ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸಾರ್ವಕಾಲಿಕ ಸಾಧನೆ

1

ರೂ. 245.50 ಕೋಟಿ ವ್ಯವಹಾರ * ರೂ.1.25 ಕೋಟಿ ನಿವ್ವಳ ಲಾಭ * ಶೇ.100 ಸಾಲ ವಸೂಲಾತಿ

ಕಾವು: ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2023-24ನೇ ಆರ್ಥಿಕ ವರ್ಷದಲ್ಲಿ ಈವರೆಗಿನ ಎಲ್ಲಾ ದಾಖಲೆಯನ್ನು ಮೀರಿ ಸಾರ್ವಕಾಲಿಕ ಸಾಧನೆಯನ್ನು ಮಾಡಿದೆ. ಆಡಿಟ್‌ಪೂರ್ವ ಅಂಕಿಅಂಶಗಳ ಪ್ರಕಾರ ವರ್ಷಾಂತ್ಯಕ್ಕೆ ರೂ.245.50 ಕೋಟಿ ವಾರ್ಷಿಕ ವ್ಯವಹಾರವನ್ನು ಮಾಡಿ ರೂ. 1.25 ಕೋಟಿ ನಿವ್ವಳ ಲಾಭವನ್ನು ಗಳಿಸಿದ್ದು, ಪ್ರಮುಖವಾಗಿ ಸದಸ್ಯರ ಸಾಲ ವಸೂಲಾತಿಯಲ್ಲಿ ಶೇ.100 ಸಾಧನೆ ಮಾಡಿ ತಾಲೂಕಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ತಿಳಿಸಿದ್ದಾರೆ. ಅವರು ಎ.18ರಂದು ನಡೆದ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ 2023-24ನೇ ವಾರ್ಷಿಕ ವ್ಯವಹಾರವನ್ನು ವಿವರಿಸಿ ಮಾತನಾಡಿದರು.

110 ವರ್ಷಗಳ ಇತಿಹಾಸ ಹೊಂದಿರುವ ಕೇವಲ 2 ಗ್ರಾಮ ವ್ಯಾಪ್ತಿಯನ್ನು ಹೊಂದಿರುವ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದ್ದು, 2023-24ನೇ ಸಾಲಿನಲ್ಲೂ ಗಣನೀಯ ಪ್ರಗತಿಯ ಮೂಲಕ ಸಾರ್ವಕಾಲಿಕ ಸಾಧನೆಯನ್ನು ಮಾಡಿದೆ. ಸಂಘವು ತನ್ನ ಎಲ್ಲಾ ವಿಭಾಗದಲ್ಲೂ ಪ್ರಗತಿ ಸಾಧಿಸಿದ್ದು, ವಾರ್ಷಿಕವಾಗಿ ರೂ.245.50 ಕೋಟಿ ವಾರ್ಷಿಕ ವ್ಯವಹಾರವನ್ನು ನಡೆಸಿ ವರ್ಷಾಂತ್ಯಕ್ಕೆ ರೂ. 40.06 ಕೋಟಿ ವಿವಿಧ ಠೇವಣಿಗಳನ್ನು ಹೊಂದಿದ್ದು, ರೂ. 32.81 ಕೋಟಿ ಸಾಲ ಹೊರಬಾಕಿ ಹೊಂದಿದೆ. ರೂ. 52.03 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ರೂ. 4.08 ಕೋಟಿಯಷ್ಟು ವ್ಯಾಪಾರ ವಹಿವಾಟು ನಡೆಸಿ ರೂ. 20.24 ಲಕ್ಷ ವ್ಯಾಪಾರ ಲಾಭ ಗಳಿಸಿದೆ ಎಂದು ಹೇಳಿದರು.
ವರ್ಷಾಂತ್ಯಕ್ಕೆ ಸಂಘದಲ್ಲಿ 2248 ಜನ ಸದಸ್ಯರಿದ್ದು, ಆರ್ಥಿಕ ವರ್ಷದಲ್ಲಿ ರೂ. 17.40 ಕೋಟಿ ಶೂನ್ಯಬಡ್ಡಿದರದ ಬೆಳೆ ಸಾಲ ಮತ್ತು ರೂ.1.28 ಕೋಟಿ ಕೃಷಿ ಅಭಿವೃದ್ಧಿ ಸಾಲ, ರೂ.21.54 ಕೋಟಿ ಕೃಷಿಯೇತರ ಸಾಲಗಳನ್ನು ವಿತರಿಸಲಾಗಿದೆ ಎಂದು ಹೇಳಿದರು. ಆಡಳಿತ ಮಂಡಳಿ ಸಭೆಯಲ್ಲಿ ಸಂಘದ ಉಪಾಧ್ಯಕ್ಷ ರಮೇಶ್ ಪೂಜಾರಿ ಮುಂಡ್ಯ, ನಿರ್ದೇಶಕರುಗಳಾದ ಲೋಕೇಶ್ ಚಾಕೋಟೆ, ಶಿವಪ್ರಸಾದ್ ಕೊಚ್ಚಿ, ಮಂಜುನಾಥ ರೈ ಸಾಂತ್ಯ, ಪ್ರವೀಣ್ ರೈ ಮೇನಾಲ, ಶ್ರೀಧರ್ ರಾವ್ ನಿಧಿಮುಂಡ, ರಾಮಣ್ಣ ನಾಯ್ಕ ಕುದ್ರೋಳಿ, ಹೇಮಾವತಿ ಚಾಕೋಟೆ, ಮೋಹನಾಂಗಿ ಬೀಜಂತ್ತಡ್ಕ, ಲೋಹೀತ್ ಅಮ್ಚಿನಡ್ಕ, ಎಸ್‌ಸಿಡಿಸಿಸಿ ಬ್ಯಾಂಕ್ ಪ್ರತಿನಿಧಿ ಶರತ್ ಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿ.ರವರು ಉಪಸ್ಥಿತರಿದ್ದರು.

ಶೇ.100 ಸಾಲ ಮರುಪಾವತಿ-ಲಾಭದಲ್ಲಿ ಶೇ.10 ಏರಿಕೆ:
ಸಂಘವು ಪ್ರತಿ ವರ್ಷವೂ ಲಾಭದಲ್ಲಿ ಮುನ್ನಡೆಯುತ್ತಿದ್ದು, ಈ ಬಾರಿಯೂ ಲಾಭದಲ್ಲಿ ಕಳೆದ ಬಾರಿಗಿಂತ ಶೇ.10 ವೃದ್ಧಿಯೊಂದಿಗೆ ರೂ.1.25 ಕೋಟಿ ಲಾಭ ಗಳಿಸಿದೆ. ಈ ಹಿಂದೆಯೂ ಸಾಲ ವಸೂಲಾತಿಯಲ್ಲಿ ಅನೇಕ ಬಾರಿ ಶೇ.100 ಸಾಧನೆಯನ್ನು ಮಾಡಿರುವ ಸಂಘವು ಈ ಬಾರಿಯೂ ಶೇ.100 ಸಾಲ ವಸೂಲಾತಿಯೊಂದಿಗೆ ತಾಲೂಕಿನಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದೆ. ಸಂಘದ ಸರ್ವತೋಮುಖ ಪ್ರಗತಿ, ಅಭಿವೃದ್ಧಿ, ಸಾಧನೆಗೆ ಸಹಕರಿಸಿದ ಎಲ್ಲರಿಗೂ ಸಂಸ್ಥೆ ಕೃತಜ್ಞತೆಯನ್ನು ಬಯಸುತ್ತದೆ.

ನನ್ಯ ಅಚ್ಚುತ ಮೂಡೆತ್ತಾಯ, ಅಧ್ಯಕ್ಷರು-ಕಾವು ಪಿಎಸಿಎಸ್

ಸಂಘವು 2023-24ನೇ ಆರ್ಥಿಕ ವರ್ಷದಲ್ಲಿ ಎಲ್ಲಾ ವಿಭಾಗದಲ್ಲೂ ಪ್ರಗತಿಯನ್ನು ಸಾಧಿಸಿ ಸಾರ್ವಕಾಲಿಕ ಸಾಧನೆಯನ್ನು ಮಾಡಿದೆ, ರೂ.245.50 ಕೋಟಿ ವ್ಯವಹಾರದ ಮೂಲಕ ರೂ.1.25 ಕೋಟಿ ಲಾಭ ಗಳಿಸಿ, ಸಾಲ ಮರುಪಾವತಿಯಲ್ಲಿ ಶೇ.100 ಸಾಧನೆ ಮಾಡಲಾಗಿದೆ, ಸಂಘದ ಆಡಳಿತ ಮಂಡಳಿಯ ಸೂಕ್ತ ಮಾರ್ಗದರ್ಶನ, ಸಿಬ್ಬಂದಿಗಳ ಶ್ರಮ ಮತ್ತು ಸದಸ್ಯರ ಸಹಕಾರದ ಮೂಲಕ ಸಂಸ್ಥೆ ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ಮುನ್ನಡೆಯಲು ಸಹಕಾರಿಯಾಗಿದೆ.

ಕೇಶವಮೂರ್ತಿ ಪಿ.ಜಿ, ಸಿಇಓ ಕಾವು ಪಿಎಸಿಎಸ್

1 COMMENT

  1. ಸದಸ್ಯರ ನಿರೀಕ್ಷೆಗನುಗುಣವಾಗಿ ಸಹಕಾರ ಸಂಘವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಲಿರುವ ಆಢಳಿತ ವರ್ಗಕ್ಕೆ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಸಂಘದ ಏಳಿಗೆಗೆ ಶ್ರಮವಹಿಸುವ ಕಾರ್ಯನಿರ್ವಹಣಾಧಿಕಾರಿ ಮತ್ತು ಶಿಬಂಧಿ ವರ್ಗಕ್ಕೆ,ಕಾಲಕಾಲಕ್ಕೆ ಸಂಘದ ಅಭಿವೃದ್ಧಿಗೆ ಮಾರ್ಗದರ್ಶನ ಮಾಡುತ್ತಾ ಬಂದಿರುವ ಕೇಂದ್ರ ಸಹಕಾರೀ ಬ್ಯಾಂಕಿನ ಮೇಲ್ವಿಚಾರಕರಿಗೆ ಸದಸ್ಯರ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.🙏

LEAVE A REPLY

Please enter your comment!
Please enter your name here