಮಾಡಿ ಮೇಲೆ ತಾಮ್ರದ ತಗಡು ಹಾಸುವುದು ಎಂದು ನಿರ್ಣಯಿಸಲಾಯಿತು. ಇದಕ್ಕೆ ಗ್ರಾಮಸ್ಥರ ಸಂಪೂರ್ಣ ಸಹಕಾರ ವ್ಯಕ್ತವಾಗಿದ್ದು ಆದಷ್ಟು ಬೇಗ ಜೀರ್ಣೋದ್ಧಾರ ಕೆಲಸ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಯಿತು.
ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಹರಿಪ್ರಕಾಶ್ ಬೈಲಾಡಿ ಬೀಡು, ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ಧನ್ಯರಾಜ್, ದೇವಪ್ಪ.ಯು, ಆನಾಜೆ ರಾಧಾಕೃಷ್ಣ ರೈ, ರಂಜಿನಿ.ವಿ ರೈ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ವಿಠಲ ರೈ ಬಾಲ್ಯೊಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರುಗಳು, ಊರ ಗಣ್ಯರು, ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡರು.