ಪಾಣಾಜೆ : ಇಲ್ಲಿನ ಕಿನ್ನಿಮಾಣಿ – ಪೂಮಾಣಿ , ಪಿಲಿಭೂತ ದೈವಸ್ಥಾನ ಶಿಲಾನ್ಯಾಸಗೊಂಡು ನೂತನ ದೈವಸ್ಥಾನದ ಕೆಲಸಕಾರ್ಯಗಳು ನಡೆಯುತ್ತಿದ್ದು , ದೈವಸ್ಥಾನದ ವಠಾರದಲ್ಲಿ ಇರುವ ಪೂಮಾಣಿ ದೈವ ಹಾಗೂ ಪಿಲಿಭೂತ ದೈವಗಳ 2 ಗುಡಿಯನ್ನು ನೂತನವಾಗಿ ನಿರ್ಮಿಸುವ ಸಲುವಾಗಿ ಜೂ. 10 ರಂದು ಬೆಳಗ್ಗೆ ಅನುಜ್ಞಾ ಕಲಶ ನಡೆಯಿತು.
ಕುಂಟಾರು ಬ್ರಹ್ಮಶ್ರೀ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ಬಾಲಾಲಯದಲ್ಲಿ ಪ್ರತಿಷ್ಠೆಗೊಂಡಿರುವ ದೈವಗಳಲ್ಲಿ ಗುಡಿಗಳ ಜೀರ್ಣೋದ್ಧಾರ ಮಾಡುವ ಬಗ್ಗೆ ಪ್ರಾರ್ಥನೆಯನ್ನು ಮಾಡಿ, ನಂತರ 2 ಗುಡಿಗಳಿಗೆ ತೆರಳಿ ಅಲ್ಲಿ ಅನುಜ್ಞಾಕಲಶ ಮಾಡಿ, ಪೂಜೆಯನ್ನು ನೇರವೇರಿಸಿ ಅಲ್ಲಿದ್ದ ಪೀಠೋಪಕರಣಗಳನ್ನು ಗುಡಿಯ ಒಳಗಿಂದ ತೆರವುಗೊಳಿಸಿ ತಂತ್ರಿಯವರು ಸಾಂಕೇತಿಕವಾಗಿ 2 ಗುಡಿಯ ಮಾಡಿನ ಒಂದು ಹಂಚನ್ನು ತೆಗದು ಹಾಕುವುದರೊಂದಿಗೆ ಗುಡಿಗಳ ಜೀರ್ಣೋದ್ಧಾರ ಕೆಲಸಕಾರ್ಯಗಳಿಗೆ ಚಾಲನೆ ನೀಡಲಾಯಿತು.
![](https://puttur.suddinews.com/wp-content/uploads/2024/06/236e25b1-ea18-4bd1-b7a4-f07ea4d4dcf5.jpg)
ನಂತರ ಸೇರಿದ ಭಕ್ತಾದಿಗಳಿಗೆ ಬಾಲಾಲಯದಲ್ಲಿ ದೈವಗಳ ಅರಶಿನಹುಡಿ ಪ್ರಸಾದವನ್ನು ನೀಡಲಾಯಿತು. ದೈವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ, ರಣಮಂಗಲ ದೇವಸ್ಥಾನದ ಅರ್ಚಕರು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ಕಾರ್ಯದರ್ಶಿ, ಉಪಾಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.