ಇಳಂತಿಲ, 34 ನೆಕ್ಕಿಲಾಡಿಯಲ್ಲಿ ನೂತನ ಶಾಖೆ ತೆರೆಯುವ ಯೋಜನೆ – ಲಾಭಾಂಶದಲ್ಲಿ ಶೇ.14 ಡಿವಿಡೆಂಟ್ ಘೋಷಣೆ- ಉಪ್ಪಿನಂಗಡಿ ಸಿಎ ಬ್ಯಾಂಕ್ ವಾರ್ಷಿಕ ಮಹಾಸಭೆ

0

ಉಪ್ಪಿನಂಗಡಿ: ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿರುವ ಉಪ್ಪಿನಂಗಡಿಯ ಸಹಕಾರಿ ವ್ಯವಸಾಯಿಕ ಸಂಘವು 2022-23ನೇ ಸಾಲಿನಲ್ಲಿ ಒಟ್ಟು ವ್ಯವಹಾರದಿಂದ 3.೦1 ಕೋಟಿ ರೂ. ಲಾಭ ಗಳಿಸಿದ್ದು, ತನ್ನ ಕಾರ್ಯವ್ಯಾಪ್ತಿಯಲ್ಲಿರುವ 34 ನೆಕ್ಕಿಲಾಡಿ ಹಾಗೂ ಇಳಂತಿಲ ಗ್ರಾಮದಲ್ಲಿ ನೂತನ ಶಾಖಾ ಕಚೇರಿಯನ್ನು ತೆರೆಯುವ ಯೋಜನೆಯ ಹೊರತಾಗಿಯೂ ಶೇ.14 ಡಿವಿಡೆಂಡ್ ನೀಡುವುದೆಂದು ಸಂಘದ ಅಧ್ಯಕ್ಷರಾದ ಕೆ.ವಿ. ಪ್ರಸಾದ ತಿಳಿಸಿದರು.
ಸಂಘದ ಕೇಂದ್ರ ಕಚೇರಿಯಲ್ಲಿರುವ ಸಂಗಮ ಕೃಪಾ ಸಭಾಂಗಣದಲ್ಲಿ ಸೆ.24ರಂದು ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದಸ್ಯರ ಬೇಡಿಕೆಯನ್ನು ಮಾನ್ಯ ಮಾಡಿ ಲಾಭಾಂಶ ಘೋಷಣೆಯನ್ನು ಮಾಡಿದರು. 7.8೦ ಕೋಟಿ ಷೇರು ಬಂಡವಾಳವನ್ನು ಸಂಘವು ಸಂಗ್ರಹಿಸಿದೆ. ವರದಿ ಸಾಲಿನಲ್ಲಿ 84.36 ಕೋಟಿ ಠೇವಣಿ ಹೊಂದಿದ್ದು, 115.28 ಕೋಟಿ ರೂ. ಸಾಲ ವಿತರಿಸಿದೆ. ವರ್ಷಾಂತ್ಯದಲ್ಲಿ ಶೇ. 98.31 ಸಾಲ ವಸೂಲಾತಿ ಆಗಿದ್ದು, ಸಂಘದ ಕಾಯ್ದಿಟ್ಟ ನಿಧಿ ಮತ್ತು ಇತರ ನಿಧಿಗಳು 12.41 ಕೋಟಿ ಇದೆ. ಸಂಘವು ಒಟ್ಟು 141.02 ಲಕ್ಷ ಸ್ಥಿರಾಸ್ತಿಯನ್ನು ಹೊಂದಿದೆ. ಸಂಘವು ವಾರ್ಷಿಕ 485 ಕೋಟಿ ವ್ಯವಹಾರ ಮಾಡಿದ್ದು, ಆಡಿಟ್ ವರ್ಗೀಕರಣದಲ್ಲಿ ಸತತ “ಎ” ಗ್ರೇಡನ್ನು ಪಡೆಯುತ್ತಾ ಬಂದಿದೆ ಎಂದರು.

ಸರಕಾರದಿಂದ ಬರಬೇಕಾದ 4.೦2 ಕೋಟಿ ರೂ ಬಡ್ಡಿ ಸಹಾಯಧನವನ್ನು ತ್ವರಿತವಾಗಿ ಪಡೆಯುವ ಬಗ್ಗೆ ಸರಕಾರಕ್ಕೆ ಒತ್ತಡ ತರಬೇಕೆಂದು ಸದಸ್ಯರು ಅಗ್ರಹಿಸಿದರು. ಕೃಷಿಕರಿಗೆ ಅಲ್ಪಾವಧಿ ಬೆಳೆ ಸಾಲದ ಮಿತಿಯನ್ನು ಸರಕಾರ 5 ಲಕ್ಷಕ್ಕೆ ಏರಿಸಿದ್ದರೂ ಪ್ರಸಕ್ತ ಕೃಷಿಕರಿಗೆ 3 ಲಕ್ಷದ ವರೆಗೆ ಮಾತ್ರ ಸಾಲ ವಿತರಿಸಲಾಗುತ್ತಿರುವುದು ಏಕೆ? ಎಂದು ಸದಸ್ಯರು ಪ್ರಶ್ನಿಸಿದರು. ಸಂಸ್ಥೆಯ ವತಿಯಿಂದ ಪ್ರಾರಂಭಿಸಲುದ್ದೆಶಿಸಿರುವ ದಿನ ಬಳಕೆಯ ವಸ್ತುಗಳ ಮಾರಾಟ ಮಳಿಗೆಯಲ್ಲಿ ಕೃಷಿಕರು ಬೆಳೆಯುವ ತರಕಾರಿ ಬೆಳೆಗಳ ನೇರ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕೆಂದು ಅಗ್ರಹಿಸಲಾಯಿತು. ರೈತರ ಉತ್ಪನ್ನಗಳನ್ನು ಮೌಲ್ಯ ವರ್ಧನೆಗೆ ಒಳಪಡಿಸಿ ಮಾರಾಟ ಮಾಡುವ ಯೋಜನೆಯನ್ನು ಸಂಘ ಕೈಗೆತ್ತಿಕೊಳ್ಳಬೇಕೆಂದು ಸಲಹೆ ನೀಡಲಾಯಿತು.
ಸಭೆಯಲ್ಲಿ ಎಂ.ಜಿ. ಭಟ್, ಹರಿರಾಮಚಂದ್ರ, ಪೆಲಪ್ಪಾರು ವೆಂಕಟರಮಣ ಭಟ್, ಚಂದ್ರಶೇಖರ್ ತಾಳ್ತಜೆ, ಅಗರ್ತ ಸುಬ್ರಹ್ಮಣ್ಯ ಭಟ್, ರವೀಂದ್ರ ಆಚಾರ್ಯ, ರಾಜಗೋಪಾಲ್, ಗಂಗಾಧರ, ಜಯಂತ ಪೊರೋಳಿ, ಸುರೇಶ್ ಅತ್ರಮಜಲು, ಲೋಕೇಶ್ ಬೆತ್ತೋಡಿ , ರೂಪೇಶ್ ರೈ ಅಲಿಮಾರ, ಧರ್ಣಪ್ಪ ನಾಯ್ಕ್, ಖಲಂದರ್ ಶಾಫಿ ಚರ್ಚೆಯಲ್ಲಿ ಭಾಗವಹಿಸಿದ್ದರು.
ಪ್ರಮುಖರಾದ ಗೋಪಾಲ ಹೆಗ್ಡೆ, ಚಂದ್ರಶೇಖರ್ ಮಡಿವಾಳ, ಹರೀಶ್ ನಟ್ಟಿಬೈಲ್, ಅಜೀಜ್ ಬಸ್ತಿಕಾರ್, ರಾಮಚಂದ್ರ ಮಣಿಯಾಣಿ, ಮಹೇಂದ್ರ ವರ್ಮ, ಮುಕುಂದ ಬಜತ್ತೂರು, ಆನಂದ ಕುಂಟಿನಿ, ಅನಿ ಮಿನೇಜಸ್, ಅರವಿಂದ ಭಂಡಾರಿ, ಶಂಕರ್ ಭಟ್ ಪನ್ಯ, ವೆಂಕಪ್ಪ ಪೂಜಾರಿ, ಚಂದಪ್ಪ ಮೂಲ್ಯ, ಪ್ರಶಾಂತ್ ಪೆರಿಯಡ್ಕ, ಚಾಲಚಂದ್ರ ಗುಂಡ್ಯ, ಸಂತೋಷ್ ಪರ್ದಾಂಜೆ , ಉಷಾ ಮುಳಿಯ, ಉದಯ ಅತ್ರಮಜಲು , ಚಂದ್ರಹಾಸ ಹೆಗ್ಡೆ, ಕೈಲಾರ್ ರಾಜಗೋಪಾಲ ಭಟ್, ಐ. ಪುಷ್ಪಾಕರ್ ನಾಯಕ್ ಮೊದಲಾದವರು ಭಾಗವಹಿಸಿದ್ದರು.
ಇದೇ ಸಂಧರ್ಭದಲ್ಲಿ ಸಂಘದ ವ್ಯವಹಾರದೊಂದಿಗೆ ಸಹಕರಿಸಿದ ವಿವಿಧ ಸಹಕಾರಿ ಸಂಘಗಳ ಆಡಳಿತ ಮಂಡಳಿಯನ್ನು, ಕೃಷಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಹಾ ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸುನಿಲ್ ಕುಮಾರ್ ದಡ್ಡು ಹಾಗೂ ನಿರ್ದೇಶಕರಾದ ಯತೀಶ್ ಶೆಟ್ಟಿ ಯು., ಜಗದೀಶ ರಾವ್ ಮಣಿಕ್ಕಳ , ದಯಾನಂದ ಸರೋಳಿ, ರಾಮ ನಾಯ್ಕ, ಶ್ಯಾಮಲಾ ಶೆಣೈ, ಸುಜಾತ ಆರ್ ರೈ, ರಾಜೇಶ್, ಕುಂಞ ಎನ್., ಸಚಿನ್ ಎಂ., ಡಿ.ಸಿ.ಸಿ ಬ್ಯಾಂಕ್‌ನ ಮೇಲ್ವೀಚಾರಕ ಶರತ್ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಕ್ಲೇರಿ ವೇಗಸ್ ವರದಿ ಮಂಡಿಸಿದರು. ಸಿಬ್ಬಂದಿಗಳಾದ ಪುಷ್ಪರಾಜ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶೋಭಾ, ರವೀಶ್ ಎಚ್.ಟಿ., ಪ್ರವೀಣ್ ಆಳ್ವ ಸಹಕರಿಸಿದರು.

LEAVE A REPLY

Please enter your comment!
Please enter your name here