ಕೆಮ್ಮಾಯಿ ಜಲಾಲಿಯ ಪ್ರಥಮ ವಾರ್ಷಿಕ

0

ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಾವೆಲ್ಲ ಒಂದೇ ಎಂದು ಸಾರುವ ಅವಶ್ಯಕತೆ ಇದೆ -ಅಶೋಕ್ ರೈ ಕೋಡಿಂಬಾಡಿ

ಪುತ್ತೂರು: ಅಲ್‌ಹಾಜಿ ಸೈಯದ್ ಅಬೂಬಕರ್ ತಂಙಳ್ ಅಲ್‌ಹಾದಿ ಕೆಮ್ಮಾಯಿ ಇವರ ನೇತೃತ್ವದಲ್ಲಿ ಕೆಮ್ಮಾಯಿಯಲ್ಲಿ ನಡೆಸಿಕೊಂಡು ಬರುತ್ತಿರುವ ಜಲಾಲಿಯ ಇದರ ಪ್ರಥಮ ವಾರ್ಷಿಕದ ಪ್ರಯುಕ್ತ ಬುರ್ದಾ ಹಾಗೂ ಜಲಾಲಿಯ ಕಾರ್ಯಕ್ರಮ ಫೆ.8ರಂದು ಜರಗಿತು. ಇದರ ಅಂಗವಾಗಿ ಹಾಫಿಲ್ ಅನ್ವರ್ ಸಖಾಫಿ ಸಿರಿಯ ಮತ್ತು ಸಂಗಡಿಗರಿಂದ ಬುರ್ದಾ ಅಲಾಪನೆ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ರೈ ಎಸ್ಟೇಟ್ ಚಾರಿಟೇಬಲ್‌ನ ಅಧ್ಯಕ್ಷ ಅಶೋಕ್ ರೈ ಕೋಡಿಂಬಾಡಿ ಮಾತನಾಡಿ ರಾಜಕೀಯ ಲಾಭಕ್ಕಾಗಿ ಪರಸ್ಪರ ಧರ್ಮದ ಮಧ್ಯೆ ಸಂಘರ್ಷ ಉಂಟುಮಾಡು ಈ ಸಂದರ್ಭದಲ್ಲಿ ನಾವು ಪರಸ್ಪರ ಅನ್ಯೋನ್ಯತೆಯಿಂದ ಬಾಳಲು ಎಲ್ಲಾ ಧರ್ಮಗಳ ಧರ್ಮಗುರುಗಳು ಒಂದೆಡೆ ಕೂತು ಯುವಕರಿಗೆ ಧರ್ಮಗಳ ಬಗ್ಗೆ ಮನವರಿಕೆ ಮಾಡುವ ಕೆಲಸ ಆಗಬೇಕಾಗಿದೆ ಎಂದು ಅವರು ಹೇಳಿದರು. ಇಂತಹ ದಾರ್ಮಿಕ ಕಾರ್ಯಕ್ರಮಗಳ ಮೂಲಕ ನಾವೆಲ್ಲರೂ ಒಂದೇ ಎಂದು ಸಾರುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು. ಬಂದುಗಳು ಸಂಬಂಧಿಗಳು ಮಾತ್ರ ಆಗಿರದೆ ಕಷ್ಟಕಾಲದಲ್ಲಿ ಯಾರು ಸಹಕಾರಿಯಾಗುತ್ತಾರೊ ಅರೆ ನಿಜವಾದ ಬಂಧುಗಳಾಗುತ್ತಾರೆ ಎಂದು ಹೇಳಿದರು.

ಇನ್ನೊಬ್ಬರ ಕಷ್ಟಕಾಲದಲ್ಲಿ ಪಾಲ್ಗೊಳ್ಳುವವನೆ ನೈಜ ಮುಸ್ಲಿಮ: ಮುಖ್ಯ ಪ್ರಭಾಷಣಕಾರ ಕಲ್ಲೇಗ ಮಸೀದಿಯ ಮುದರ್ರಿಸ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಮಾತನಾಡಿ ಮುಸ್ಲಿಮರು ನೈಜ ಮುಸ್ಲಿಮರಾಗಲು ದ್ವೇಷ, ಅಸೂಯೆ, ಅಹಂಭಾವ, ತೊಡೆದು ಹಾಕಿ ಪ್ರೀತಿ ವಿಶ್ವಾಸ ಸೌಹಾರ್ದತೆಯಿಂದ ಜೀವಿಸುವವನೇ ನಿಜವಾದ ಮುಸ್ಲಿಮನಾಗುತ್ತಾನೆ. ತಮ್ಮ ನಾಲಗೆಯನ್ನು ಸೂಕ್ಷ್ಮತೆಯಿಂದ ಕಾಪಾಡಿಕೊಂಡು ಯಾರಿಗೂ ನೋವುಂಟು ಮಾಡದೆ ಯಾರಿಗೂ ಪರಸ್ಪರ ದೂಷಣೆ ಮಾಡದೆ ಇನ್ನೊಬ್ಬರ ಕಷ್ಟಕಾಲದಲ್ಲಿ ಪಾಲ್ಗೊಳ್ಳುವವನೆ ನೈಜ ಮುಸ್ಲಿಮನಾಗಿದ್ದಾನೆ. ಇದು ಅವನ ಪಾಲಿಗೆ ಈ ಲೋಕ ಮತ್ತು ಪರಲೋಕದ ವಿಜಯಕ್ಕೆ ಕಾರಣವಾಗಿದೆ. ದ್ಸಿಕ್ರ್‌ಗಳು ಮನುಷ್ಯರನ್ನು ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದ್ದು ಇಂತಹ ದ್ಸಿಕ್ರ್ ಮಜ್ಲಿಸ್‌ಗಳಲ್ಲಿ ಪಾಲ್ಗೊಳ್ಳುವ ಮೂಲಕ ಮನಶಾಂತಿ ಪಡೆಯಲು ಸಾಧ್ಯ.

ಶೈಖುನಾ ವಾಲೆಮುಂಡೋವು ಅಉಸ್ತಾದ್ ದುವಾಶೀರ್ವನ ನೀಡಿದರು. ಅಲ್‌ಹಾಜಿ ಸೈಯದ್ ಮುಹಮ್ಮದ್ ಅಲ್‌ಹಾದಿ ತಂಙಳ್ ಸಾಲ್ಮರರವರು ಆಶೀರ್ವಚನ ನೀಡಿದರು. ಸಾಲ್ಮರ ಸೈಯದ್ ಮಲೆ ಮಸೀದಿಯ ಖತೀಬ್ ಉಮರ್ ದಾರಿಮಿ ಸಾಲ್ಮರ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜಲಾಲಿಯ ಸಮಿತಿ ಕೋಶಾಧಿಕಾರಿ ಮೂಸ ಹಾಜಿ ಕೆಮ್ಮಾಯಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಗರಸಭಾ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮಾತನಾಡಿ ಜಲಾಲಿಯಾ ದ್ಸಿಕ್ರ್‌ನಂತಹ ಧಾರ್ಮಿಕ ಕಾರ್ಯಕ್ರಮಗಳು ಪರಸ್ಪರ ಶಾಂತಿ ಸೌಹಾರ್ದತೆ ಕಾಪಾಡಿಕೊಂಡು ಬರಲು ಸಾದ್ಯತೆಯಿದೆ. ಮತ್ತೊಬ್ಬರ ಕಷ್ಟದಲ್ಲಿ ಸಹಕರಿಸುವುದೇ ದೇವರ ಕೆಲಸ ಎಂದು ಹೇಳಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಬಿ ವಿಶ್ವನಾಥ ರೈ ಮಾತನಾಡಿ ನಾವೆಲ್ಲರೂ ಬೇರೆಬೇರೆ ಧರ್ಮದಿಂದ ಬಂದವರಾಗಿದ್ದು ಎಲ್ಲಾ ಧರ್ಮವನ್ನು ಪ್ರೀತಿಸುವಂತಹ ಮನೋಭಾವನೆ ನಮ್ಮಲ್ಲಿ ಬೆಳೆದರೆ ಈ ಜಗತ್ತಿನಲ್ಲಿ ಶಾಂತಿ, ಸೌಹಾರ್ದತೆಯಿಂದ ಬಾಳಲು ಸಾದ್ಯತೆಯಿದೆ. ಅಂತಹ ಒಂದು ಮನಸ್ಸು ನಮ್ಮೆಲ್ಲರಿಗೆ ಬರಬೇಕು. ಸಮಾಜದಲ್ಲಿ ಹೊಸ ಬೆಳಕು ಮೂಡಿಸುವಂತಹ ಕೆಲಸ ಇಂತಹ ಕಾರ್ಯಕ್ರಮದಲ್ಲಿ ಆಗಬೇಕು ಎಂದು ಹೇಳಿದರು.

ನ್ಯಾಯವಾದಿ ನೋಟರಿ ನೂರುದ್ದೀನ್ ಸಾಲ್ಮರರವರು ಮಾತನಾಡಿ ದ್ಸಿಕ್ರ್ ಮಜ್ಲಿಸ್, ಸ್ವಲಾತ್ ಮಜ್ಲಿಸ್‌ಗಳು ಧ್ಯಾನಿಗಳನ್ನು ಸಂಘಟಿಸಿ ನಮ್ಮನ್ನು ನಾವು ಪರಮಾತ್ಮನಲ್ಲಿ ಅರ್ಪಿಸಿ ಪ್ರವಾದಿಗಳ ಹೆಸರಿನಲ್ಲಿ ಸ್ವಲಾತ್‌ಗಳನ್ನು ಹೇಳುವ ಮೂಲಕ ನಮ್ಮ ಮನಶಾಂತಿ ಪಡೆದುಕೊಳ್ಳಲು ಸಸಹಕಾರಿಯಾಗಲಿದೆ ಎಂದು ಹೇಳಿದರು. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರು ಶಾಂತಿಯನ್ನು ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದರು. ಕೆಮ್ಮಾಯಿ ಅಬೂಬಕ್ಕರ್ ತಂಙಳ್‌ರವರಲ್ಲಿ ದಿನನಿತ್ಯ ನೂರಾರು ಮಂದಿ ನಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳುತ್ತಿದ್ದಾರೆ ಎಂದರು.

ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು ಮಾತನಾಡಿ ನಾವು ಹಿಂದೂ, ಮುಸ್ಲಿಮ್, ಕ್ರೈಸ್ತರೆನ್ನದೆ ಬೇಧ ಭಾವ ಮಾಡದೆ ಪರಸ್ಪರ ಒಂದೂಗೂಡಿ ಕೆಲಸ ಕಾರ್ಯಗಳಲ್ಲಿ ತೊಡಗಿದಾಗ ಸುಂದರ ಸಮಾಜ ನಿರ್ಮಾಣಕ್ಕೆ ಸಾಧ್ಯವಿದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಪರಸ್ಪರ ಶಾಂತಿ ಸಹಭಾಳ್ವೆ ನಡೆಸಲು ಸಾದ್ಯ ಎಂದರು.

ಪುತ್ತೂರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ, ಇಸ್ಮಾಯಿಲ್ ಸಾಲ್ಮರ, ಅಬ್ಬಾಸ್ ಹಾಜಿ ಸಾಲ್ಮರ, ಆದಂ ಕೆ. ಕೆಮ್ಮಾಯಿ, ಎಂ.ಜಿ.ಹಮೀದ್ ಕೆಮ್ಮಾಯಿ, ಝಕಾರಿಯಾ ದಾರಂದಕುಕ್ಕು, ಅಶ್ರಫ್ ಹಾಜಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಸ್ತಾನುಲ್ ಬಾದ್‌ಷಾ ಕೆಮ್ಮಾಯಿ ಇದರ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಾದಿಕ್ ಸ್ವಾಗತಿಸಿ ಅಬ್ದುಲ್ ರಹಿಮಾನ್ ವಂದಿಸಿದರು. ಕೆಮ್ಮಾಯಿ ಜಲಾಲಿಯಾ ಸಮಿತಿ ಕಾರ್ಯದರ್ಶಿ ಯೂಸುಫ್ ತಾರಿಗುಡ್ಡೆ ಹಾಗೂ ಇಸಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here