ವಿಟ್ಲ: ಪ್ರತಿಷ್ಠಿತ ಇ.ಎಸ್.ಐ ಮೆಡಿಕಲ್ ಕಾಲೇಜ್ ಹಾಸ್ಪಿಟಲ್ , ಆಲ್ವಾರ್ ರಾಜಸ್ಥಾನದ ಡೀನ್ ಆಗಿ ಪ್ರೊ| ಡಾ. ನಂದಕಿಶೋರ್ ಆಳ್ವ ಆಯ್ಕೆಯಾಗಿದ್ದಾರೆ. ಕೇಂದ್ರ ಸರ್ಕಾರದ ಮಿನಿಸ್ಟ್ರಿ ಆಫ್ ಲೇಬರ್ ಎಂಪ್ಲಾಯ್ಮೆಂಟ್ನ ಅಡಿಯಲ್ಲಿ ಬರುವ ವೈದ್ಯಕೀಯ ಸಂಸ್ಥೆ ಇದಾಗಿದ್ದು, ಕೇಂದ್ರ ಸರ್ಕಾರವು ದೇಶದ ವಿವಿಧ ಇಎಸ್ಐ ಸಂಸ್ಥೆಗಳಿಗೆ ಡೀನ್ಗಳ ಆಯ್ಕೆ ಪ್ರಕ್ರಿಯೆಯನ್ನು ಇತ್ತೀಚೆಗೆ ನೆರವೇರಿಸಿತ್ತು.
ಕಾರಮುಗೇರು ಶಾಂತ ಆಳ್ವ ಮತ್ತು ಮಿತ್ತಳಿಕೆ ಸರಸ್ವತಿ ಆಳ್ವರವರ ಪುತ್ರ ಪ್ರೊ| ನಂದಕಿಶೋರ ಆಳ್ವ ರವರು ಮೂಲತಃ ವಿಟ್ಲದ ಅಳಿಕೆ ಗ್ರಾಮದವರಾಗಿದ್ದು, ಅಳಿಕೆ ಸತ್ಯಸಾಯಿ ವಿದ್ಯಾ ಸಂಸ್ಥೆಯ ಹಿರಿಯ ವಿದ್ಯಾರ್ಥಿಯಾಗಿರುತ್ತಾರೆ. ಪ್ರಸ್ತುತ ಬೆಂಗಳೂರಿನ ಎಂ.ಎಸ್ ರಾಮಯ್ಯ ಕಾಲೇಜಿನಲ್ಲಿ ಪೆಥಾಲಜಿ ವಿಭಾಗದ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಹಿಮೋಫೀಲಿಯ ಸೊಸೈಟಿಯ ಉಪಾಧ್ಯಕ್ಷರಾಗಿ, ಎಂ.ಎಸ್ ರಾಮಯ್ಯ ಆಸ್ಪತ್ರೆಯ ಚೀಫ್ ಆಫ್ ಇಮ್ಯುನೋಹೆಮೆಟೋಲಜಿ ಟ್ರಾನ್ಸ್ ಫ್ಯೂಷನ್ ಮೆಡಿಸಿನ್ ಆಗಿ, ಈಶಾ ಡಯಗ್ನೋಸ್ಟಿಕ್ಸ್ ರಿಸರ್ಚ್ ಪ್ರೈ.ಲಿ ನ ನಿರ್ದೇಶಕರಾಗಿ ಮತ್ತು ಇಂಡಿಯನ್ ಅಸೋಸಿಯೇಷನ್ ಆಫ್ ಪೆಥಾಲಜಿಸ್ಟ್ಸ್ ಮೈಕ್ರೋಬಯಾಲಜಿಸ್ಟ್- ಕರ್ನಾಟಕ ಚಾಪ್ಟರ್ ನ ಅಧ್ಯಕ್ಷರಾಗಿ ಅನುಭವ ಹೊಂದಿರುತ್ತಾರೆ. ಇವರ ಹಲವಾರು ಸಂಶೋಧನಾ ಲೇಖನಗಳು ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟಗೊಂಡು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತದೆ. ಪ್ರೊ| ನಂದಕಿಶೋರ ಆಳ್ವರವರು ಪತ್ನಿ ರಶ್ಮೀ ಎನ್ ಆಳ್ವ, ಮಕ್ಕಳಾದ ಆಶ್ರಯ್ ಆಳ್ವ ಮತ್ತು ಆದರ್ಶ್ ಆಳ್ವ ಅವರೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.