ಸರ್ವೆ: ಕರ್ಮಿನಡ್ಕದಲ್ಲಿ ಸರಕಾರಿ ಜಾಗ ಕಬಳಿಕೆಗೆ ಯತ್ನ ಆರೋಪ

0

ಸ್ಥಳಕ್ಕೆ ಅಧಿಕಾರಿಗಳ ಭೇಟಿ, ಪರಿಶೀಲನೆ-ಕಂಬ, ತಂತಿ ಜಪ್ತಿ

ಪುತ್ತೂರು: ಸರ್ವೆ ಗ್ರಾಮದ ಸೊರಕೆ ಸಮೀಪದ ಕರ್ಮಿನಡ್ಕ ಎಂಬಲ್ಲಿ ಖಾಸಗೀ ವ್ಯಕ್ತಿಯೋರ್ವರು ಸರಕಾರಿ ಜಾಗ ಕಬಳಿಸಲು ಅಕ್ರಮವಾಗಿ ಬೇಲಿ ಹಾಕಿದ್ದಾರೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಗ್ರಾಮ ಆಡಳಿತಾಧಿಕಾರಿ ಮತ್ತು ಕೆಸಿಡಿಸಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬೇಲಿ ತೆರವುಗೊಳಿಸಿ, ತಂತಿ ಹಾಗೂ ಕಂಬವನ್ನು ಜಪ್ತಿ ಮಾಡಿದ ಘಟನೆ ಆ.10ರಂದು ನಡೆದಿದೆ.

ಕರ್ಮಿನಡ್ಕದಲ್ಲಿರುವ ಕರ್ನಾಟಕ ಗೇರು ಅಭಿವೃದ್ಧಿ ನಿಗಮಕ್ಕೆ ಸೇರಿದ ಜಾಗವನ್ನು ಕಬಳಿಸಲು ಯಾರೋ ಬೇಲಿ ಹಾಕುತ್ತಿದ್ದಾರೆ ಎಂದು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಕೆಸಿಡಿಸಿ ಕಿರಿಯ ಕ್ಷೇತ್ರ ಸಹಾಯಕ ಶರತ್ ಪಿ.ಎನ್ ಹಾಗೂ ಸಿಬ್ಬಂದಿಗಳು ಮತ್ತು ಗ್ರಾಮ ಸಹಾಯಕ ಉಮೇಶ್ ಕಾವಡಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಈ ವೇಳೆ ಸುಮಾರು 2 ಎಕರೆಯಷ್ಟು ಜಾಗವನ್ನು ಕಬಳಿಸಲು ಯತ್ನಿಸಲಾಗಿತ್ತು ಎನ್ನುವ ಮಾಹಿತಿ ತಿಳಿದು ಬಂದಿದೆ. ಬೇಲಿ ಹಾಕಲು ಅಳವಡಿಸಿದ್ದ 17 ಕಂಬ ಹಾಗೂ ತಂತಿಯನ್ನು ಕೆಸಿಡಿಸಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಜಪ್ತಿ ಮಾಡಿ ಕೊಂಡೊಯ್ದಿದ್ದಾರೆ. ಅಧಿಕಾರಿಗಳು ಭೇಟಿ ನೀಡುವ ವೇಳೆ ಮುಂಡೂರು ಗ್ರಾ.ಪಂ ಸದಸ್ಯ ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ ಸ್ಥಳದಲ್ಲಿದ್ದು ಸಹಕಾರ ನೀಡಿದರು.
ಕರ್ಮಿನಡ್ಕದಲ್ಲಿ ಕೆಸಿಡಿಸಿ ಜಾಗವನ್ನು ಖಾಸಗೀ ವ್ಯಕ್ತಿಯೋರ್ವರು ಅತಿಕ್ರಮಣಕ್ಕೆ ಮುಂದಾಗಿರುವ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ನಾವು ಕಂಬ ಮತ್ತು ತಂತಿಯನ್ನು ಸೀಝ್ ಮಾಡಿದ್ದೇವೆ. ಜಾಗ ಅತಿಕ್ರಮಣಕ್ಕೆ ಮುಂದಾದ ವಿಚಾರವಾಗಿ ತನಿಖೆ ನಡೆಸುತ್ತೇವೆ ಎಂದು ಕೆಸಿಡಿಸಿ ಕಿರಿಯ ಕ್ಷೇತ್ರ ಸಹಾಯಕ ಶರತ್ ಪಿ.ಎನ್ ತಿಳಿಸಿದ್ದಾರೆ.

ಸರಕಾರಿ ಜಾಗ ಕಬಳಿಸಿದರೆ ನಿರ್ದಾಕ್ಷಿಣ್ಯ ಕ್ರಮ-ಶರತ್ ಪಿ.ಎನ್
ಸರಕಾರಿ ಜಾಗವನ್ನು ಕಬಳಿಸಲು ಯಾರಿಗೂ ಅವಕಾಶವಿಲ್ಲ. ಕೆಸಿಡಿಸಿಗೆ ಸೇರಿದ ಜಾಗವನ್ನು ಯಾರೇ ಕಬಳಿಸಲು ಮುಂದಾದರೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೆಸಿಡಿಸಿ ಕಿರಿಯ ಕ್ಷೇತ್ರ ಸಹಾಯಕ ಶರತ್ ಪಿ.ಎನ್ ತಿಳಿಸಿದ್ದಾರೆ.

ವಾರದ ಹಿಂದೆ ನೆಕ್ಕಿತ್ತಡ್ಕದಲ್ಲೂ ಜಾಗ ಕಬಳಿಕೆಗೆ ಯತ್ನಿಸಲಾಗಿತ್ತು:
ವಾರದ ಹಿಂದೆಯಷ್ಟೇ ವಿಟ್ಲ ಸಮೀಪದ ಸೈನಿಕರೋರ್ವರು ತನಗೆ ಮಂಜೂರಾದ ಜಾಗವೆಂದು ಹೇಳಿ ಸರ್ವೆ ಗ್ರಾಮದ ನೆಕ್ಕಿತ್ತಡ್ಕದಲ್ಲಿ ಸರಕಾರಿ ಜಾಗಕ್ಕೆ ಬೇಲಿ ಹಾಕಲು ಮುಂದಾದ ಘಟನೆ ನಡೆದಿತ್ತು. ಬಳಿಕದ ಬೆಳವಣಿಗೆಯಲ್ಲಿ ಅಧಿಕಾರಿಗಳು, ಗ್ರಾ.ಪಂ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಅಗರ್(ಅಗಲು) ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರು. ಇದೀಗ ಅದೇ ಜಾಗದ ಅನತಿ ದೂರದಲ್ಲಿ ಇನ್ನೊಂದು ಜಾಗ ಕಬಳಿಕೆ ಯತ್ನ ನಡೆದಿದೆ.

LEAVE A REPLY

Please enter your comment!
Please enter your name here