ವಿವೇಕಾನಂದ ಪದವಿ ಕಾಲೇಜಿನಲ್ಲಿ ಮಾದಕ ವಸ್ತುಗಳ ಸೇವನೆ, ಅಕ್ರಮ ಸಾಗಣೆ ವಿರುದ್ಧ ದಿನಾಚರಣೆ

0

ಡ್ರಗ್ಸ್ ಇಡೀ ಸಮಾಜವನ್ನೇ ಹಾಳು ಮಾಡುತ್ತದೆ-ಡಾ. ಗಾನ ಪಿ. ಕುಮಾರ್

ಪುತ್ತೂರು: ಡ್ರಗ್ಸ್ ನಿಂದ ಆಗುವ ಅಡ್ಡ ಪರಿಣಾಮಗಳು ಹಲವಾರು. ಡ್ರಗ್ಸ್ ಒಬ್ಬರನ್ನು ಹಾಳು ಮಾಡುವುದಿಲ್ಲ ಇಡೀ ಸಮಾಜವನ್ನು ಹಾಳು ಮಾಡಿಬಿಡುತ್ತದೆ. ಡ್ರಗ್ಸ್ ಸೇವನೆಯಿಂದ ಶೇ.70ರಷ್ಟು ಜನ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇತ್ತೀಚಿನ ಯುವಜನಾಂಗ ಈ ವಿಚಾರವಾಗಿ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಪುತ್ತೂರು ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ಹೇಳಿದರು. ಪೊಲೀಸ್ ಇಲಾಖೆ, ಎನ್.ಸಿ.ಸಿ, ಎನ್.ಎಸ್.ಎಸ್ ಹಾಗೂ ಐಕ್ಯುಎಸಿ ಜಂಟಿ ಆಶ್ರಯದಲ್ಲಿ ನಡೆದ ಅಂತರ್ರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆ ವಿರುದ್ಧದ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ನಾವು ತೆಗೆದುಕೊಳ್ಳುವ ಮಾತ್ರೆ, ವಿಕ್ಸ್, ಜ್ಯೂಸ್ ಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇರುತ್ತದೆ. ಆದಷ್ಟು ಇವುಗಳನ್ನು ಜಾಗರೂಕತೆಯಿಂದ ಬಳಸಬೇಕು. ಒಮ್ಮೆ ಡ್ರಗ್ಸ್ ಗೆ ದಾಸರಾದ ಮೇಲೆ ಅದರಿಂದ ಹೊರ ಬರುವ ಮಾರ್ಗ ಅತ್ಯಂತ ಕಠಿಣ. ಡ್ರಗ್ಸ್ ಅಪಾಯಕಾರಿಯಾಗಲು ಹಲವಾರು ವೈಜ್ಞಾನಿಕ ಕಾರಣಗಳಿವೆ. ಯಾರಾದರೂ ತಪ್ಪು ದಾರಿ ತುಳಿಯುತ್ತಿದ್ದಾರೆ ಎಂದು ತಿಳಿದಾಕ್ಷಣ ಅದನ್ನ ಅಧ್ಯಾಪಕರಿಗೆ ಅಥವಾ ಪೊಲೀಸರಿಗೆ ತಿಳಿಸಬೇಕು ಎಂದು ಅವರು ಹೇಳಿದರು.

ನಗರ ಪೊಲೀಸ್ ಠಾಣೆಯ ಎಸ್‌ಐ ಶ್ರೀಕಾಂತ ಮಾತನಾಡಿ, ಇದೊಂದು ಜಾಗೃತಿ ಕಾರ್ಯಕ್ರಮವಾಗಿದ್ದು, ಜಗತ್ತಿನ ಮೂಲೆ ಮೂಲೆಗಳಲ್ಲಿ ಆಚರಿಸಲಾಗುತ್ತಿದೆ. ಸಮಾಜದಲ್ಲಿನ ಕುರುಹುಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಹಾಗೆಯೇ ಡ್ರಗ್ಸ್ ಕೂಡಾ ಒಂದು ಸಾಮಾಜಿಕ ಕುರುಹು. ವಿದ್ಯಾರ್ಥಿಗಳು ಇದರಿಂದ ದೂರವಿರಬೇಕು. ಡ್ರಗ್ಸ್ ತೆಗೆದುಕೊಳ್ಳುವುದು ಮಾತ್ರ ಅಪರಾಧವಲ್ಲದೆ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಡ್ರಗ್ಸ್ ನಿಂದ ದೂರವಿರೋಣ ಸ್ವಸ್ಥ ಸಮಾಜವನ್ನು ನಿರ್ಮಿಸೋಣ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ದೇಶದಲ್ಲಿ 75 ಕೋಟಿ ಜನರು ಡ್ರಗ್ಸ್ ದಾಸರಾಗಿದ್ದಾರೆ. ಇದರಿಂದ ದಿನದಿಂದ ದಿನಕ್ಕೆ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಡ್ರಗ್ಸ್ ಒಳಗಾಗುವವರು 19 ರಿಂದ 21 ವಯಸ್ಸಿನವರು. ಈ ವಯಸ್ಸಿನಲ್ಲಿ ಇದರಲ್ಲಿ ಪಾಲ್ಗೊಂಡು ಬದುಕನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಈ ರೀತಿ ನಶೆ ಸೇವಿಸುವ ಜನರು ಕಂಡುಬಂದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಎಲ್ಲರೂ ಈ ಒಳ್ಳೆ ಕಾರ್ಯದಲ್ಲಿ ಪಾಲ್ಗೊಳ್ಳೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥ ಮತ್ತು ವಿಶೇಷ ಅಧಿಕಾರಿ ಡಾ. ಶ್ರೀಧರ್ ನಾಯಕ್ ಮತ್ತು ಪುತ್ತೂರು ಘಟಕದ ಬಿಟಿ ಪೊಲೀಸ್ ಸುರೇಶ್ ಉಪಸ್ಥಿತರಿದ್ದರು. ಲೆಫ್ಟಿನೆಂಟ್ ಭಾಮಿ ಅತುಲ್ ಶೆಣೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here