ಸ್ವಗ್ರಾಮ ಕೋಡಿಂಬಾಡಿಗೆ ಭರ್ಜರಿ ಗಿಫ್ಟ್ ಕೊಟ್ಟ ಶಾಸಕರು – 55 ಲಕ್ಷ ರೂ.ಅನುದಾನ – ವಿವಿಧ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ

0

ಪುತ್ತೂರು: ಶಾಸಕ ಅಶೋಕ್ ರೈ ಅವರ ಸ್ವಗ್ರಾಮ ಕೋಡಿಂಬಾಡಿಗೆ ಮೊದಲ ಬಾರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಗ್ರಾಮದ ವಿವಿಧ ರಸ್ತೆ ಕಾಮಗಾರಿಗೆ ಒಟ್ಟು 55 ಲಕ್ಷ ರೂ ಅನುದಾನವನ್ನು ಬಿಡುಗಡೆ ಮಾಡಿದ್ದು ಅದರ ಶಿಲಾನ್ಯಾಸ ಕಾಮಗಾರಿ ಡಿ.22 ರಂದು ನಡೆಯಿತು.

ಕೋಡಿಂಬಾಡಿ ಗ್ರಾಮದ ಕೆದಿಕಂಡೆ-ಪುಣ್ಕೆತ್ತಡಿ ರಸ್ತೆ, ಕಲ್ಪನೆ-ಪಿಲಗುಂಡ ರಸ್ತೆಗೆ 10 ಲಕ್ಷ, ಬೆಳ್ಳಿಪ್ಪಾಡಿ ಕೊಡಿಮರ ಕಠಾರ ರಸ್ತೆಗೆ 10 ಲಕ್ಷ, ಕೊಡಿಮರ ಬಾರ್ತೋಲಿ ರಸ್ತೆ, ಕಜೆ ಬೆಳ್ಳಿಪ್ಪಾಡಿ ರಸ್ತೆಗೆ 10 ಲಕ್ಷ , ದಾರಂದ ಕುಕ್ಕು ಬದಿನಾರು ರಸ್ತೆಗೆ 10 ಲಕ್ಷ, ಒಟ್ಟು 55 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಚುನಾವಣಾ ಪೂರ್ವದಲ್ಲಿ ತನ್ನ ಗ್ರಾಮಸ್ಥರಿಗೆ ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರೆ.

ಅನುದಾನಗಳ ಭರಪೂರವೇ ಬರುತ್ತಿದೆ:
ಗ್ಯಾರಂಟಿ ಯೋಜನೆ ಮಾಡಿ ಸರಕಾರದಿಂದ ಅನುದಾನ ಬರುತ್ತಿಲ್ಲ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಅಪಪ್ರಚಾರ ಮಾಡುವವರು ಕೋಡಿಂಬಾಡಿಗೆ ಬಂದು ನೋಡಲಿ. ಇಂದಿನಿಂದ ಪ್ರತೀ ದಿನ ಶಿಲಾನ್ಯಾಸ ಕಾರ್ಯ ನಡೆಯುತ್ತಲೇ ಇರುತ್ತದೆ. ಪುತ್ತೂರು ವಿಧಾನಸಭಾ ಕ್ಷೇತ್ರದಾದ್ಯಂತ ಅಭಿವೃದ್ದಿ ಕಾರ್ಯ ನಡೆಯಲಿದೆ. ಎಲ್ಲಾ ಗ್ರಾಮಗಳಿಗೂ ಸಮಾನ ರೀತಿಯಲ್ಲಿ ಅನುದಾನವನ್ನು ಹಂಚಿಕೆ ಮಾಡುತ್ತೇನೆ. ಕ್ಷೇತ್ರದಲ್ಲಿ ಮುಂದೆ ಅಭಿವೃದ್ದಿ ಕಾರ್ಯಗಳು ನಡೆಯಲಿದ್ದು, ಅಪಪ್ರಚಾರ ಮಾಡುವವರು ಒಮ್ಮೆ ಇದನ್ನು ತಿಳಿದುಕೊಳ್ಳಲಿ. ಬೆಳ್ಳಿಪ್ಪಾಡಿ ಗ್ರಾಮದ ಕಠಾರದಲ್ಲಿ ಕೆಎಂಎಫ್ ಡೈರಿ ಶಿಫ್ಟ್ ಆಗಲಿದೆ. ಇದರಿಂದ ಆ ಭಾಗದ ಸಂಪೂರ್ಣವಾಗಿ ಅಭಿವೃದ್ದಿಯಾಗಲಿದೆ, ಅಲ್ಲಿನ ರಸ್ತೆಗಳಿಗೂ ಕಾಂಕ್ರೀಟ್ ಭಾಗ್ಯ ದೊರೆಯಲಿದೆ ಎಂದು ಶಾಸಕರು ಹೇಳಿದರು.

ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ದಿ
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ದಿ ಕೆಲಸಗಳು ನಡೆಯಲಿದೆ. ಈಗಾಗಲೇ ಕುಡಿಯುವ ನೀರು, ಕೆಎಂಎಫ್, ಕಬಕದಲ್ಲಿ ಕ್ರಿಕೆಟ್ ಮೈದಾನ, ಪುತ್ತೂರು ನಗರದಲ್ಲಿ ಚರಂಡಿ ಕಾಮಗಾರಿ, ಉಪ್ಪಿನಂಗಡಿ ದೇವಳದ ವಠಾರದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯಲಿದೆ. ಚುನಾವಣೆ ಪೂರ್ವದಲ್ಲಿ ಜನತೆಗೆ ಕೊಟ್ಟ ಭರವಸೆಯನ್ನು ಒಂದೊಂದಾಗಿ ಈಡೇರಿಸುವ ಕೆಲಸವನ್ನು ಮಾಡಲಿದ್ದೇನೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.

ಬಿಜೆಪಿಯವರು ಮಂಗವೇ ಮಾಡಿದ್ದು
ನಮ್ಮ ರಸ್ತೆಯನ್ನು ಕಾಂಕ್ರೀಟ್ ಮಾಡಿಲ್ಲ, ನಾವು ಬಿಜೆಪಿ ಶಾಸಕರಿರುವಾಗ ಮನವಿ ಮಾಡಿದ್ದೇವು, ಆದರೆ ನಯಾ ಪೈಸೆ ಅನುದಾನ ಕೊಟ್ಟಿಲ್ಲ, ನಾವೇನು ಪಾಕಿಸ್ತಾನದಲ್ಲಿದ್ದೇವಾ? ಎಂಬ ಭಾವನೆ ನಮ್ಮಲ್ಲಿತ್ತು ಎಂದು ಸುಬ್ರಹ್ಮಣ್ಯ ಶೆಟ್ಟಿ ರೆಂಜಾಜೆ ಗುತ್ತು ಆರೋಪ ಮಾಡಿದರು. ಕೊಡ್ತೇವೆ, ಇಡ್ತೇವೆ ಎಂದು ಹೇಳಿ ನಮ್ಮನ್ನು ಬಿಜೆಪಿಯವರು ಮಂಗವೇ ಮಾಡಿದ್ದಾರೆ. ಬೆಳ್ಳಿಪ್ಪಾಡಿ -ಕಜೆ ರಸ್ತೆ ಭಾರತದಲ್ಲಿದೆ ಎಂಬುದು ಈಗ ನಮಗೆ ಅನುಭವವಾಯಿತು ಎಂದು ಹೇಳಿದರು. ಕೇಶವ ಭಂಡಾರಿ ಕೈಪ ಮಾತನಾಡಿ, ನಾವು ಈ ಹಿಂದೆ ಅನುದಾನ ಕೇಳಲು ಹೋದಾಗ ನಿಮ್ಮ ಏರಿಯದಲ್ಲಿ ಓಟು ಕಮ್ಮಿ ಇದೆ, ಸ್ವಲ್ಪ ಓಟು ಹೆಚ್ಚು ಮಾಡಿಸಿ ಅನುದಾನ ಇಡುತ್ತೇವೆ ಎಂದು ಬಿಜೆಪಿಯವರು ಹೇಳಿದ್ದರು. ಆದರೆ ಇಂದು ಅದಾವುದನ್ನು ಕೇಳದೆ ನಮ್ಮ ರಸ್ತೆಗೆ ಅನುದಾನ ಇಡುವ ಮೂಲಕ ಶಾಸಕರಾದ ಅಶೋಕ್ ರೈ ಅನುದಾನ ಹಂಚಿಕೆಯಲ್ಲಿ ಅಥವಾ ಅಭಿವೃದ್ದಿಯಲ್ಲಿ ರಾಜಕೀಯ ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.

ಇನ್ನು ಅಭಿವೃದ್ದಿ ಪರ್ವ ಆರಂಭ: ಡಾ.ರಾಜಾರಾಂ
ಮುಂದಿನ ದಿನಗಳಲ್ಲಿ ಪುತ್ತೂರು ಕ್ಷೇತ್ರ ನಿರಂತರ ಅಭಿವೃದ್ದಿ ಹೊಂದಲಿದೆ. ಅಶೋಕ್ ರೈಯವರು ಶಾಸಕರಾಗಿ ಕೇವಲ ಏಳು ತಿಂಗಳಲ್ಲಿ ಸಾವಿರಾರು ಕೋಟಿ ಅನುದಾನವನ್ನು ತಂದಿದ್ದಾರೆ. ಇದು ಯಾರಿಗೂ ಸಾಧ್ಯವಾಗಿಲ್ಲ. ಕ್ಷೇತ್ರದ ಗಲ್ಲಿಗಲ್ಲಿಗಳ ರಸ್ತೆಗಳು, ಕುಡಿಯುವ ನೀರು ಸೇರಿದಂತೆ ಬಹು ಅಪೇಕ್ಷಿತ ಕಾಮಗಾರಿಗಳು ಮುಂದೆ ನಡೆಯಲಿದೆ. ಅಭಿವೃದ್ದಿ ಆಗಬೇಕಾದರೆ ಕಾಂಗ್ರೆಸ್ ಶಾಸಕರಿರಬೇಕು, ಕಾಂಗ್ರೆಸ್ ಸರಕಾರ ಇರಬೇಕು ಎಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ ಹೇಳಿದರು.

ದಾರಂದಕುಕ್ಕು ಅಂಗನವಾಡಿ ಇಂಟರ್‌ಲಾಕ್ ಉದ್ಘಾಟನೆ
ದಾರಂದ ಕುಕ್ಕು ಅಂಗನವಾಡಿಯ ಅಂಗಳಕ್ಕೆ ಹಾಕಿರುವ ಇಂಟರ್ ಲಾಕ್ ವ್ಯವಸ್ಥೆಯನ್ನು ಶಾಸಕರು ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಪುಟ್ಟ ಮಕ್ಕಳಿಗೆ ಎಳವೆಯಲ್ಲೇ ಉತ್ತಮ ವಾತಾವರಣವನ್ನು ಕಲ್ಪಿಸಿ ಕೊಡಬೇಕಾಗಿದ್ದು ನಮ್ಮ ಕರ್ತವ್ಯವಾಗಿದೆ. ಸಣ್ಣ ಪ್ರಾಯದಲ್ಲೇ ಮಕ್ಕಳು ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಂಡಲ್ಲಿ ಮುಂದೆ ದೊಡ್ಡವರಾದಾಗ ಅದು ಜೀವನದಲ್ಲಿ ಅಳವಡಿಕೆಯಗುತ್ತದೆ. ಅಂಗನವಾಡಿ ಕೇಂದ್ರಗಳು ಪುಟ್ಟ ಹೃದಯಗಳ ಸಮ್ಮಿಲನ ಕೇಂದ್ರವಾಗಿದೆ. ಮಕ್ಕಳನ್ನು ಅಂಗನವಾಡಿಗೆ ಸೇರಿಸುವ ಮೂಲಕ ಪೋಷಕರು ಅವುಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು ಇದೇ ಸಂದರ್ಭದಲ್ಲಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯನ್ನು ಶಾಸಕರು ಗೌರವಿಸಿದರು.

ವಾರದಲ್ಲಿ ಮೂರು ದಿನ ಕ್ಯಾಂಪ್
ಸರಕಾರದ ಗೃಹಲಕ್ಷ್ಮಿ ಯೋಜನೆಯಲ್ಲಿ ಹಣ ಬಾರದೇ ಇರುವ ಅನೇಕ ಕುಟುಂಬಗಳಿದ್ದು, ಅವರಿಗೆ ಅವರವರ ಗ್ರಾಮದಲ್ಲೇ ಕ್ಯಾಂಪ್ ಮಾಡುವ ಮೂಲಕ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಪ್ರಭಾರ ಸಿಡಿಪಿಒ ಮಂಗಳಾರವರು ತಿಳಿಸಿದರು. ಕ್ಯಾಂಪ್ ನಡೆಸಿ ಸಮಸ್ಯೆ ಪರಿಹಾರ ಶಾಸಕರು ಇಲಾಖೆಗೆ ಸೂಚನೆಯನ್ನು ನೀಡಿದ್ದರು. ಅದರಂತೆ ಡಿ.27,28 ಮತ್ತು 29ರಂದು ಮೂರು ದಿನ ಎಲ್ಲಾ ಗ್ರಾ.ಪಂ ಕಚೇರಿಗಳಲ್ಲಿ ಕ್ಯಾಂಪ್ ನಡೆಯಲಿದೆ. ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಶಾಸಕರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಕೇಳಿ ಕೇಳಿ ಸಾಕಾಗಿ ಹೋಗಿದೆ;
ದಾರಂದಕುಕ್ಕು ಬದಿನಾರು ರಸ್ತೆಗೆ ಕಾಂಕ್ರೀಟ್ ಮಾಡಿಸಿ ಎಂದು ನಮಗೆ ಕೇಳಿ ಕೇಳಿ ಸಾಕಾಗಿ ಹೋಗಿದೆ. ಕಳೆದ 15 ವರ್ಷಗಳಿಂದ ಮನವಿ ಮಾಡುತ್ತಿದ್ದೇವೆ. ಈ ಬಾರಿ ನಮಗೆ ಯೋಗ ಕೂಡಿ ಬಂದಿದೆ. ನಮ್ಮ ರಸ್ತೆಗೆ 10 ಲಕ್ಷ ಅನುದಾನ ಇಡುವ ಮೂಲಕ 15 ವರ್ಷಗಳ ಬೇಡಿಕೆಯನ್ನು ಶಾಸಕರು ಈಡೇರಿಸಿದ್ದಾರೆ ಎಂದು ಬದಿನಾರು ನಿವಾಸಿಗಳು ಶಾಸಕರಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷ ಮುರಳೀಧರ್ ರೈ ಮಠಂತಬೆಟ್ಟು, ಕೋಡಿಂಬಾಡಿ ಗ್ರಾ.ಪಂ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜರಿ, ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಸದಸ್ಯರಾದ ಜಗನ್ನಾಥ ಶೆಟ್ಟಿ ನಡುಮನೆ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಮೋನಪ್ಪ ಗೌಡ ಪಮ್ಮನಮಜಲು, ಕಾರ್ಯದರ್ಶಿಗಳಾದ ಯೋಗೀಶ್ ಸಾಮಾನಿ ಮಠಂತಬೆಟ್ಟು, ಬೂತ್ ಅಧ್ಯಕ್ಷರುಗಳಾದ ಪ್ರಭಾಕರ ಸಾಮಾನಿ, ಪದ್ಮನಾಭ ಶೆಟ್ಟಿ ರೆಂಜಾಜೆ, ಶಿವಪ್ರಸಾದ್ ರೈ ಮಟಂತಬೆಟ್ಟು, ವಿಕ್ರಂ ಶೆಟ್ಟಿ ಕೋಡಿಂಬಾಡಿ, ಕೇಶವ ಗೌಡ ಬರಮೇಲು, ಬನ್ನೂರು ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರಭಟ್, ರಾಜಶೇಖರ್ ಜೈನ್ ನೀರ್ಪಾಜೆ, ನೆಕ್ಕಿಲಾಡಿ ವಲಯ ಅಧ್ಯಕ್ಷೆ ಅನಿಮಿನೇಜಸ್, ಇಬ್ರಾಹಿಂ ಸೇಡಿಯಾಪು, ಅಶ್ರಫ್ ಬಸ್ತಿಕ್ಕಾರ್, ಮೋನಪ್ಪ ಶೆಟ್ಟಿ ಕಠಾರ, ಶ್ರೀನಿವಾಸ ಶೆಟ್ಟಿ ಕಠಾರ, ಗ್ರಾಪಂ ಸದಸ್ಯೆ ಪುಷ್ಪಾವತಿ, ಪದ್ಮಪ್ಪ ಪೂಜಾರಿ ಪರನೀರು, ಹರೀಶ್ ಕಜೆ, ಬೆಳ್ಳಿಪ್ಪಾಡಿ ಶಾಲಾ ಮುಖ್ಯ ಗುರು ಯಶೋಧ, ಗ್ರಾಪಂ ಸದಸ್ಯೆ ಭವ್ಯ ವಿದ್ಯಾಪ್ರಸಾದ್, ಪುಷ್ಪಾ ಲೋಕಯ್ಯ ನಾಯ್ಕ, ಪ್ರೇಮ ಈಶ್ವರ ನಾಯ್ಕ, ಗಣೇಶ್ ಶೆಟ್ಟಿ ಕಠಾರ, ಉಮೇಶ್ ಶೆಟ್ಟಿ ಕಠಾರ, ವಾಸುದೇಶವ ಆಚಾರ್ಯ ಕೊಡಪಡ್ಯ, ಶೀಲಾ ಲೋಕನಾಥ ಶೆಟ್ಟಿ, ಸಂತೋಷ್ ರೈ ಕೆದಿಕಂಡೆ ಗುತ್ತು, ಚಂಧ್ರಶೇಖರ್ ರೈ ಕೆದಿಕಂಡೆ ಗುತ್ತು, ಮಾಜಿ ಮಂಡಲ ಪಂಚಾಯತ್ ಸದಸ್ಯೆ ಗಿರಿಜಾ ರೈ ಕೆದಿಕಂಡೆ ಮತ್ತಿತರರು ಉಪಸ್ಥಿತರಿದ್ದರು. ನಿರಂಜನ್ ರೈ ಮಠಂತಬೆಟ್ಟು ಸ್ವಾಗತಿಸಿದರು. ಸುದೇಶ್ ಶೆಟ್ಟಿ ವಂದಿಸಿದರು. ವಲಯ ಕಾರ್ಯದರ್ಶಿ ಯೋಗೀಶ್ ಸಾಮಾನಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here