ಇಂದಿನಿಂದ ಬ್ರಹ್ಮಕಲಶೋತ್ಸವ, ವಾರ್ಷಿಕ ಜಾತ್ರೋತ್ಸವ ಆರಂಭ
ವಿಟ್ಲ: ಬಂಟ್ವಾಳ ತಾಲೂಕು ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮಾ.11ರಿಂದ ಮಾ.15ರ ವರೆಗೆ ವಿವಿಧ ಧಾರ್ಮಿಕ, ವೈಧಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಆ ಪ್ರಯುಕ್ತ ಮಾ.10 ರಂದು ಸಾಯಂಕಾಲ ಕ್ಷೇತ್ರಕ್ಕೆ ಹಸಿರುವಾಣಿ ಸಮರ್ಪಣೆಗೊಂಡಿತು.
ಬೆಳಗ್ಗೆ ಗಂಟೆ 9.30ಕ್ಕೆ ಕ್ಷೇತ್ರದ ಅರ್ಚಕರಾದ ಈಶ್ವರ ಪ್ರಕಾಶ್ ಪಂಜಿಬಲ್ಲೆ ಉಗ್ರಾಣ ಮುಹೂರ್ತ ನಡೆಸಿದರು. ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘದ ನಿವೃತ್ತ ಕಾರ್ಯದರ್ಶಿ ದೇವಪ್ಪ ಗೌಡ ಕುದುಮಾನ್ ರವರು ಉಗ್ರಾಣವನ್ನು ಉದ್ಘಾಟಿಸಿದರು.
ಸಾಯಂಕಾಲ ವಿವಿಧ ಕಡೆಗಳಿಂದ ಸಂಗ್ರಹಿಸಲ್ಪಟ್ಟ ಹಸಿರುವಾಣಿ ವಾಹನವು ಗಾಂಧಿನಗರ ಶ್ರೀ ದೇವಿ ಭಜನಾ ಮಂದಿರದ ಬಳಿ ತಲುಪಿತು. ಅಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಪುಷ್ಪರಾಜ್ ಹೆಗ್ಡೆ ಪದ್ಮಶ್ರೀ ಸತ್ತಿಕಲ್ಲುರವರು ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು. ಬಳಿಕ ಮೆರವಣಿಗೆಯು ಬೀಟಿಗೆ, ಕ್ಷೇತ್ರಪಳಿಕೆ, ಕರಿಮಜಲು ಶ್ರೀ ಕೃಷ್ಣ ಭಜನಾ ಮಂದಿರ ತಲುಪಿ ಬಳಿಕ ಅಲ್ಲಿಂದ ಪಾಟ್ರಕೋಡಿಯಾಗಿ ಕ್ಷೇತ್ರ ತಲುಪಿತು.
ಹಸಿರುವಾಣಿ ವಾಹನಗಳು ಕ್ಷೇತ್ರತಲುಪುತ್ತಿದ್ದಂತೆ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷರಾದ ಜೆ.ಕೃಷ್ಣ ಭಟ್ ’ಕೇಶವ ಕೃಪಾ’ ಮೀರಾವನರವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಬಾಲಪ್ಪ ಗೌಡ ಕುದುಂಬ್ಲಾಡಿಗುತ್ತು, ವಿ. ಪರಮೇಶ್ವರ ನಾವಡ ಬಾಯಬೆ, ಕಾರ್ಯದರ್ಶಿ ಕೆ. ಮುರಳೀಧರ ಶೆಟ್ಟಿ ಕಲ್ಲಾಜೆಗುತ್ತು, ಕೋಶಾಧಿಕಾರಿ ಚೆನ್ನಪ್ಪ ಗೌಡ ಕುದುಮಾನ್, ಜತೆ ಕಾರ್ಯದರ್ಶಿ ನಾರಾಯಣ ಕುಲಾಲ್ ಗಡಿಯಾರ, ಪ್ರಧಾನ ಅರ್ಚಕ ಈಶ್ವರ ಪ್ರಕಾಶ್ ಗಾಂಧಿನಗರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜನಾರ್ದನ ಕುಲಾಲ್, ಉಪಾಧ್ಯಕ್ಷರಾದ ಪುಷ್ಪರಾಜ ಹೆಗ್ಡೆ ಪದ್ಮಶ್ರೀ ಸತ್ತಿಕಲ್ಲು, ಕ್ಷೇತ್ರಪಳಿಕೆ ಜಗನ್ನಾಥ ಶೆಟ್ಟಿ, ಅಂಗರಾಜೆ ಶಿವರಾಮ್ ಭಟ್, ದೇವಪ್ಪ ಗೌಡ ಕುದುಮಾರ್, ಕಾರ್ಯದರ್ಶಿ ಚರಣ್ ಕುಲಾಲ್ ಮಿತ್ತಪಡ್ಪು, ಜತೆಕಾರ್ಯದರ್ಶಿ ವೆಂಕಟರಾಜ್ ಬಡೆಕ್ಕಿಲ, ಹರೀಶ್ ವಿ. ವಾಲ್ತಾಜೆ, ಕೋಶಾಽಕಾರಿ ದಯಾನಂದ ಶೆಟ್ಟಿ ಕುರುಂಬ್ಲಾಜೆ ಉಪಸ್ಥಿತರಿದ್ದರು.
![](https://puttur.suddinews.com/wp-content/uploads/2024/03/%E0%B2%B8-2.jpg)
ದಾರಿಯುದ್ದಕ್ಕೂ ತಂಪು ಪಾನೀಯ – ಮೆರಗು ನೀಡಿದ ಚೆಂಡೆ, ಗೊಂಬೆಕುಣಿತ, ನಾಸಿಕ್ ಬ್ಯಾಂಡ್:
ದಾರಿಯುದ್ದಕ್ಕೂ ವಿವಿಧ ಕಡೆಗಳಲ್ಲಿ ತಂಪು ಪಾನೀಯ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಪಾಟ್ರಕೋಡಿಯಲ್ಲಿ ಮುಸ್ಲೀಂ ಬಾಂಧವರಿಂದ ಹಣ್ಣು ಹಂಪಲು, ತಂಪು ಪಾನೀಯ ವಿತರಣೆ ನಡೆಯಿತು. ಮೆರವಣಿಗೆಯಲ್ಲಿ ಚೆಂಡೆ, ನಾಸಿಕ್ ಬ್ಯಾಂಡ್, ಗೊಂಬೆಕುಣಿತ, ಸುಡುಮದ್ದು ಪ್ರದರ್ಶನ ಮೆರಗು ನೀಡಿತು.
ಇಂದು ಕ್ಷೇತ್ರದಲ್ಲಿ
ಮಾ.11ರಂದು ಸಂಜೆ ಗಂಟೆ 5 ಕ್ಕೆ ತಂತ್ರಿಗಳಿಗೆ ಹಾಗೂ ಇತರ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ, ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.ಸಂಜೆ ಗಂಟೆ 6ಕ್ಕೆ ದೇವತಾ ಪ್ರಾರ್ಥನೆ, ಪ್ರಾಸಾದ ಪರಿಗ್ರಹ, ಆಚಾರ್ಯಾದಿ ಋತ್ವಿಗ್ವರಣ, ಸ್ವಸ್ತಿ ಪುಣ್ಯಾಹವಾಚನ, ಪ್ರಾಸಾದಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾಬಲಿ, ಪ್ರಸಾದ ವಿತರಣೆ ನಡೆಯಲಿದೆ.