ಪುತ್ತೂರು :ಭಾರತ ಸರಕಾರದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ದೇಶಾಂದ್ಯಂತ ಜನವರಿ ತಿಂಗಳಿನಲ್ಲಿ ರಸ್ತೆ ಸುರಕ್ಷತಾ ಸಪ್ತಾಹವನ್ನು ಆಚರಿಸಿಕೊಂಡು ಬರುತ್ತಿದೆ. ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮತ್ತು ವಾಹನ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಒಂದು ವಾರಗಳ ಕಾಲ ಸರಕಾರ ರಸ್ತೆ ಮತ್ತು ಹೆದ್ದಾರಿ ಇಲಾಖೆಗಳ ಮೂಲಕ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಈ ನಿಟ್ಟಿನಲ್ಲಿ ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181 ರ ನೇತ್ರತ್ವದಲ್ಲಿ ರೋಟರಿ ಪಬ್ಲಿಕ್ ಇಮೇಜ್ ಮತ್ತು ರಸ್ತೆ ಸುರಕ್ಷತಾ ವಿಭಾಗ ಇದೇ ಜನವರಿ 11 ರಿಂದ 17 ರ ವರೆಗೆ ಒಂದು ವಾರ ಕಾಲ ರೋಟರಿ ರಸ್ತೆ ಸುರಕ್ಷತಾ ಸಪ್ತಾಹ 2024 ಎನ್ನುವ ವಿಶೇಷ ಕಾರ್ಯಕ್ರಮವನ್ನು ರೋಟರಿ ಜಿಲ್ಲೆಯಾದ್ಯಂತ ರೋಟರಿ ಕ್ಲಬ್ಗಳ ಮೂಲಕ ಹಮ್ಮಿಕೊಳ್ಳಲು ತಿರ್ಮಾನಿಸಿದೆ.
![](https://puttur.suddinews.com/wp-content/uploads/2023/12/59d7d846-e48c-4686-bfde-edcc2a82ecef.jpg)
ರೋಟರಿ ಜಿಲ್ಲೆಯಿಂದ ನಡೆಸುವ ಈ ಕಾರ್ಯಕ್ರಮದ ಕೈ ಪಿಡಿಯನ್ನು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುಜರಾತಿನ ಗಾಂಧಿನಗರದಲ್ಲಿ ನಡೆಯುತ್ತಿರುವ ಇಂಡಿಯನ್ ರೋಡ್ ಕಾಂಗ್ರೆಸ್ ಅಧಿವೇಶನದ ಸಂಧರ್ಭದಲ್ಲಿ ಬಿಡುಗಡೆಗೊಳಿಸಿ ಸರಕಾರದ ಈ ಕಾರ್ಯಕ್ರಮಕ್ಕೆ ಕೈ ಜೋಡಿಸುತ್ತಿರುವ ರೋಟರಿ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಈ ಸಂಧರ್ಭದಲ್ಲಿ ರೋಟರಿ ರಸ್ತೆ ಸುರಕ್ಷತಾ ಜಿಲ್ಲಾ ಚೇರ್ಮ್ಯಾನ್ ಡಾ. ಹರ್ಷಕುಮಾರ್ ರೈ ಮಾಡಾವು ಉಪಸ್ಥಿತರಿದ್ದರು.