ಪುತ್ತೂರು: ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೊಳಪಟ್ಟ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುದಾಗ ಅಲ್ಲಿ ಮೃತಪಟ್ಟಿರುವ ಘಟನೆ ಆ.14 ರಂದು ನಡೆದಿದ್ದು, ಬಾಲಕನ ತಂದೆ ನೀಡಿದ ದೂರಿನಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಯ ತಾಲೂಕು ಕಸಬಾ ಗ್ರಾಮದ ಕೃಷ್ಣ ಜಿ ಎಂಬವರ ಅಣ್ಣನ ಮಗ 17 ವರ್ಷದ ಬಾಲಕ ಮೃತಪಟ್ಟವರು. ಬಾಲಕನಿಗೆ ಹೊಟ್ಟೆನೋವೆಂದು ಆ.12 ರಂದು ರಾತ್ರಿ ಪುತ್ತೂರು ಚೇತನಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆಗ ಡ್ಯೂಟಿ ಡಾಕ್ಡರ್ ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡರು.. ಆ.13 ರಂದು ಬೆಳಿಗ್ಗೆ ವೈದ್ಯರು ಬಂದಾಗ ಶಸ್ತ್ರ ಚಿಕಿತ್ಸೆ ಮಾಡಿಸುವ ಎಂದು ತಿಳಿಸಿದಂತೆ ಆಸ್ಪತ್ರೆಯ ಡಾಕ್ಟರ್ ಸಂಜೆ ಸುಮಾರು 06.00 ಗಂಟೆಗೆ ಬಾಲಕನನ್ನು ಶಸ್ತ್ರ ಚಿಕಿತ್ಸೆ ಮುಗಿಸಿ ವಾಪಾಸು ಐ.ಸಿ.ಯು ವಾರ್ಡ್ಗೆ ಕರೆತಂದು ಶಸ್ತ್ರಚಿಕಿತ್ಸೆ ಮಾಡಿದ ವಿಚಾರ ತಿಳಿಸಿ ನಂತರದ ಚಿಕಿತ್ಸೆ ನೀಡಿರುತ್ತಾರೆ. ಆ.14 ರಂದು ಸುಮಾರು 09.00 ಗಂಟೆಗೆ ಚೇತನಾ ಆಸ್ಪತ್ರೆಯ ವೈದ್ಯರು ಬಾಲಕನನ್ನು ನೋಡಿಕೊಳ್ಳಲು ನಮ್ಮಲ್ಲಿ ಸರಿಯಾದ ಉಪಕರಣ ಇಲ್ಲ ಕೂಡಲೇ ಮಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದ ಪ್ರಕಾರ ಬಾಲಕನನ್ನು ಮನೆಯವರೊಂದಿಗೆ ಆಂಬುಲೆನ್ಸ್ ವಾಹನದಲ್ಲಿ ಮಂಗಳೂರಿನ ಜ್ಯೋತಿ ವೃತ್ತದಲ್ಲಿರುವ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು. ಅಲ್ಲಿ ಮಧ್ಯಾಹ್ನ 12.00 ಗಂಟೆ ಸುಮಾರಿಗೆ ವೈದ್ಯರು ಪರೀಕ್ಷಿಸಿ ಬಾಲಕನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಕೃಷ್ಣ ಜಿ ಅವರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.