ಪುತ್ತೂರು: ಕೋಡಿಂಬಾಡಿಯ ಮಠಂತಬೆಟ್ಟು ಪಾಲಿತ್ತಿಮಾರ್ ಗದ್ದೆಯಲ್ಲಿ ಬೃಹದಾಕಾರಾದ ತಾಳೆಮರ ಕುಸಿದು ಬಿದ್ದ ಘಟನೆ ಆ.8ರಂದು ನಡೆದಿದೆ.
ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ಸೇವಾ ಟ್ರಸ್ಟ್ ಸಾರಥ್ಯದಲ್ಲಿ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆ.7ರಂದು ಇದೇ ಗದ್ದೆಯಲ್ಲಿ ಆಟಿದ ಐಸಿರ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆದಿತ್ತು.
ಸಾವಿರಾರು ಮಂದಿ ಸಂಭ್ರಮ, ಸಡಗರದಿಂದ ಭಾಗವಹಿಸಿದ್ದ ಆಟಿದ ಐಸಿರ ಕಾರ್ಯಕ್ರಮಕ್ಕೆ ನಿರ್ಮಿಸಲಾಗಿದ್ದ ವೇದಿಕೆಯ ಮೇಲೆಯೇ ತಾಳೆಮರ ಇದೀಗ ಉರುಳಿ ಬಿದ್ದಿದೆ. ಕಾರ್ಯಕ್ರಮ ನಡೆಯುವ ವೇಳೆ ಇದೇ ವೇದಿಕೆಯಡಿಯಲ್ಲಿ ಹಲವಾರು ಪ್ರಮುಖರು ಉಪಸ್ಥಿತರಿದ್ದರು. ಕೆಸರ್ದ್ ಗೊಬ್ಬುಲು ಕಾರ್ಯಕ್ರಮದ ವೇಳೆ ಮುಳಿಯ ನಿಧಿ ಶೋಧ ವೇಳೆ ನೂರಾರು ಕ್ರೀಡಾಳುಗಳು ಇದೇ ತಾಳೆ ಮರದಡಿಯಲ್ಲಿದ್ದರು. ಕ್ರೀಡಾಕೂಟ ವೀಕ್ಷಿಸಲು ಬಂದವರೂ ಇದೇ ತಾಳೆಮರದಡಿಯಲ್ಲಿ ನಿಂತಿದ್ದರು. ಕಾರ್ಯಕ್ರಮ ನಡೆಯುವ ವೇಳೆ ಏನಾದರೂ ತಾಳೆ ಮರ ಉರುಳಿ ಬೀಳುತ್ತಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಕಾರ್ಯಕ್ರಮ ನಡೆದ ಮರುದಿನ ತಾಳೆ ಮರ ಉರಳಿ ಬಿದ್ದಿದೆ. ಮಹಿಷಮರ್ದಿನಿ ದೇವಿಯೇ ಭಕ್ತರನ್ನು ಕಾಪಾಡಿದ್ದಾರೆ ಎಂದು ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಾಳೆಮರ ಬಿದ್ದ ಪರಿಣಾಮ ವೇದಿಕೆಯ ಶೀಟುಗಳಿಗೆ ಹಾನಿಯಾಗಿದೆ.