ಒಡಿಯೂರು ಸಂಸ್ಥಾನದಲ್ಲಿ ತುಳು ನಾಟಕೋತ್ಸವಕ್ಕೆ ಶ್ರೀಗಳಿಂದ ಚಾಲನೆ

0

ತುಳು ನಾಟಕ ಸ್ಪರ್ಧೆಗಳು ಬಾಷೆಯ ಉಳಿವಿಗೆ ಪೂರಕ: ಒಡಿಯೂರು ಶ್ರೀ

ವಿಟ್ಲ: ತುಳು ನಾಟಕ ಸ್ಪರ್ಧೆಗಳು ಬಾಷೆಯ ಉಳಿವಿಗೆ ಪೂರಕ. ತುಳು ಭಾಷೆ, ಸಂಸ್ಕೃತಿ ಉಳಿವಿಗೆ ಇಂತಹ ಕಾರ್ಯಕ್ರಮಗಳ ಅಗತ್ಯ ಬಹಳಷ್ಟಿದೆ. ಕಲಾವಿದರ ಪ್ರತಿಭೆಗಳ ಅನಾವರಣಕ್ಕೆ ಇಂತಹ ಕಾರ್ಯಕ್ರಮ ಗಳು ವೇದಿಕೆಯಾಗಿದೆ. ಇದು ಕೇವಲ ಸ್ಪರ್ಧೆಯಲ್ಲ, ನಾಟಕ ತಂಡಗಳಿಗಿರುವ ಪ್ರೋತ್ಸಾಹ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿರವರು ಹೇಳಿದರು.

ಅವರು ಕ್ಷೇತ್ರದ ರಾಜಾಂಗಣದಲ್ಲಿ ಡಿ.6ರ ವರೆಗೆ ನಡೆಯಲಿರುವ ಒಡಿಯೂರು ತುಳು ನಾಟಕೋತ್ಸವವನ್ನು ಡಿ.1ರಂದು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸ್ಪರ್ಧೆ ಜೀವನದಲ್ಲಿ ಅತೀ ಅಗತ್ಯ. ಸೂತ್ರದಾರನನ್ನು ಮರೆತರೆ ಜೀವನ ನಾಟಕ ಸುಂದರವಾಗಲು ಸಾಧ್ಯವಿಲ್ಲ. ಅಂತರಂಗ ಬಹಿರಂಗದ ಸೂತ್ರದಾರನೊಬ್ಬನೇ. ಸಂಸ್ಕೃತಿಯನ್ನು ತೋರಿಸುವ ಕೆಲಸ ಇಂತಹ ನಾಟಕ ಪ್ರದರ್ಶನದಿಂದ ಆಗಲು ಸಾಧ್ಯವಿದೆ. ಸ್ಪರ್ದೆ ಯ ಮೂಲಕ ಸಂಸ್ಕೃತಿಗೆ ಕೊಡುಗೆ ನೀಡುವ ಪ್ರಯತ್ನ ಕ್ಷೇತ್ರದಿಂದ ಆಗಲಿದೆ. ನಾಟಕಗಳಲ್ಲಿ ನೈತಿಕ ಮೌಲ್ಯ ತುಂಬಿಸುವ ಸಾರವಿರಬೇಕು. ಸಂಸ್ಕೃತಿಯ ಉಳಿವಿಗೆ ಬಾಷೆಯ ಪ್ರಾತಿನಿಧ್ಯ ಬಹಳಷ್ಟಿದೆ. ನಾಟಕಗಳೆಲ್ಲ ಉತ್ತಮ ಪ್ರದರ್ಶನ ಕಾಣಲಿ. ಸ್ಪರ್ದೆ ಕೇವಲ ಕಾಲ್ಪನಿಕ, ಪ್ರೋತ್ಸಾಹ ಎಲ್ಲರಿಗೂ ಸಿಗುವಂತಾಗಲಿ ಎಂದು ಅವರು ಶುಭಹಾರೈಸಿದರು.

ತುಳು ಅಕಾಡಮಿಯ ಮಾಜಿ ಅಧ್ಯಕ್ಷರಾದ ಎ.ಸಿ. ಬಂಡಾರಿರವರು ಮಾತನಾಡಿ ತುಳು ಭಾಷೆಯ ಪ್ರೀತಿ ಜನರಲ್ಲಿ ಮೂಡುವಂತೆ ಮಾಡುವಲ್ಲಿ ಶ್ರೀಗಳ ಪಾತ್ರ ಅಪಾರ. ತುಳುವಿನ ಸಂಸ್ಕೃತಿಯ ಉಳಿವಿಗೆ ಕ್ಷೇತ್ರದಿಂದ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದೆ. ತುಳು ಬಾಷೆಯ ಉಳಿವಿಗೆ ನಾಟಕಕಾರರ ಸಹಕಾರವೂ ಬಹಳಷ್ಟಿದೆ. ಎಲ್ಲರ ಸಹಕಾರಾದಿಂದ ತುಳು ಭಾಷೆಯ ಬೆಳವಣಿಗೆ ಇನ್ನಷ್ಟು ಆಗಲಿ ಎಂದರು.

ಒಡಿಯೂರ್ದ ತುಳು ನಾಟಕೋತ್ಸವದ ಸಂಚಾಲಕರಾದ ಕದ್ರಿ ನವನೀತ ಶೆಟ್ಟಿರವರು ಪ್ರಾಸ್ತಾವಿಕ ಮಾತುಗಳನ್ನಾಡಿ ನಾಟಕ ತಂಡಗಳು ಬಂದ ಬಳಿಕ ಪ್ರಾದೇಶಿಕ ನಾಟಕಗಳು ಕಡಿಮೆಯಾಗುತ್ತಾ ಹೋಯಿತು. ಒಟ್ಟು 17ತಂಡಗಳು ನಾಟಕ ಸ್ಪರ್ದೆಯಲ್ಲಿ ಭಾಗವಹಿಸಲಿದೆ. ನಾಟಕ ತಂಡಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಸೋಲು, ಗೆಲುವು ಸ್ಪರ್ದೆಯಲ್ಲಿ ಇದ್ದುದೇ ಆದರೆ ಕ್ಷೇತ್ರದಲ್ಲಿ ಕಾರ್ಯಕ್ರಮ ನೀಡುವ ಸುಯೋಗ ನಿಮಗೆಲ್ಲರಿಗೂ ಬಂದಿರುವುದು ಕುಶಿತರುವ ವಿಚಾರ ಎಂದರು.

ಸಾಧ್ವಿ ಶ್ರೀ ಮಾತಾನಂದಮಯಿ ದಿವ್ಯ ಉಪಸ್ಥಿತರಿದ್ದರು. ಉದ್ಯಮಿ ವಾಮಯ್ಯ ಬಿ.ಶೆಟ್ಟಿ ಚೆಂಬೂರು, ಉದ್ಯಮಿ ಚಂದ್ರಹಾಸ ಶೆಟ್ಟಿ ತಂಗೋಲಿ,ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಎ.ಸುರೇಶ್ ರೈ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯಶವಂತ ವಿಟ್ಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು‌. ಸಂತೋಷ್ ಭಂಡಾರಿ ವಂದಿಸಿದರು.

LEAVE A REPLY

Please enter your comment!
Please enter your name here