ಕಾಣಿಯೂರು: ಅನುದಾನದ ಮತ್ತು ಅಧಿಕಾರಿಗಳ, ಸಿಬ್ಬಂದಿಗಳ ಕೊರತೆಯಿಂದ ಗ್ರಾಮ ಪಂಚಾಯತ್ ಗಳ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆ ಎದುರಾಗುತ್ತದೆ ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ವಿಧಾನಸಭೆಯಲ್ಲಿ ಗಮನ ಸೆಳೆದಿದ್ದಾರೆ.
![](https://puttur.suddinews.com/wp-content/uploads/2024/02/WhatsApp-Image-2024-02-14-at-10.29.01-AM.jpeg)
ರಾಜ್ಯ ವಿಧಾನಸಭೆಯ ಅಧಿವೇಶನದಲ್ಲಿ ಮಾತನಾಡಿದ ಶಾಸಕರು, ಅನುದಾನ ಬಾರದೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಕಡಬ ಹಾಗೂ ಸುಳ್ಯ ತಾಲೂಕಿನ ಗ್ರಾಮ ಪಂಚಾಯತ್ ಕಟ್ಟಡಗಳ ನಿರ್ಮಾಣ ಪೂರ್ತಿಗೊಂಡಿರುವುದಿಲ್ಲ. ಡಾಟಾ ಎಂಟ್ರಿ ಆಫರೇಟರ್ ಗಳ ನೇಮಕ ಅರ್ಧಕ್ಕೆ ನಿಂತಿದೆ. ಅಧಿಕಾರಿ, ಸಿಬ್ಬಂದಿಗಳ ಕೊರತೆ ಎದುರಾಗಿದೆ. ಅನುದಾನ ಬಿಡುಗಡೆ ಮಾಡಬೇಕು, ಜೊತೆಗೆ ಅಧಿಕಾರಿ, ಸಿಬ್ಬಂದಿಗಳ, ಡಾಟಾ ಎಂಟ್ರಿ ಆಫರೇಟರ್ ಗಳ ನೇಮಕ ಮಾಡಬೇಕು ಎಂದು ಅವರು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಲಭ್ಯತೆಯ ಆಧಾರದ ಮೇಲೆ ಡಾಟಾ ಎಂಟ್ರಿ ಆಫರೇಟರ್ ಮತ್ತು ಸಿಬ್ಬಂದಿಗಳ ನೇಮಕ ಮಾಡಲಾಗುವುದು ಹಾಗೂ ಅನುದಾನ ಒದಗಿಸಲಾಗುವುದು ಎಂದ ಸಚಿವರು ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕು ಎಂದು ತಿಳಿಸಿದರು.