ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
- ಮೆದುಳು ಚುರುಕಾಗಬೇಕಾದರೆ ಕ್ರೀಡೆಯಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿ – ಪಾರ್ಥ ವಾರಣಾಶಿ
ಪುತ್ತೂರು: ಯಾವುದೇ ಕ್ರೀಡೆಯಾಗಲಿ, ಕ್ರೀಡಾಪಟುಗಳು ದಿನೇ ದಿನೇ ಕ್ರೀಡೆಯಲ್ಲಿನ ಹೊಸ ಹೊಸ ವಿಷಯಗಳನ್ನು ಆಭ್ಯಸಿಸಬೇಕಾಗುತ್ತದೆ. ಜೊತೆಗೆ ಕ್ರೀಡೆಯಲ್ಲಿ ಕ್ರೀಡಾಪಟುಗಳು ಅತ್ಯುತ್ಸಾಹದಿಂದ ಭಾಗವಹಿಸಿದಾಗ ಮೆದುಳು ಕೂಡ ಚುರುಕಾಗುತ್ತದೆ ಎಂದು ಪರ್ಲಡ್ಕ ಡಾ|ಶಿವರಾಮ ಕಾರಂತ ಬಾಲವನ ಈಜುಕೊಳದ ತರಬೇತುದಾರ ಪಾರ್ಥ ವಾರಣಾಶಿರವರು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ದ.ಕ, ಮಂಗಳೂರು ಹಾಗೂ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್ನ ಜಂಟಿ ಆಶ್ರಯದಲ್ಲಿ ಆ.12ರಂದು ಪುತ್ತೂರು, ಪರ್ಲಡ್ಕ ಡಾ|ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ಜರಗಿದ ಪದವಿ ಪೂರ್ವ ಕಾಲೇಜುಗಳ ದ.ಕ ಜಿಲ್ಲಾ ಮಟ್ಟದ ಈಜು ಚಾಂಪಿಯನ್ಶಿಪ್ ಸ್ಪರ್ಧೆ-2022 ಸ್ಪರ್ಧೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಕ್ರೀಡೆಯು ಹಾಗೂ ಕ್ರೀಡಾಪಟುಗಳು ಪ್ರಜ್ವಲಿಸಬೇಕಾದರೆ ದೀರ್ಘಾವಧಿಯ ಕ್ರೀಡಾಪಟುಗಳ ಅಭಿವೃದ್ಧಿ ಕಾರ್ಯಕ್ರಮವಾಗಬೇಕಿದೆ. ಕ್ರೀಡಾಪಟುಗಳು ಅಲ್ಪಾವಧಿಯಲ್ಲಿಯೇ ಕ್ರೀಡೆಯನ್ನು ತೊರೆಯುವುದು ಸಾಮಾನ್ಯವಾಗಿದೆ. ಕ್ರೀಡೆಗೆ ಹೋದ್ರೆ ಅಧ್ಯಯನಕ್ಕೆ ಕಷ್ಟ ಎಂಬ ಮಾತು ಈ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಚಲಿತವಿರುವಂತಹ ಮಾತಾಗಿದೆ. ಓರ್ವ ಸದೃಢ ಕ್ರೀಡಾಪಟುವಾಗಬೇಕಾದರೆ ಕ್ರೀಡಾಪಟುವಲ್ಲಿ ಶೇ.50 ತಮ್ಮ ಹೆತ್ತವರು ನಡೆದುಬಂದ ಹಾದಿಯನ್ನು ಅವಲಂಭಿಸಿದೆ ಮತ್ತು ಶೇ.೫೦ ಪರಿಸರದಲ್ಲಿ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದು ಮುಖ್ಯವಾಗಿದೆ ಎಂಂದರು.
ಅಧ್ಯಕ್ಷತೆ ವಹಿಸಿದ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋರವರು ಈಜು ಸ್ಪರ್ಧೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಪುತ್ತೂರಿನ ಗ್ರಾಮೀಣ ಪ್ರದೇಶದಲ್ಲೂ ಸುಸಜ್ಜಿತ ಈಜುಕೊಳವಿರುವುದು ಹೆಮ್ಮೆಯ ವಿಚಾರವಾಗಿದೆ. ಹಲವಾರು ಸ್ಪರ್ಧೆಗಳಲ್ಲಿ ಈಜು ಸ್ಪರ್ಧೆಯು ಒಂದಾಗಿದ್ದು, ಎಲ್ಲಾ ಕ್ರೀಡಾಪಟುಗಳಿಗೆ ಬಹುಮಾನ ಸಿಗಲಾರದು. ಯಾರು ಉತ್ತಮ ಪ್ರದರ್ಶನ ನೀಡುತ್ತಾರೋ ಅವರಿಗೆ ಬಹುಮಾನ ಸಿಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ತಮ್ಮ ಮುಂದಿನ ಕ್ರೀಡಾಕೂಟಗಳಲ್ಲಿ ತಮ್ಮ ಪ್ರದರ್ಶನವನ್ನು ಉತ್ತಮಪಡಿಸುವತ್ತ ಚಿತ್ತ ಹರಿಸಬೇಕಾಗಿದೆ ಎಂದರು.
ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎವರೆಸ್ಟ್ ರೊಡ್ರಿಗಸ್, ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೊ, ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾರವರು ಸ್ವಾಗತಿಸಿ, ಉಪನ್ಯಾಸಕಿ ಸುಮ ಡಿ ವಂದಿಸಿದರು. ಉಪನ್ಯಾಸಕಿ ಡಾ|ಆಶಾ ಸಾವಿತ್ರಿ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ..
ಹಲವಾರು ಈಜುಪಟುಗಳಿಗೆ ತರಬೇತಿ ನೀಡಿ ಈಜುಪಟುಗಳು ಪ್ರಜ್ವಲಿಸಲು ಕಾರಣಕರ್ತರಾದ ಪರ್ಲಡ್ಕ ಡಾ|ಶಿವರಾಮ ಕಾರಂತ ಬಾಲವನ ಈಜುಕೊಳದ ತರಬೇತುದಾರ ಪಾರ್ಥ ವಾರಣಾಶಿರವರನ್ನು ಈ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸಲಾಯಿತು. ಉಪನ್ಯಾಸಕಿ ಸತ್ಯಲತಾ ರೈ ಸನ್ಮಾನಿತರ ಪರಿಚಯ ಮಾಡಿದರು.