- ಸಂಘಕ್ಕೆ 116.72ಲಕ್ಷ ಲಾಭ, ಶೇ.12.5 ಲಾಭಂಶ ಘೋಷಣೆ
ಕಡಬ: ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ವರದಿ ವರ್ಷದಲ್ಲಿ ದಾಖಲೆಯ 116.72ಲಕ್ಷ ಲಾಭ ಗಳಿಸಿ ಉತ್ತಮ ಸಾಧನೆ ಮಾಡಿದ್ದು, ಸದಸ್ಯರಿಗೆ ಶೇ.12.5 ಲಾಭಂಶ ವಿತರಣೆ ಮಾಡುವುದೆಂದು ಸಂಘದ ಅಧ್ಯಕ್ಷರು ಮಹಾಸಭೆಯಲ್ಲಿ ಘೋಷಿಸಿದರು.
ಮಹಾಸಭೆಯು ಜು.13ರಂದು ಕುಟ್ರುಪಾಡಿ ಉ.ಹಿ.ಪ್ರಾ.ಶಾಲೆಯ ವಠಾರದಲ್ಲಿ ಸಂಘದ ಅಧ್ಯಕ್ಷ ಶಿವಪ್ರಸಾದ್ ಪುತ್ತಿಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೋಮಸುಂದರ ಶೆಟ್ಟಿಯವರು ವರದಿ ಮಂಡಿಸಿ, ಸಂಘವು ೧೨.೧೯ ಕೋಟಿ ಠೇವಣಿ ಹೊಂದಿದ್ದು, ರೂ ೪.೮೨ ಕೋಟಿ ಪಾಲು ಬಂಡವಾಳ ರೂ.೪೧.೧೦ ಕೋಟಿ ಸಾಲ ಹೊರಬಾಕಿ ಇದ್ದು ವರ್ಷಾಂತ್ಯಕ್ಕೆ ಶೇ.೯೫.೬೮ ಸಾಲ ಮರುಪಾವತಿಯಾಗಿರುತ್ತದೆ ವರದಿ ಸಾಲಿನಲ್ಲಿ ದಾಖಲೆಯ ರೂ. ೧೧೬.೭೨ ಲಕ್ಷ ಲಾಭ ಗಳಿಸಿ ಸಂಘ ಅದ್ವಿತಿಯ ಸಾಧನೆ ಮಾಡಿದೆ. ೨೦೨೧-೨೨ನೇ ಸಾಲಿನ ಅಡಿಟ್ನಲ್ಲಿ ಎ ಗ್ರೇಡ್ ಪಡೆದುಕೊಂಡಿದೆ ಎಂದು ಮಾಹಿತಿ ನೀಡಿರುವ ಅವರು ಸದಸ್ಯ ಸಂಖ್ಯೆಯನ್ನು ೨೮೫೦ಕ್ಕೆ ಹೆಚ್ಚಿಸುವುದು, ಪಾಲು ಬಂಡವಾಳವನ್ನು ರೂ ೫ ಕೋಟಿಗೆ ಹೆಚ್ಚಿಸುವುದು, ಠೇವಣಾತಿಯನ್ನು ರೂ.೧೩ ಕೋಟಿಗೆ ಹೆಚ್ಚಿಸುವುದು, ಸ್ವಂತ ಬಂಡವಾಳದಿಂದ ಕೃಷಿ ಮತ್ತು ಕೃಷಿಯೇತರ ಉದ್ದೇಶಕ್ಕೆ ಹೆಚ್ಚು ಸಾಲ ನೀಡುವುದರ ಮೂಲಕ ಹೊರಬಾಕಿ ಸಾಲವನ್ನು ೪೩ ಕೋಟಿಗೆ ಹೆಚ್ಚಿಸುವುದು, ಕೊಳವೆ ಬಾವಿ ಕೊರೆಸುವ ಬಗ್ಗೆ ಮುಂದಿನ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಜಯಚಂದ್ರ ರೈ ಕೆ, ಪದ್ಮಯ್ಯ ಪೂಜಾರಿ, ಸೀತಮ್ಮ ಹಳ್ಳಿ, ಸವಿತಾ ಸಿ.ಜಿ, ಸೀತಾರಾಮ ಡಿ.ಪಿ. ಕುಶಕುಮಾರ, ಬಿ. ನೀಲಯ್ಯ ಮಲೆಕುಡಿಯ, ಕುಕ್ಕ ಎನ್, ಜಗನ್ನಾಥ ಜಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಶಿವಪ್ರಸಾದ್ ಪುತ್ತಿಲ ಸ್ವಾಗತಿಸಿ, ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು. ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ದೇವಾಡಿಗ ಸನಿಲ ವಂದನಾರ್ಪಣೆಗೈದರು. ಸಂಘದ ಮಾಜಿ ಅಧ್ಯಕ್ಷ ಶಶಾಂಕ ಗೋಖಲೆ ಎಂ. ಅವರು ಸದಸ್ಯರಿಗೆ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಗುಮಾಸ್ತ ತೋಮಸ್ ಪಿ.ಎಂ. ಕಾರ್ಯಕ್ರಮ ನಿರೂಪಿಸಿದರು. ಗುಮಾಸ್ತರಾದ ಪದ್ಮಯ್ಯ ಗೌಡ ಎಚ್., ಮೋನಪ್ಪ ಪೂಜಾರಿ ಕೆ, ಮಾರಾಟ ಸಹಾಯಕ ನಿತಿನ್, ಅಜಿತ್ ಡಿ.ಎನ್, ತಿಮ್ಮಪ್ಪ ಗೌಡ ವಿವಿಧ ಕಾರ್ಯ ನಿರ್ವಹಿಸಿದರು. ಸಭೆಯಲ್ಲಿ ಸದಸ್ಯರಾದ ಧನಂಜಯ ಕೊಡಂಗೆ, ವಿಕ್ಟರ್ ಮಾರ್ಟಿಸ್, ಎಲ್ಸಿ ತೋಮಸ್, ಹರಿ ಗೋಖಲೆ, ನರಸಿಂಹ ಹೆಬ್ಬಾರ್ ಅವರು ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿ ಸಲಹೆ ನೀಡಿದರು.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ:
ಎಸ್.ಎಸ್.ಎಲ್.ಸಿ. ಹಾಗೂ ದ್ವಿತಿಯ ಪಿ.ಯು.ಸಿಯಲ್ಲಿ ೨೦೨೧-೨೨ನೇ ಸಾಲಿನಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಎಸ್.ಎಸ್.ಎಲ್.ಸಿ.ಯಲ್ಲಿ ಸದಸ್ಯರಾದ ಎಲ್ಯ ಕೃಷ್ಣಪ್ಪ ಗೌಡರ ಪುತ್ರಿ ಮೇಘಾ.ಎ(೬೧೨), ಕೇಪು ಶಾಂತರಾಮ ಶೆಟ್ಟಿಯವರ ಪುತ್ರಿ ಅನ್ವಿತ್ ಶೆಟ್ಟಿ, ದಿತಿಯ ಪಿಯುಸಿ ಕಲಾ ವಿಭಾಗದಲ್ಲಿ ಶ್ರೀರಾಮ ಹೊಸ್ಮಟ ಅವರ ಪುತ್ರಿ ಚೈತನ್ಯ(೫೩೫), ವಾಣಿಜ್ಯ ವಿಭಾಗದಲ್ಲಿ ಉಳಿಪ್ಪು ಎನ್.ವಿ ವರ್ಗೀಸ್ ಅವರ ಪುತ್ರ ಆರ್ಯ ಎನ್.ವರ್ಗೀಸ್, ಅಮೈ ಹೇಮಾವತಿ ಅವರ ಪುತ್ರಿ ಕ್ಷಮಾ, ವಿಜ್ಞಾನ ವಿಭಾಗದಲ್ಲಿ ಸಂಪಡ್ಕ ವಿಲ್ಸನ್ ಅವರ ಪುತ್ರ ಮೆಲ್ವಿನ್ ಆನ್ಸಿ ವಿಲ್ಸನ್, ಪನ್ಯಾಡಿ ಪುರುಷೋತ್ತಮ ಗೌಡ ಅವರ ಪುತ್ರ ದೀಪಕ್ ಗೌಡ ಅವರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಕೋವಿಡ್ ೧೯ ರೋಗಕ್ಕೆ ಬಲಿಯಾದ ಕುಟುಂಬಕ್ಕೆ ರೂ.1 ಲಕ್ಷ ಚೆಕ್ ವಿತರಣೆ:
ಸಂಘದಲ್ಲಿ ಬೆಳೆ ಸಾಲ ಹೊಂದಿದ್ದು, ಕೋವಿಡ್ 19 ರ ರೋಗಕ್ಕೆ ತುತ್ತಾಗಿ ಮರಣ ಹೊಂದಿರುವ ಎ. ನಾರ್ಣಪ್ಪ ಪೂಜಾರಿ ಕೇರ್ಪುಡೆ ಹಾಗೂ ಬಿ. ಅನ್ನಮ್ಮ ಕೆ.ಎಂ. ಮುಳಿಯ ಇವರ ಕುಟುಂಬಕ್ಕೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ನೀಡಲಾಗುವ ರೂ. ೧ ಲಕ್ಷ ಮೊತ್ತವನ್ನು ಚೆಕ್ ಮೂಲಕ ಮೃತ ಸದಸ್ಯರ ಕುಟುಂಬದ ವಾರಿಸುದಾರರಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪರಿಹಾರ ಧನ ನೀಡಿದ ಡಿಸಿಸಿ ಬ್ಯಾಂಕ್ ಅಭಿನಂದನೆ ಸಲ್ಲಿಸಲಾಯಿತು.