ದಕ್ಷಿಣ ಕನ್ನಡ ಜಿಲ್ಲಾ ತೆಂಗು ಉತ್ಪಾದಕರ ಕಂಪನಿಯಿಂದ ಕೃಷಿ ಮಾಹಿತಿ ಕಾರ್ಯಗಾರ, ಶೇರು ಪ್ರಮಾಣ ಪತ್ರ ವಿತರಣೆ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ತೆಂಗು ಉತ್ಪಾದಕರ ಕಂಪನಿ ಮತ್ತು ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ಜಂಟಿ ಸಹಯೋಗದಲ್ಲಿ ಉಚಿತ ಕೃಷಿ ಮಾಹಿತಿ ಕಾರ್ಯಗಾರ ಮತ್ತು ಶೇರು ಪ್ರಮಾಣ ಪತ್ರ ವಿತರಣೆಯು ಆ.28ರಂದು ಜೈನ ಭವನದಲ್ಲಿ ನಡೆಯಿತು.


ವೈಜ್ಞಾನಿಕ ವಿಧಾನಗಳಿಂದ ಅಧಿಕ ಇಳುವರಿ ಸಾಧ್ಯ-ಡಾ| ರಶ್ಮೀ ಆರ್:
ಸಂಪನ್ಮೂಲ ವ್ಯಕ್ತಿಯಾಗಿದ್ದ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ತೋಟಗಾರಿಕಾ ವಿಜ್ಞಾನಿ ಡಾ.ರಶ್ಮೀ ಆರ್ ಮಾತನಾಡಿ, ಕರಾವಳಿಯಲ್ಲಿ ರೈತರು ತೆಂಗನ್ನು ಉಪ ಬೆಲೆಯನ್ನಾಗಿ ಮಾಡಿದ್ದು ತೆಂಗಿಗೆ ವಿಶೇಷ ಆಶಕ್ತಿ ನೀಡದೇ ಇರುವುದರಿಂದ ಇಳುವರಿ ಕಡಿಮೆಯಾಗಿದೆ. ತೆಂಗು ಕೃಷಿಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಿದಾಗ ಅಧಿಕ ಇಳುವರಿ ದೊರೆಯಲಿದೆ. ಸಮಗ್ರ ಪೋಷಕಾಂಶಗಳ ಕೊರತೆಯಿಂದ ನುಸಿ ರೋಗಗಳಂತ ಖಾಯಿಲೆಗಳು ಬಾದಿಸುತ್ತಿದೆ. ಈ ಭಾಗದಲ್ಲಿ ಮಣ್ಣಿಗೆ ಆವಶ್ಯಕವಾದ ಸಾರಜನಕ, ರಂಜಕ, ಪೊಟ್ಯಾಶ್‌ಗಳಂತ ಪ್ರಧಾನ ಪೋಷಕಾಂಶಗಳನ್ನು ನೀಡಬೇಕು. ಯಾವುದೇ ಬೆಳೆಗೂ ಮಣ್ಣು ಪರೀಕ್ಷೆ ಆವಶ್ಯಕವಾಗಿದ್ದು ಕನಿಷ್ಠ ಎರಡು ವರ್ಷಗಳಿಗೊಮ್ಮೆ ಮಣ್ಣು ಪರೀಕ್ಷೆ ಮಾಡುವ ಮೂಲಕ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿದಾಗ ಅಧಿಕ ಇಳುವಾರಿ ಪಡೆಯಲು ಸಾಧ್ಯ ಎಂದರು.


ಕಾಯಿ ಕೀಳುವವರಿಗೆ ವಿಮಾ ಸೌಲಭ್ಯ..!
ತೆಂಗಿನಕಾಯಿ ಕೀಳುವ ವೃತ್ತಿದಾರರಿಗೆ ಸರಕಾರದಿಂದ ವಿಮಾ ಸೌಲಭ್ಯವಿದೆ. ಕಾರ್ಮಿಕರು ವರ್ಷಕ್ಕೆ ರೂ.100 ಪಾವತಿಸಿ ವಿಮಾ ಸೌಲಭ್ಯವನ್ನು ಪಡೆದುಕೊಳ್ಳಬಹುದು. ವಿಮೆಯನ್ನು ಪ್ರತಿ ವರ್ಷ ರೂ.100 ಪಾವತಿಸಿ ನವೀಕರಿಸಿಕೊಳ್ಳಬೇಕು. ಈ ವಿಮೆಯಿಂದ ವೃತ್ತಿಯ ವೇಳೆ ಅವಘಡಗಳು ಸಂಭವಿಸಿ ಆಸ್ಪತ್ರೆ ವೆಚ್ಚ ರೂ.1 ಲಕ್ಷ ಪರಿಹಾರ ಮೊತ್ತ ದೊರೆಯಲಿದೆ. ಮೃತಪಟ್ಟರೆ ಅವರ ಕುಟುಂಬದವರಿಗೆ ರೂ.5ಲಕ್ಷ ಪರಿಹಾರ ಮೊತ್ತ ದೊರೆಯಲಿದೆ ಎಂದು ತೋಟಗಾರಿಕಾ ವಿಜ್ಞಾನಿ ಡಾ.ರಶ್ಮೀ ಆರ್ ಮಾಹಿತಿ ನೀಡಿದರು.


ಬೆಂಬಲ ಬೆಲೆಗಾಗಿ ಅ.2ರಿಂದ ರಾಜಭವನ ಚಲೋ ಪಾದಯಾತ್ರೆ-ರವಿಕಿರಣ್ ಪುಣಚ:
ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ, ತೆಂಗಿನ ಮಾರುಕಟ್ಟೆ ಕುಸಿದಿದ್ದು ಮೌಲ್ಯ ವರ್ದನೆ ಮಾಡಬೇಕು. ಮೌಲ್ಯ ವರ್ಧನೆ ಮಾಡಿದರೆ ಒಂದು ಮರದಿಂದ ರೂ.3000-5000 ಆದಾಯ ಗಳಿಸಬಹುದು. ಇಪ್ಪತ್ತೈದು ಸಾವಿರ ಟನ್ ತೆಂಗಿನ ಕಾಯಿ ಬೆಳೆದರೂ ಸರಕಾರಿ ಖರೀದಿಗೆ ವ್ಯವಸ್ಥೆ ಕಲ್ಪಿಸಿಲ್ಲ. ತೆಂಗು ಖರೀದಿಸಲು ಒಂದೇ ಒಂದು ನಾಫೆಡ್ ಸಂಸ್ಥೆಯಿಲ್ಲ. ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದ ಆಗಿಲ್ಲ. ಇದಕ್ಕೆ ನಾವು ಒತ್ತಡ ಹಾಕಬೇಕಾಗಿದೆ. ಕೇಂದ್ರ ಸರಕಾರ ಕೊಬ್ಬರಿಗೆ ಕ್ವಿಂಟಾಲ್ಸ್‌ಗೆ ಕನಿಷ್ಠ ರೂ.20,೦೦೦ ಬೆಂಬಲ ಬೆಲೆ ನಿಗದಿಪಡಿಸಬೇಕು ಹಾಗೂ ರಾಜ್ಯ ಸರಕಾರ ರೂ.5000 ಪ್ರೋತ್ಸಾಹ ಧನವಾಗಿ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಆಗ್ರಹಿಸಿ ಅ.2ರಿಂದ ತಿಪಟೂರಿನಿಂದ ರಾಜ ಭವನ ಚಲೋ ಪಾದಯಾತ್ರೆ ನಡೆಯಲಿದೆ. ಅ.9ಕ್ಕೆ ಪ್ರೀಡಂ ಪಾರ್ಕ್ ನಲ್ಲಿ ಬೃಹತ್ ಕಲ್ಮಿನೇಷನ್ ನಡೆಯಲಿದ್ದು ರೈತರು ಸಹಕರಿಸುವಂತೆ ಅವರು ಮನವಿ ಮಾಡಿದರು.


ರೈತರು ಪ್ರಾಕ್ಟಿಕಲ್ ವಿಜ್ಞಾನಿಗಳಾಗಬೇಕು-ಕಡಮಜಲು ಸುಭಾಷ್ ರೈ:
ವಿಜಯ ಕರ್ನಾಟಕ ಸೂಪರ್ ಸ್ಟಾರ್ ಪ್ರಶಸ್ತಿ ಪುರಸ್ಕೃತ ಕೃಷಿಕ ಕಡಮಜಲು ಸುಭಾಸ್ ರೈ ಮಾತನಾಡಿ, ರೈತರು ಜ್ಞಾನ ಸಂಪಾದಿಸಿ ವಿಜ್ಞಾನಿಗಳಾಗಬೇಕು. ಲ್ಯಾಬ್‌ನಲ್ಲಿ ಆಗುವ ವಿಚಾರಗಳನ್ನು ಮಣ್ಣಿನಲ್ಲಿ ಪ್ರಯೋಗಿಸಿ ವಿಶೇಷ ಜ್ಞಾನ ಸಂಪಾದಿಸುವ ಮೂಲಕ ಪ್ರಾಕ್ಟಿಕಲ್ ವಿಜ್ಞಾನಿಗಳಾಗಬೇಕು. ತೆಂಗು ಉಪ ಬೆಳೆಯಾದರೂ ಅವುಗಳಲ್ಲಿ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿ ಅಧಿಕ ಲಾಭ ಗಳಿಸಬೇಕು. ಸರಕಾರಗಳ ಬೆಂಬಲ ಬೆಲೆಯ ಜೊತೆಗೆ ನಾವು ಇಂತಹ ಕಂಪನಿಗಳ ಮೂಲಕ ಹೋರಾಟ ಆಗಬೇಕು. ಬದುಕಿಗೆ ಪೂರಕವಾಗಿ ಸಮಗ್ರ ಕೃಷಿ ಮಾಡಿದಾಗ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದರು.


ರೈತರಿಗೆ ಕ್ಷಿಪ್ರಗತಿಯಲ್ಲಿ ಸಾಲ ಸೌಲಭ್ಯ-ಪೂರ್ಣಿಮಾ ಎನ್:
ಮಾನಸಗಂಗಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿನಾಯ ಎನ್.ಮಾತನಾಡಿ, ತೆಂಗು ಉತ್ಪಾದಕರ ಕಂಪನಿ ಹಾಗೂ ಮಾನಸಗಂಗಾ ಸಹಕಾರ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡಿದ್ದು ರೈತರಿಗೆ ಕೃಷಿ ಸಲಕರಣಗಳು, ರಸಗೊಬ್ಬರಗಳನ್ನು ಪೂರೈಸಲಾಗವುದು. ರೈತರಿಗೆ ನಮ್ಮ ಸಂಘದ ಮೂಲಕ ಕ್ಷಿಪ್ರ ಗತಿಯಲ್ಲಿ ಸಾಲ ಸೌಲಭ್ಯ ನೀಡಲಾಗುವುದು ಎಂದರು.


ಮೌಲ್ಯವರ್ಧನೆ ಮಾಡಿ ಉತ್ತಮ ಬೆಲೆ ಒದಗಿಸುವುದೇ ನಮ್ಮ ಉದ್ದೇಶ-ಕುಸುಮಾಧರ ಎಸ್.ಕೆ:
ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ತೆಂಗು ಉತ್ಪಾದಕರ ಕಂಪನಿ ಅಧ್ಯಕ್ಷ ಕುಸುಮಾಧರ ಎಸ್.ಕೆ ಮಾತನಾಡಿ, ಸಂಸ್ಥೆ ಪ್ರಾರಂಭಗೊಂಡು ಎರಡು ವರ್ಷ ಪೂರೈಸಿದೆ. ಹದಿನಾಲ್ಕು ಸಾವಿರ ರೈತರನ್ನು ಹೊಂದಿರುವ ದೇಶದಲ್ಲೇ ಪ್ರಥಮ ಸಂಸ್ಥೆ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಂಪನಿಯ ಕಲ್ಪರಸ ಯೋಜನೆಗೆ ದೊಡ್ಡತೋಟದಲ್ಕಿ ಕಟ್ಟಡ ಸಿದ್ದವಾಗಿದೆ. ಗಣೇಶ ಚತುರ್ಥಿ ಬಳಿಕ ಖರೀದಿಸಲಾಗುವುದು. ಮೌಲ್ಯ ವರ್ಧನೆ ಮಾಡಿ ಉತ್ತಮ ಬೆಲೆ ಒದಗಿಸುವುದೇ ನಮ್ಮ ಉದ್ದೇಶ. ಕಲ್ಪ ಸಮೃದ್ದಿ ಯೋಜನೆಯಲ್ಲಿ ಠೇವಣಿಗೆ ಶೇ.12 ಬಡ್ಡಿ ನೀಡಲಾಗುವುದು. ತೆಂಗಿನಕಾಯಿ ಕೀಳಲು ಜನ ಸಮಸ್ಯೆಗಳ ನಿವಾರಣೆ ಟೋಲ್ ಫ್ರೀ ಸಹಾಯವಾಣಿ ತೆರೆಯಲಾಗಿದೆ. ಸದಸ್ಯರ ಉತ್ತಮ ಯೋಜನಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳು ಮೂಲಕ ರೂ.100 ಕೋಟಿ ತನಕ ಸಾಲ ಒದಗಿಸಲಾಗುವುದು ಎಂದರು.


2000ಉದ್ಯೋಗ ಸೃಷ್ಠಿ:
ಅಡಿಕೆಗೆ ಕ್ಯಾಂಪ್ಕೋ ಇರುವಂತೆ ತೆಂಗಿಗೆ ತೆಂಗು ಉತ್ಪಾದಕರ ಕಂಪನಿಯು ಸಹಕಾರ ನೀಡಲಾಗುವುದು. ಸಿಬಂದಿಗಳ ನೇಮಕಾತಿಯ ಸಂದರ್ಭದಲ್ಲಿ ತೆಂಗು ಬೆಳೆಗಾರ ಸದಸ್ಯ ಮಕ್ಕಳಿಗೆ ಆದ್ಯತೆ ನೀಡಲಾಗುವುದು. ನೇಮಕಾತಿಯಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ನಿಯಮದಂತೆ ನೇಮಕಾತಿಗಳು ನಡೆಯಲಿದೆ. ಸುಮಾರು 2000 ಉದ್ಯೋಗ ಸೃಷ್ಠಿಸುವ ಗುರಿಯಿದೆ ಎಂದು ಕಂಪನಿ ಅಧ್ಯಕ್ಷ ಕುಸುಮಾಧರ ಎಸ್.ಕೆ ತಿಳಿಸಿದರು. ನಿರ್ದೇಶಕಿ ಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಶೇರು ಪ್ರಮಾಣ ಪತ್ರ ವಿತರಣೆ:
ಕಾರ್ಯಕ್ರಮದಲ್ಲಿ ಸದಸ್ಯ ರೈತರಾದ ಎ.ಜತೀಂದ್ರ ಶೆಟ್ಟಿ, ಜಗನ್ನಾಥ ರೈ ಡಿ., ಐತ್ತಪ್ಪ ನಾಯ್ಕ್, ಆಯಿಷಾ, ದುಗ್ಗಪ್ಪ ಗೌಡ, ಐತ್ತಪ್ಪ ರೈಯವರಿಗೆ ಶೇರು ಪ್ರಮಾಣ ಪತ್ರ ವಿತರಿಸಲಾಯಿತು.


ನಿಶ್ಮಿತಾ ಪ್ರಾರ್ಥಿಸಿದರು. ನಿರ್ದೇಶಕ ಗಿರಿಧರ್ ಸ್ವಾಗತಿಸಿದರು. ನಿರ್ದೇಶಕಿ ಲತಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ನಿರೂಪಿಸಿದರು. ಸುಳ್ಯ ಕಚೇರಿ ಮೇಲ್ವಿಚಾರಕಿ ಅಪರ್ಣಾ ವಂದಿಸಿದರು.

LEAVE A REPLY

Please enter your comment!
Please enter your name here