ಸುದ್ದಿ ಮಾಹಿತಿ ಟ್ರಸ್ಟ್ ನೇತೃತ್ವದಲ್ಲಿ ಜಿ.ಪಂ, ತಾ.ಪಂ, ನಗರಸಭೆ, ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಾಳೆ (ಜ.7) ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಸಸ್ಯ ಜಾತ್ರೆಗೆ ಚಾಲನೆ

0
  • ಬೆಳಿಗ್ಗೆ ಖಾಸಗಿ ಬಸ್ ನಿಲ್ದಾಣದಿಂದ ಮೆರವಣಿಗೆಯ ಮೆರಗು
  • ಸಸ್ಯಜಾತ್ರೆಯಲ್ಲಿ ನೂರಕ್ಕೂ ಅಧಿಕ ಆಕರ್ಷಕ ಮಳಿಗೆಗಳು ಭಾಗಿ
  • ತಜ್ಞರಿಂದ ವಿಚಾರ ಸಂಕಿರಣ
  • ವಿವಿಧ ಸ್ಪರ್ಧೆ ಸಾಂಸ್ಕೃತಿಕ ಕಾರ್ಯಕ್ರಮ
  • ಸಾಧಕರಿಗೆ ಸನ್ಮಾನ
  • ಜ.8ರಂದು ಸಂಜೆ ಸಮಾರೋಪ

ಪುತ್ತೂರು: ಸುದ್ದಿ ಮಾಹಿತಿ ಟ್ರಸ್ಟ್ ನೇತೃತ್ವದಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪುತ್ತೂರು ತಾಲೂಕು ಪಂಚಾಯತ್, ನಗರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜ.7 ಮತ್ತು 8ರಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಸಸ್ಯಜಾತ್ರೆ ಆಯೋಜಿಸಲಾಗಿದೆ ಎಂದು ಸುದ್ದಿ ಮಾಹಿತಿ ಟ್ರಸ್ಟ್ ಮುಖ್ಯಸ್ಥ ಡಾ.ಯು.ಪಿ.ಶಿವಾನಂದ ಹೇಳಿದರು.

ಸುದ್ದಿ ಮಾಹಿತಿ ಟ್ರಸ್ಟ್ ಮುಖ್ಯಸ್ಥ ಡಾ.ಯು.ಪಿ.ಶಿವಾನಂದರವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಭಾಸ್ಕರ್ ರೈ ಕಟ್ಟ, ಸಂತೋಷ್ ಕುಮಾರ್ ಶಾಂತಿನಗರ ಮತ್ತು ಕು.ಸಿಂಚನಾ ಊರುಬೈಲುರವರನ್ನು ಚಿತ್ರದಲ್ಲಿ ಕಾಣಬಹುದು.

ಜ.5ರಂದು ಮಂಗಳೂರು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಭಾರತದ ಮೂಲ ಕಸುಬಾದ ವ್ಯವಸಾಯ ಕ್ಷೇತ್ರ ಇಂದು ಅನೇಕ ಸಮಸ್ಯೆ, ಸಂಕಷ್ಟಗಳ ಜೊತೆಗೆ ಕೃಷಿಯಲ್ಲಿ ಆಸಕ್ತಿ ಕಡಿಮೆಯಾಗುತ್ತಿರುವುದು ಜಾಗತಿಕ ಮಟ್ಟದಲ್ಲಿಯೇ ಅತ್ಯಂತ ಕಳವಳಕ್ಕೆ ಈಡಾಗಿದೆ. ಉಣ್ಣುವ ಆಹಾರವೇ ತಯಾರಾಗದಿದ್ದರೆ ಭವಿಷ್ಯ ಹೇಗಿರಬಹುದೆಂಬ ಕಲ್ಪನೆಯೂ ಮಾಡಲು ಅಸಾಧ್ಯವಾಗಿದೆ. ಹಾಗಾಗಿ ಸರಳ ಮತ್ತು ಸುಲಭ ಕೃಷಿ ವಿಧಾನಗಳೊಂದಿಗೆ ಕೃಷಿಯಲ್ಲಿ ಸಮಸ್ಯೆ, ಸಂಕಷ್ಟ ದೂರ ಮಾಡಿ, ಉತ್ಪನ್ನಗಳ ಮೌಲ್ಯವರ್ಧನೆಯೊಂದಿಗೆ ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿಯೂ ಕೃಷಿ ಬಗ್ಗೆ ಆಸಕ್ತಿ ಹುಟ್ಟಿಸಿ ಮುಂದಿನ ಜನಾಂಗ ಕೃಷಿಯನ್ನು ಅನುಸರಿಸಿಕೊಂಡು ಹೋಗಲು ಆರೋಗ್ಯಕ್ಕಾಗಿ ಕೃಷಿ, ಅಲಂಕಾರಕ್ಕಾಗಿ ಕೃಷಿ ಎಂಬ ಮಹದಾಶಯದೊಂದಿಗೆ ಸುದ್ದಿ ಕೃಷಿ ಸೇವಾ ಕೇಂದ್ರ ಅಸ್ತಿತ್ವಕ್ಕೆ ಬಂದಿದೆ. ಕೃಷಿಕರಿಗೆ ನೆರವಾಗುವ ದೃಷ್ಟಿಕೋನದಿಂದ ಸುದ್ದಿ ಮಾಹಿತಿ ಟ್ರಸ್ಟ್ ಆಶ್ರಯದಲ್ಲಿ ಸುದ್ದಿ ಕೃಷಿ ಸೇವಾ ಕೇಂದ್ರ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಈಗಾಗಲೇ ಕೃಷಿ ಕೇಂದ್ರ ಕೆಲಸ ನಿರ್ವಹಿಸುತ್ತಿದ್ದು, ಬಂಟ್ವಾಳ ಹಾಗೂ ಮಂಗಳೂರಿನಲ್ಲೂ ಕೇಂದ್ರ ಆರಂಭಗೊಳ್ಳಲಿದೆ. ಸುದ್ದಿ ಕೃಷಿ ಸೇವಾ ಕೇಂದ್ರದ ಮುಂದುವರಿದ ಯೋಜನೆಗಳ ಭಾಗವಾಗಿ ಪುತ್ತೂರಿನಲ್ಲಿ ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಸುದ್ದಿ ಕೃಷಿ ಸೇವಾ ಕೇಂದ್ರದ ನೇತೃತ್ವದಲ್ಲಿ ಪುತ್ತೂರು ತಾ.ಪಂ, ದ.ಕ.ಜಿ.ಪಂ ಮತ್ತು ನಗರಸಭೆಯ ಸಹಯೋಗದಿಂದೊಂದಿಗೆ ಸಂಜೀವಿನಿ ಒಕ್ಕೂಟದ ಸಂತೆ, ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ದ.ಕ. ಜಿಲ್ಲಾ ವ್ಯಾಪ್ತಿಯ ಕೃಷಿ ವಿಚಾರ ಸಂಕಿರಣ ಹಾಗೂ ಗಿಡಗಳ, ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದೊಂದಿಗೆ ಸಸ್ಯ ಜಾತ್ರೆ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದ ಡಾ.ಯು.ಪಿ.ಶಿವಾನಂದರವರು ಕೃಷಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ, ಮನೆ ಮಂದಿಯಲ್ಲಿ ಆಸಕ್ತಿ ಮತ್ತು ಹೆಮ್ಮೆ ಮೂಡಿಸುವುದು, ಕೃಷಿಕರ ಮನೆ ಬಾಗಿಲಿಗೆ ಸೌಲಭ್ಯ, ಮಾರುಕಟ್ಟೆ, ಖರೀದಿ, ಮೌಲ್ಯವರ್ಧನೆಯ ಮಾಹಿತಿ ಒದಗಿಸಿ ಕೃಷಿಕರಿಗೆ ಪೂರ್ಣ ಸ್ವಾತಂತ್ರ್ಯದ ಸ್ವಾವಲಂಬಿ ಕೃಷಿ ಬದುಕು ನಿರ್ಮಿಸುವುದು ನಮ್ಮ ಧ್ಯೇಯವಾಗಿದೆ ಎಂದು ತಿಳಿಸಿದರು. ಕೃಷಿ ನರ್ಸರಿಗಳ ಪ್ರದರ್ಶನದ ಜೊತೆಗೆ ಸ್ಟಾಲ್‌ಗಳನ್ನು ಹಾಕಿ, ಅಲ್ಲಿ ಸ್ಥಳೀಯವಾಗಿ ಉತ್ಪಾದಿಸಿದ ಉತ್ಪನ್ನಗಳಿಗೆ ಮಾರಾಟ ಹಾಗೂ ಪ್ರದರ್ಶನಕ್ಕೆ ವೇದಿಕೆ ನೀಡಬೇಕೆಂಬುದು ಸಸ್ಯ ಜಾತ್ರೆ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದ ಅವರು ಮನೆಯಂಗಳದಲ್ಲಿ ಹೋಮ್ ಗಾರ್ಡನ್, ಟೆರೇಸ್ ಗಾರ್ಡನ್‌ಗಾಗಿ ಹೂವಿನ ಗಿಡ, ಹಣ್ಣಿನ ಗಿಡ, ತರಕಾರಿ ಗಿಡ ನೆಡುವುದರ ಮಾಹಿತಿ, ಔಷಧೀಯ ಸಸಿಗಳ ಬೆಳೆಸುವಿಕೆ, ಮನೆಮನೆಯಲ್ಲಿ ಜೇನು ಕೃಷಿ ಮಾಡುವ ಮುಖಾಂತರ ಮನೆಯಂಗಳ ಹಾಗೂ ಕೃಷಿಯಂಗಳದಲ್ಲಿ ಆರೋಗ್ಯಕರ ವಾತಾವರಣ ಕಲ್ಪಿಸುವುದೂ ನಮ್ಮ ಉದ್ದೇಶವಾಗಿದೆ ಎಂದರು.

ನಾಳೆ ಸಸ್ಯ ಜಾತ್ರೆ ಜಾಥಾ: ಜ. 7ರಂದು ಬೆಳಿಗ್ಗೆ ಪುತ್ತೂರಿನ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿ ಸಸ್ಯ ಜಾತ್ರೆಯ ಜಾಥಾಗೆ ಚಾಲನೆ ದೊರೆಯಲಿದೆ. ಬೆಳಿಗ್ಗೆ 9 ಗಂಟೆಗೆ ಸಮಾವೇಶಗೊಂಡು 9:30ಕ್ಕೆ ಮೆರವಣಿಗೆಗೆ ಚಾಲನೆ ನೀಡಲಾಗುವುದು, ಮುಖ್ಯ ಬಸ್ ನಿಲ್ದಾಣದ ಮೂಲಕ ಸಾಗಿ ಎಮ್.ಟಿ ರಸ್ತೆಯ ಮೂಲಕ ಮೆರವಣಿಗೆ ಮಿನಿ ವಿಧಾನ ಸೌಧ ತಲುಪಲಿದೆ. ಅಲ್ಲಿಂದ ಎಲ್ಲರೂ ಒಟ್ಟಾಗಿ ಕಿಲ್ಲೆ ಮೈದಾನದಲ್ಲಿ ಸ್ಟಾಲ್ ಗಳ ವೀಕ್ಷಣೆ ನಡೆಸಲಿದ್ದಾರೆ. ಶಿಕ್ಷಣ ಸಂಸ್ಥೆಗಳ, ಸಂಘ ಸಂಸ್ಥೆಗಳ ಸದಸ್ಯರು ತಮ್ಮ ತಮ್ಮ ಕೃಷಿ ಸಂಬಂಧಿ ಸ್ಲೋಗನ್ ಮತ್ತು ಬ್ಯಾನರ್‌ಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಆಕರ್ಷಕ ಕಲಾತಂಡಗಳು ಮೆರವಣಿಗೆಯ ಮುಂಚೂಣಿಯಲ್ಲಿ ಇರಲಿವೆ. ಬ್ಯಾಂಡ್ ವಾದ್ಯಗಳೊಂದಿಗೆ ಮೆರವಣಿಗೆ ಮೆರುಗು ಪಡೆಯಲಿದೆ. ಬೆಳಿಗ್ಗೆ ಮಳಿಗೆಗಳು ಉದ್ಘಾಟನೆಗೊಳ್ಳಲಿವೆ. ಜಾಥಾ ತಲುಪಿದ ಬಳಿಕ ಸಸ್ಯ ಜಾತ್ರೆಯ ಉದ್ಘಾಟನೆ ನಡೆಯಲಿದೆ. ಕೃಷಿ ತಜ್ಞರು, ಸಾಧಕರು, ಸಹಕಾರಿಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಂಜೀವಿನಿ ಒಕ್ಕೂಟದ ಸಾಧಕರು ಮತ್ತು ಕೃಷಿ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ತಿಳಿಸಿದ ಡಾ.ಶಿವಾನಂದರವರು ಜ.7 ಹಾಗು 8ರಂದು ಹಲವಾರು ವಿಷಯಗಳಲ್ಲಿ ತಜ್ಞರಿಂದ ವಿಚಾರ ಸಂಕಿರಣ ನಡೆಯಲಿದೆ ಎಂದು ತಿಳಿಸಿದರು. ಜ. 7ರಂದು ಅಪರಾಹ್ನ 2ರಿಂದ ವಿವಿಧ ತಜ್ಞರಿಂದ ಟೆರೇಸ್ ಗಾರ್ಡನ್‌ನಲ್ಲಿ ತರಕಾರಿ ಗಿಡಗಳು, ಹಣ್ಣಿನ ಗಿಡಗಳು, ಹೂವಿನ ಗಿಡಗಳು, ಅಲಂಕಾರಿಕ ಗಿಡಗಳು, ಔಷಧೀಯ ಸಸ್ಯಗಳು ಮತ್ತು ಮೀನು ಕೃಷಿ ಕುರಿತು ವಿಚಾರ ಸಂಕಿರಣ ನಡೆಯಲಿದೆ. ರಾತ್ರಿ 9.30ರವರೆಗೆ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.

ಜ. 8ರಂದು ಬೆಳಿಗ್ಗೆ ಅಡಿಕೆ ಕೃಷಿಯ ಸಮಸ್ಯೆಗಳು, ಅಡಿಕೆಗೆ ಪರ್ಯಾಯ ಕೃಷಿ, ಜೇನು ಕೃಷಿ, ಅಪರಾಹ್ನ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಕುರಿತು ಸಾಧಕರಿಂದ ಸಂವಾದ ನಡೆಯಲಿದೆ. ಸಂಜೆ 4ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು ರಾತ್ರಿ 9.30ರವರೆಗೆ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ಪ್ರತಿಯೊಂದು ವಿಚಾರ ಸಂಕಿರಣವನ್ನು ಅರ್ಥ ಪೂರ್ಣವಾಗಿ ಮತ್ತು ವ್ಯವಸ್ಥಿತವಾಗಿ ನಡೆಸುವ ದೃಷ್ಠಿಯಿಂದ ವಿಚಾರ ಸಂಕಿರಣದಲ್ಲಿ ಭಾಗವಹಿಸುವವರು ತಾವು ಭಾಗವಹಿಸುವ ವಿಷಯ ನಮೂದಿಸಿ ಸ್ಥಳಾವಕಾಶಕ್ಕಾಗಿ ನೋಂದಾವಣೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ಸುದ್ದಿ ಮಾಹಿತಿ ಟ್ರಸ್ಟಿನ ಭಾಸ್ಕರ್ ರೈ ಕಟ್ಟ, ಸಂತೋಷ್ ಕುಮಾರ್ ಶಾಂತಿನಗರ, ಕು.ಸಿಂಚನಾ ಊರುಬೈಲು, ಮಹಮ್ಮದ್ ಪೆರುವಾಯಿ ಮತ್ತು ಕುಶಾಲಪ್ಪ ಅಗಳಿರವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನೂರಕ್ಕೂ ಮಿಕ್ಕಿ ಮಳಿಗೆಗಳು: ವೆರೈಟಿ ಫುಡ್ ಕೋರ್ಟ್:

ಸಸ್ಯ ಜಾತ್ರೆಯಲ್ಲಿ ಅಲಂಕಾರಿಕ ಗಿಡಗಳು, ಹಣ್ಣಿನ ಗಿಡಗಳ ನರ್ಸರಿ, ಜೇನು, ಪೆಟ್ ಮತ್ತು ಫೀಡ್ಸ್ ಸ್ಟಾಲ್‌ಗಳು, ಕೃಷಿ ಸಂಬಂಧಿ ಮಾಹಿತಿಗಳ ಪುಸ್ತಕಗಳ ಮಳಿಗೆಗಳು ಸೇರಿದಂತೆ 100ಕ್ಕೂ ಮಿಕ್ಕಿ ಕೃಷಿ ಸಂಬಂಧಿ ಮಳಿಗೆಗಳು ಇರಲಿವೆ. ಸ್ಥಳೀಯ ತರಕಾರಿ, ಹಣ್ಣು ಹಾಗೂ ಇನ್ನಿತರ ಉತ್ಪನ್ನಗಳಿಂದ ತಯಾರಿಸಲಾದ ವಿವಿಧ ಬಗೆಯ ಖಾದ್ಯಗಳು ಸೇರಿದಂತೆ ವರೈಟಿ ಫುಡ್ ಕೋರ್ಟ್ ಮೇಳದ ಆಕರ್ಷಣೆಯಾಗಿವೆ ಎಂದು ಡಾ. ಶಿವಾನಂದರು ಮಾಹಿತಿ ನೀಡಿದರು.

ವಿವಿಧ ಕೃಷಿ ಸ್ಪರ್ಧೆಗಳು:

ವಿದ್ಯಾರ್ಥಿಗಳು ತಮ್ಮ ಕಲಿಕೆಯ ಜೊತೆ ಜೊತೆಗೆ ಕೃಷಿಯಲ್ಲಿ ಆಸಕ್ತಿ ತೆಗೆದುಕೊಳ್ಳಬೇಕೆಂಬ ದಿಶೆಯಲ್ಲಿ ವಿದ್ಯಾರ್ಥಿಗಳನ್ನು ಈ ಜಾತ್ರೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಆಶಯ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಸ್ಯ ಜಾತ್ರೆಯಲ್ಲಿ ಕೃಷಿಯ ಕುರಿತು ಚಿತ್ರ ರಚನೆ, ಪ್ರಬಂಧ, ಕೊಲಾಜ್, ಕವನ ಸ್ಪರ್ಧೆ, ಪೋಸ್ಟರ್ ಮೇಕಿಂಗ್, ಟ್ರೆಷರ್ ಗೇಮ್ಸ್, ಕೃಷಿ ಗಿಡಗಳನ್ನು, ಹೂವುಗಳನ್ನು ಗುರುತಿಸುವ ಸ್ಪರ್ಧೆ ಹಾಗೂ ಇತರ ಸ್ಪರ್ಧೆಗಳು ಏರ್ಪಡಿಸಲಾಗಿದೆ. ಅಮರ್ ಜವಾನ್ ಜ್ಯೋತಿ ಸ್ಮಾರಕದ ಸುತ್ತಲಿನ ಸ್ಥಳದಲ್ಲಿ ಈ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದ ಡಾ.ಶಿವಾನಂದರವರು ಸಭಾಂಗಣದಲ್ಲಿ ನಡೆಯುವ ಪ್ರತಿ ವಿಚಾರ ಸಂಕಿರಣದ ಬಗ್ಗೆ ಅಲ್ಲಿ ಭಾಗವಹಿಸಿದ್ದವರಿಂದ 5 ವಾಕ್ಯಗಳಲ್ಲಿ ನೀಡಿದ ಉತ್ತಮ ಪ್ರತಿಕ್ರಿಯೆಗಳ ಬಗ್ಗೆ ಸ್ಪರ್ಧೆ ನಡೆಯಲಿದೆ. ಸಸ್ಯ ಜಾತ್ರೆಯಲ್ಲಿ ಭಾಗವಹಿಸಿದ ಉತ್ತಮ 3 ಸ್ಟಾಲ್‌ಗಳ ಹಾಗು ಸಸ್ಯ ಜಾತ್ರೆಯ ಬಗ್ಗೆ ಲೇಖನ ಸ್ಪರ್ಧೆ ಏರ್ಪಡಿಸಲಾಗಿದೆ. ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ನನ್ನ ಮನೆ ನನ್ನ ಗಾರ್ಡನ್ ಸ್ಪರ್ಧೆ ನಡೆಯಲಿವೆ ಎಂದರು.

ಸಾಂಸ್ಕೃತಿಕ ರಸಸಂಜೆ:
ಕೃಷಿಕರಾದವರು ವರ್ಷದ ಎಲ್ಲಾ ದಿನಗಳಲ್ಲೂ ಕೃಷಿ ಬದುಕಿನ ಒತ್ತಡದಲ್ಲಿರುತ್ತಾರೆ. ಮೇಳ ಸುತ್ತಲು ಬರುವ ಕೃಷಿಕರು ಸಾರ್ವಜನಿಕರು ಒಂದಷ್ಟು ಹೊತ್ತು ಮನೋರಂಜನೆ ಪಡೆದುಕೊಳ್ಳಬೇಕೆಂಬ ಉದ್ದೇಶದಿಂದ ಸಸ್ಯ ಜಾತ್ರೆಯಲ್ಲಿ ಸಾಂಸ್ಕೃತಿಕ ರಸಸಂಜೆ ಆಯೋಜಿಸಲಾಗಿದೆ. ಪುರಭವನದ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳ ನಡುವಿನ ಸಮಯದಲ್ಲಿ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಪ್ರತೀ ದಿನ ಸಂಜೆ 6ರಿಂದ 9.30ರವರೆಗೆ ವಿವಿಧ ಶಾಲಾ ತಂಡಗಳಿಂದ ಆಯ್ದ ವಿಶೇಷ ನೃತ್ಯ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಡಾ.ಯು.ಪಿ.ಶಿವಾನಂದ ಮಾಹಿತಿ ನೀಡಿದರು.

ಭಾಗವಹಿಸುವ ಅತಿಥಿಗಳು:

ದ.ಕ. ಸಂಸದರಾದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಕೆಎಂಎಫ್ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ದ.ಕ. ಜಿಲ್ಲಾಧಿಕಾರಿ ರವಿಕುಮಾರ್, ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ. ಕುಮಾರ್, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್‌ಕುಮಾರ್ ಭಂಡಾರಿ, ಡಿ.ವೈ.ಎಸ್.ಪಿ. ಡಾ. ವೀರಯ್ಯ ಹಿರೇಮಠ್, ತಹಶೀಲ್ದಾರ್ ನಿಸರ್ಗಪ್ರಿಯ, ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್ ಹಾಗೂ ಸಮಾರೋಪ ಸಮಾರಂಭದಲ್ಲಿ ಸಹಕಾರಿ ರತ್ನ ಸವಣೂರು ಸೀತಾರಾಮ ರೈ, ಸಹಕಾರಿ ರತ್ನ ನಿತ್ಯಾನಂದ ಮುಂಡೋಡಿ, ಸಹಕಾರಿ ರತ್ನ ದಂಬೆಕ್ಕಾನ ಸದಾಶಿವ ರೈ, ಕೆ.ಎಂ.ಎಫ್.ಉಪಾಧ್ಯಕ್ಷ ಎಸ್.ಬಿ. ಜಯರಾಮ ರೈ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಂಘಸಂಸ್ಥೆಗಳ ಮುಖ್ಯಸ್ಥರು ಸಹಿತ ಹಲವರು ಭಾಗವಹಿಸಲಿದ್ದಾರೆ ಎಂದು ಡಾ.ಯು.ಪಿ.ಶಿವಾನಂದರವರು ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ವಿಶೇಷ ಆಕರ್ಷಣೆ

ಸಸ್ಯಮೇಳದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಆಕರ್ಷಣೆಯಾಗಿ ತಾರಾಲಯ, ಪ್ಲ್ಯಾನೆಟೇರಿಯಂ ಮತ್ತು ಮೀನಿನ ಪ್ರದರ್ಶನ ಮಳಿಗೆ ಅಕ್ವೇರಿಯಂ ಭಾಗವಹಿಸಲಿದೆ.

LEAVE A REPLY

Please enter your comment!
Please enter your name here