ನೆಲ್ಯಾಡಿ ಪೇಟೆಯಲ್ಲಿ ಅಸಮರ್ಪಕ ಚರಂಡಿ ನಿರ್ವಹಣೆ-ಗುತ್ತಿಗೆದಾರರಿಂದ ಸಿಗದ ಸ್ಪಂದನೆ: ಜೂ.9ಕ್ಕೆ ಪ್ರತಿಭಟನೆಗೆ ನಿರ್ಧಾರ

0

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ವೇಳೆ ನೆಲ್ಯಾಡಿ ಪೇಟೆಯಲ್ಲಿ ಅಸಮರ್ಪಕ ಚರಂಡಿ ನಿರ್ವಹಣೆಯಿಂದ ಆಗುತ್ತಿರುವ ತೊಂದರೆ ಹಾಗೂ ಕಾಮಗಾರಿಯಿಂದಾಗಿ ಉಂಟಾಗಿರುವ ಇನ್ನಿತರ ಸಮಸ್ಯೆ ಬಗೆಹರಿಸುವಂತೆ ಮಾಡಿದ ಮನವಿಗೆ ಗುತ್ತಿಗೆದಾರರೂ ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡದೇ ಇರುವ ಹಿನ್ನೆಲೆಯಲ್ಲಿ ಜೂ.9ರಂದು ನೆಲ್ಯಾಡಿಯಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಪ್ರತಿಭಟನೆ ನಡೆಸಲು ನೆಲ್ಯಾಡಿ ವರ್ತಕರ ಹಾಗೂ ಕಟ್ಟಡ ಮಾಲಕರ ಸಂಘದ ಸಭೆಯಲ್ಲಿ ನಿರ್ಧರಿಸಲಾಗಿದೆ.


ಸಭೆ ಜೂ.೩ರಂದು ನೆಲ್ಯಾಡಿ ಕೌಕ್ರಾಡಿ ಕಟ್ಟಡ ಮಾಲಕರ ಸಂಘದ ಅಧ್ಯಕ್ಷ ಎ.ಕೆ.ವರ್ಗೀಸ್ ಅವರ ಅಧ್ಯಕ್ಷತೆಯಲ್ಲಿ ನೆಲ್ಯಾಡಿ ಡಿಯೋನ್ ಸ್ಕ್ವೇರ್‌ನಲ್ಲಿ ನಡೆಯಿತು. ಚತುಷ್ಪಥ ಹೆದ್ದಾರಿ ನಿರ್ಮಾಣ ಸಂದರ್ಭ ನೆಲ್ಯಾಡಿ ಪೇಟೆಯಲ್ಲಿ ಚರಂಡಿ ಮಾಡಲಾಗಿದ್ದರೂ ಅದರ ಒಳಗಡೆ ಮಣ್ಣು, ಸಿಮೆಂಟ್‌ನ ತುಂಡು, ಕಸಕಡ್ಡಿ ಸೇರಿದಂತೆ ಇತರೇ ತ್ಯಾಜ್ಯಗಳೂ ತುಂಬಿಕೊಂಡಿವೆ. ಇದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗದೇ ಸಮಸ್ಯೆಯಾಗಲಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದ ಗುತ್ತಿಗೆದಾರರಾದ ಕೆಎನ್‌ಆರ್ ಕನ್‌ಸ್ಟ್ರಕ್ಷನ್ ಕಂಪನಿಯ ಇಂಜಿನಿಯರ್ ಮಹೇಂದ್ರ ಸಿಂಗ್‌ರವರು ಜೂ.೩ರೊಳಗೆ ಎಲ್ಲಾ ಅವ್ಯವಸ್ಥೆಗಳನ್ನು ಸರಿಪಡಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಗುತ್ತಿಗೆದಾರರೂ ಈ ತನಕ ಯಾವುದೇ ರೀತಿಯ ಸ್ಪಂದನೆ ನೀಡದೇ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಜೂ.9ರಂದು ಬೆಳಿಗ್ಗೆ 10 ಗಂಟೆಗೆ ನೆಲ್ಯಾಡಿ ಪೇಟೆಯಲ್ಲಿ ಪ್ರತಿಭಟನೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ನೆಲ್ಯಾಡಿಯ ಶಾಲಾ ಕಾಲೇಜು ಹಾಗೂ ವಿವಿಧ ಸಂಘ ಸಂಸ್ಥೆಯವರನ್ನು ಪ್ರತಿಭಟನೆಯಲ್ಲಿ ಸೇರಿಸಿಕೊಳ್ಳುವುದು. ಪ್ರತಿಭಟನೆ ಕುರಿತು ಸಂಸದರು, ಶಾಸಕರು, ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್, ತಹಶೀಲ್ದಾರ್, ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಲೂ ಸಭೆಯಲ್ಲಿ ನಿರ್ಧರಿಸಲಾಯಿತು.


ಪ್ರಮುಖ ಬೇಡಿಕೆ:
ನೆಲ್ಯಾಡಿ ಪೇಟೆಯಲ್ಲಿ ರಿಕ್ಷಾ, ಜೀಪು ನಿಲ್ದಾಣ ವ್ಯವಸ್ಥೆ, ಚರಂಡಿಗಳಲ್ಲಿ ತ್ಯಾಜ್ಯ ಹಾಗೂ ಇನ್ನಿತರ ವಸ್ತುಗಳು ತುಂಬಿಕೊಂಡಿದ್ದು ಅದನ್ನು ತೆರವುಗೊಳಿಸಬೇಕು. ಡ್ರೈನೇಜ್‌ನ ಮೇಲ್ಭಾಗದ ಫೂಟ್‌ಪಾತ್‌ಗಳ ಮುಚ್ಚಳ ಹಾಕಬೇಕು. ಹೆದ್ದಾರಿ ನೀರು ಡ್ರೈನೇಜ್ ಮೂಲಕವೇ ಹರಿದು ಹೋಗಲು ಸೂಕ್ತ ಕ್ರಮ ಕೈಗೊಳ್ಳಬೇಕು, ಪೇಟೆಯ ಸರ್ವೀಸ್ ರಸ್ತೆಯ ಡ್ರೈನೇಜ್‌ಗೆ ಹೊಸವಲಯದಿಂದ ಬರುವ ಲಿಂಕ್ ರಸ್ತೆಗಳ ಡ್ರೈನೇಜ್ ವ್ಯವಸ್ಥೆಯನ್ನು ಸರಿಪಡಿಸಿಕೊಡುವುದು. ಸರ್ವೀಸ್ ರೋಡ್‌ಗಳಿಗೆ ಹೊರವಲಯದಿಂದ ಬರುವ ಲಿಂಕ್ ರಸ್ತೆಗಳ ಕಾಮಗಾರಿಯನ್ನು ಸಮರ್ಪಕ ರೀತಿಯಲ್ಲಿ ಮಾಡಿಕೊಡುವುದು ಸೇರಿದಂತೆ ಕಾಮಗಾರಿಯಿಂದ ಆಗಿರುವ ಇನ್ನಿತರ ಸಮಸ್ಯೆಗಳ ಬಗ್ಗೆ ಪ್ರತಿಭಟನೆ ಸಂದರ್ಭದಲ್ಲಿ ಗುತ್ತಿಗೆದಾರರ ಗಮನ ಸೆಳೆಯಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯಲ್ಲಿ ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಉಪಾಧ್ಯಕ್ಷ ಗಣೇಶ್ ಕೆ. ರಶ್ಮಿ, ಸತೀಶ್ ದುರ್ಗಾಶ್ರೀ, ಮೋಹನ್ ದೋಂತಿಲ, ಜಾನ್ ಪಿ.ಎಸ್. ಮತ್ತಿತರರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ರವಿಚಂದ್ರ ಹೊಸವಕ್ಲುರವರು ವಿಚಾರ ಮಂಡಿಸಿದರು.

LEAVE A REPLY

Please enter your comment!
Please enter your name here