ಪುತ್ತೂರು: ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ಮಟ್ಟಹಾಕಲು ಸಾಧ್ಯವೇ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದೆ. ತಾನು ಭ್ರಷ್ಟನಲ್ಲದೇ ಇದ್ದಾಗ ಮಾತ್ರ ಇತರರು ಭ್ರಷ್ಟರಾಗುವುದನ್ನು ತಡೆಯಲು ಸಾಧ್ಯವಿದೆ, ಪುತ್ತೂರಿನ ಸುದ್ದಿ ಪತ್ರಿಕೆಯ ಹೋರಾಟದಿಂದ ಲಂಚ ಪಡೆದುಕೊಳ್ಳುವಾತನಿಗೆ ಸ್ವಲ್ಪಮಟ್ಟಿನ ನಾಚಿಕೆ ಹುಟ್ಟಿಕೊಂಡಿದೆ ಎಂದು ಪುತ್ತೂರಿನ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹೇಳಿದರು.
![](https://puttur.suddinews.com/wp-content/uploads/2023/04/279246114_529451198745708_3563805633479504965_n.jpg)
ಬಡಗನ್ನೂರಿನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಪುತ್ತೂರಿನಲ್ಲಿ ಹಣ ಕೊಡದೆ ಯಾವುದೇ ಕೆಲಸವೂ ಆಗುವುದಿಲ್ಲ ಎಂದು ಹಲವರು ಬಂದು ನನ್ನಲ್ಲಿ ಹೇಳಿಕೊಂಡಿದ್ದಾರೆ. ಆದರೆ ಈ ವಿಚಾರದಲ್ಲಿ ಯಾರೂ ಏನೂ ಮಾಡುವ ಹಾಗಿರಲಿಲ್ಲ, ನಮಗೆ ಅಧಿಕಾರವಿಲ್ಲದ ಕಾರಣ ಅಧಿಕಾರದಲ್ಲಿರುವವರು ಬಡವರ ರಕ್ತ ಹೀರಿದರೆ ನಾವು ಏನು ಮಾಡಲು ಸಾಧ್ಯವಾಗುತ್ತದೆ. ಹಲವರು ಬಂದು ಪುತ್ತೂರಿನ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕಿದ್ದಾರೆ, ಅವರ ಶಾಪ ತಟ್ಟಿದೆ. ಶಾಸಕಾರಾಗಿದ್ದವರನ್ನು ಅವರ ಪಕ್ಷದವರೇ ಹೊರ ಹಾಕಿದ್ದಾರೆ ಎಂದು ವ್ಯಂಗ್ಯವಾಡಿದರು. ನಾವು ಮಾಡಿದ್ದೆಲ್ಲವೂ ಸರಿ ಎನ್ನುತ್ತಿದ್ದ ಬಿಜೆಪಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ. ಪುತ್ತೂರಿನಲ್ಲಿ ಭೃಷ್ಟಾಚಾರ , ಲಂಚವನ್ನು ನಿಲ್ಲಿಸಲು ತಾನು ಸಂಪೂರ್ಣ ಕಟಿಬದ್ದನಾಗಿದ್ದು ಜನರ ಸಹಕಾರ ಮತ್ತು ಆಶೀರ್ವಾದ ಮುಖ್ಯ ಎಂದು ಹೇಳಿದರು.