ಪುತ್ತೂರು: ಯಕ್ಷಗಾನ ಚೆಂಡೆಯಲ್ಲಿ ಒಂದು ನಿಮಿಷಕ್ಕೆ 192 ಬಾರಿ ತರಿಕಿಟತಕ ಎಂಬ ಏಕತಾಳದ ಉರುಳುವಿಕೆಯನ್ನು ನುಡಿಸುವ ಮೂಲಕ ಯಕ್ಷಗಾನ ಚೆಂಡೆವಾದಕ ಕೌಶಿಕ್ ರಾವ್ “ಇಂಡಿಯಾಸ್ ವರ್ಲ್ಡ್” ಪುಟ ಸೇರಿದ್ದಾರೆ. ಇವರು ಪುತ್ತೂರಿನ ಪಾಣಾಜೆಯ ಯುವ ಹವ್ಯಾಸಿ ಭಾಗವತೆ ಅಮೃತಾ ಅಡಿಗರ ಪತಿ. ಚೆಂಡೆಯಲ್ಲಿ ತರಿಕಿಟತಕ ವನ್ನು 192 ಬಾರಿ ಬಾರಿಸಿದ್ದ ವೀಡಿಯೋವನ್ನು ಜೆಮ್ ಷೆಡ್ಪುರದಲ್ಲಿರುವ ಐಡಬ್ಲ್ಯೂ ಆರ್ ಫೌಂಡೇಶನ್ಗೆ ಕಳುಹಿಸಲಾಗಿತ್ತು. ಇಬ್ಬರು ತೀರ್ಪುಗಾರರ ಪರಿಶೀಲನೆಯ ಬಳಿಕ ಅವರ ಶಿಫಾರಸು ಆಧರಿಸಿ ಈ ಮಾನ್ಯತೆಯನ್ನು ನೀಡಲಾಗಿದೆ. ಕೌಶಿಕ ಮೂಲತಃ ಮೂಡಬಿದ್ರೆ ಪುತ್ತಿಗೆ ಪಡುಬೆಟ್ಟು ನಿವಾಸಿಯಾಗಿದ್ದು ಪ್ರಸ್ತುತ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಶ್ರೀ ಜ್ಞಾನ ಶಕ್ತಿ ಪಾವಂಜೆ ಮೇಳದ ಚೆಂಡೆವಾದಕರು. ಇವರು ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ ಅಡಿಗರ ಅಳಿಯ.