ಪ್ರಧಾನಿ ಮೋದಿಜಿಯವರು ನೀಡಿದ ಕರೆಯಿಂದಾಗಿ ದೇಶಕ್ಕೇ ಹರಡಿದೆ
ಮನೆ ಮನೆಯಲ್ಲಿ ಸ್ವಾತಂತ್ರ್ಯದ ಸಂಭ್ರಮವನ್ನು ಆಚರಿಸುವಂತೆ ಸುದ್ದಿ ಬಳಗ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ವರ್ಷ ಜುಲೈ ತಿಂಗಳಲ್ಲೇ ಕರೆ ನೀಡಿತ್ತು. ಕಳೆದ ಅಗಸ್ಟ್ 15ರಂದು 75ನೇ ವರ್ಷದ ಸ್ವಾತಂತ್ರ್ಯದ ಪ್ರಾರಂಭದ ದಿನವನ್ನು ಸಂಭ್ರಮವಾಗಿ ಕೊರೋನಾ, ಕರ್ಫ್ಯೂನ ನಡುವೆಯೂ ಆಚರಿಸುವಂತೆ ಮಾಡಿತ್ತು. ಆದರೆ ಅದು ಎಲ್ಲರನ್ನು ಜಾಗೃತೆಗೊಳಿಸಲಿಲ್ಲ. ಪ್ರಧಾನಿ ಮೋದಿಯವರು ಈ ವರ್ಷ ಹರ್ ಘರ್ ತಿರಂಗ ಎಂಬ ಘೋಷಣೆ ಮತ್ತು ಆದೇಶದ ಮೂಲಕ ದೇಶದ ಜನರಿಗೆ ನಮ್ಮ ರಾಷ್ಟ್ರ ಧ್ವಜವನ್ನು ಹೆಮ್ಮೆಯಿಂದ ಎತ್ತಿ ಹಿಡಿದು ದೇಶ ಪ್ರೇಮದ ಘೋಷಣೆಯೊಂದಿಗೆ ಮೆರವಣಿಗೆಯಲ್ಲಿ ಸಾಗುವಂತೆ ಮಾಡಿದ್ದಾರೆ. ಮನೆ, ಕಛೇರಿಗಳಲ್ಲಿ ತಿರಂಗ ರಾರಾಜಿಸುವಂತೆ ಮಾಡಿದ್ದಾರೆ. 75ನೇ ವರ್ಷದ ಸ್ವಾತಂತ್ರ್ಯದ ಅಂತಿಮ ದಿನ ದೇಶದ ಸಂಪೂರ್ಣ ಜನರನ್ನು ರಾಷ್ಟ್ರಧ್ವಜದ ಅಡಿಯಲ್ಲಿ ಒಂದು ಗೂಡುವಂತೆ ಮಾಡಿದ್ದಾರೆ. ಅದು ನಮಗೆ ಸಂತೋಷ ಉಂಟು ಮಾಡಿದೆ.
ಪತ್ರಿಕೆ ಪ್ರಾರಂಭಿಸುವ ಮೊದಲೇ 1985ರಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧ ಆಂದೋಲನ ಪ್ರಾರಂಭಿಸಲಾಗುತ್ತು. ಇಂದಿಗೂ ಆ ಆಂದೋಲನ ಮುಂದುವರಿದಿದೆ. ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಎಂಬ ಸುದ್ದಿ ಜನಾಂದೋಲನದ ಕರೆ ಜನರನ್ನು ತಲುಪಿದೆ. ಲಂಚಕೋರರಿಗೆ ನಡುಕ ಹುಟ್ಟಿಸಿದೆ. ಲಂಚ ರಹಿತ ಉತ್ತಮ ಸೇವೆ ನೀಡಲು ಅಽಕಾರಿಗಳು ಮುಂದೆ ಬಂದಿದ್ದಾರೆ. ಜನರು ಅವರನ್ನು ಗುರುತಿಸಿದ್ದಾರೆ. ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಪತ್ರಿಕೆ ಅವರನ್ನು ಗೌರವಿಸಿದೆ.
ಪ್ರಧಾನಿ ಮೋದಿಯವರು ಕೆಂಪು ಕೋಟೆಯಲ್ಲಿ ಮಾಡಿದ ಸ್ವಾತಂತ್ರ್ಯದ ಇಂದಿನ ಭಾಷಣದಲ್ಲಿ ಭ್ರಷ್ಟಾಚಾರ ದೇಶದ ದೊಡ್ಡ ಪಿಡುಗು, ಭ್ರಷ್ಟಾಚಾರಿಗಳಿಗೆ ಸಮಾಜ ಗೌರವ ಕೊಡಬಾರದು, ಬಹಿಷ್ಕರಿಸಬೇಕು. ಪಟ್ಟಭದ್ರ ಹಿತಾಸಕ್ತಿಗಳನ್ನು ಕಡೆಗಣಿಸಬೇಕು ಎಂಬ ಕರೆ ನೀಡಿದ್ದಾರೆ. ಜನರು ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಸಹಕಾರ ನೀಡಬೇಕು ಎಂದಿದ್ದಾರೆ. ಈ ಕರೆ ಅಂದು ಭ್ರಷ್ಟಾಚಾರ ವಿರುದ್ಧ ‘ಸುದ್ದಿ ಆಂದೋಲನ’ ಪ್ರಾರಂಭಿಸಿದಾಗ ಅದು ಸಾಧ್ಯವೇ? ಸರ್ವವ್ಯಾಪಿಯಾಗಿರುವ ಅದನ್ನು ಎದುರಿಸಿದರೆ ತೊಂದರೆಯಲ್ಲವೇ? ಇಂದಿನ ಕಾಲಕ್ಕೆ ಅದರ ಅಗತ್ಯವಿದೆಯೇ? ಎಂದು ಹೇಳಿ ದೂರ ನಿಂತವರಿಗೆ ಭ್ರಷ್ಟಾಚಾರದ ವಿರುದ್ಧದ ಹೋರಾಡುವ ಸಂಕಲ್ಪವನ್ನು ನೀಡಿದೆ. ಇದರಿಂದಾಗಿ ದ.ಕ. ಜಿಲ್ಲೆಯನ್ನು ಲಂಚ, ಭ್ರಷ್ಟಾಚಾರ ಮುಕ್ತವಾಗಿ ಮಾಡಲು ಪ್ರಯತ್ನಿಸಿ ಆ ಮೂಲಕ ರಾಜ್ಯಕ್ಕೆ ಹರಡಲು ಇಚ್ಛಿಸುವ ಸುದ್ದಿ ಜನಾಂದೋಲನಕ್ಕೆ ಆನೆ ಬಲ ಬಂದಂತಾಗಿದೆ. ಅದು ನಮ್ಮ ಸಾಮಾಜಿಕ ಜೀವನದ ಅತ್ಯಂತ ಸಂತೋಷದ ಕ್ಷಣವಾಗಿದೆ ಎಂದು ತಿಳಿಸಲು ಇಚ್ಛಿಸುತ್ತೇನೆ. ಅದರೊಂದಿಗೆ ಕೃಷಿಕರಿಗೆ ಸ್ವಾತಂತ್ರ್ಯ ಎಂಬ ಘೋಷಣೆಯೊಂದಿಗೆ ಸ್ವಾತಂತ್ರ್ಯ ದಿನದಂದು ಸುದ್ದಿಯಿಂದ ಸಮಗ್ರ ಕೃಷಿ ಮಾಹಿತಿ, ಸೇವಾ ಕೇಂದ್ರ ತೆರೆಯಲಾಗಿದ್ದು ಅದು ದ.ಕ. ಜಿಲ್ಲೆಯ ಎಲ್ಲಾ ಕೃಷಿಕರಿಗೆ ಸಂಜೀವಿನಿಯಾಗಿ ಕೆಲಸ ಮಾಡಬೇಕೆಂಬ ಆಶಯವನ್ನು ಇಟ್ಟುಕೊಂಡಿದ್ದೇವೆ.