‘ಮೀಶೋ’ ಹೆಸರಲ್ಲಿ ವಂಚನಾ ಜಾಲ-ಜಾಗೃತರಾಗುವಂತೆ ಮನವಿ

0

ಉಪ್ಪಿನಂಗಡಿ: ಆಧುನಿಕತೆಯೆಡೆಗೆ ಜಗತ್ತು ಸಾಗುತ್ತಿದ್ದಂತೆಯೇ ವಂಚಕರ ಸಂಖ್ಯೆಯೂ ಹೆಚ್ಚಾಗಿದ್ದು, ಹಣದಾಸೆಗೆ, ಮಾತಿನ ಮೋಡಿಗೆ ಸಿಲುಕಿ ಸ್ವಲ್ಪ ಎಚ್ಚರ ತಪ್ಪಿದರೂ ನಮ್ಮಲ್ಲಿದ್ದ ಹಣವನ್ನು ಕಳೆದುಕೊಳ್ಳುವುದು ನಿಶ್ಚಿತವಾಗಿದೆ. ‘ಮೀಶೋ’ ಹೆಸರಲ್ಲಿ ವಂಚನಾ ಜಾಲವೊಂದು ಕಾರ್ಯಾಚರಿಸುತ್ತಿದ್ದು, 34 ನೆಕ್ಕಿಲಾಡಿ ನಿವಾಸಿ, ಉದ್ಯಮಿ ಜಿ.ಎಂ. ಮುಸ್ತಾಫ ಅವರಿಗೂ ಕೂಡಾ ಈ ಜಾಲ ಬಲೆ ಬೀಸಿದೆ. ಆದರೆ ಅವರು ಜಾಗೃತರಾಗಿದ್ದರಿಂದಾಗಿ ಇಲ್ಲಿ ವಂಚನಾ ಜಾಲದ ಯೋಚನೆ ಸಫಲವಾಗಲಿಲ್ಲ. ಈ ಬಗ್ಗೆ ವಿವರಿಸಿರುವ ಮುಸ್ತಾಫ ಅವರು ಎಲ್ಲರೂ ಇಂತಹ ವಂಚನಾ ಜಾಲಗಳ ಬಗ್ಗೆ ಜಾಗೃತರಾಗುವಂತೆ ಎಚ್ಚರಿಸಿದ್ದಾರೆ.


ಈ ಬಗ್ಗೆ ವಿವರಿಸಿರುವ ಮುಸ್ತಾಫ ಅವರು, ತನ್ನ ಪತ್ನಿಯ ಹೆಸರಿನಲ್ಲಿ ರಿಜಿಸ್ಟರ್ಡ್ ಪೋಸ್ಟ್‌ವೊಂದು ಅವರ ಮನೆಗೆ ಬಂದಿದ್ದು, ಅದನ್ನು ತೆರೆದು ನೋಡಿದಾಗ ಅದು ‘ಮೀಶೋ’ ಸಂಸ್ಥೆಯದ್ದೆಂಬ ಉಲ್ಲೇಖವಿತ್ತು. ಸಂಸ್ಥೆಯ 8ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಕಂಪೆನಿಯು ನೋಂದಾಯಿತ ಗ್ರಾಹಕರಿಗೆ ಲಕ್ಕಿ ಡ್ರಾ ಸ್ಪರ್ಧೆಯನ್ನು ಆಯೋಜಿಸಿದ್ದು, ಅತ್ಯಾಕರ್ಷಕ 20 ಬಹುಮಾನಗಳಿವೆ. ಅವುಗಳಲ್ಲಿ ಮೂರು ದೊಡ್ಡ ಬಹುಮಾನಗಳಾಗಿದ್ದು, ಉಳಿದ 17 ಬಹುಮಾನಗಳು ಸಣ್ಣ ಬಹುಮಾನಗಳು. ನಿಮಗೆ ಕಳುಹಿಸಿದ ಕಾರ್ಡ್ ಅನ್ನು ಸ್ಕ್ರಾಚ್ ಮಾಡಿ ನೋಡಿ. ನೀವು ಬಹುಮಾನ ಗೆದ್ದರೆ ಪರಿಶೀಲನೆ ಪ್ರಕ್ರಿಯೆಗಾಗಿ ನೀವು ಕೆಲವು ದಾಖಲೆಗಳನ್ನು ಅದರಲ್ಲಿ ಕೊಟ್ಟಿರುವ ನಂಬರ್‌ಗೆ ಕಳುಹಿಸಬೇಕು. ಅವುಗಳಲ್ಲಿ ಒಂದು ಸರಕಾರದಿಂದ ಅಧಿಕೃತವಾಗಿ ನೀಡಲಾದ ಯಾವುದಾದರೂ ಐಡಿ ಕಾರ್ಡ್. ಕಾರ್ಡ್ ಸ್ಕ್ರಾಚ್ ಮಾಡಿದ ಬಳಿಕ ವಾಟ್ಸಫ್ ನಂಬರಿಗೆ ಈ ಕಾರ್ಡ್ ಅನ್ನು ಕಳುಹಿಸಿ ಎಂದೆಲ್ಲಾ ಅದರಲ್ಲಿ ಇತ್ತು. ಅದರಲ್ಲಿ ಮೊದಲ ಬಹುಮಾನ 14,51,೦೦೦ ರೂ. ನಗದಾದರೆ, ಎರಡನೇ ಬಹುಮಾನ ಕಾರು ಹಾಗೂ ಮೂರನೇ ಬಹುಮಾನ ದ್ವಿಚಕ್ರ ವಾಹನವೆಂದಿತ್ತು. ಆ ಕಾರ್ಡ್ ಅನ್ನು ಸ್ಕ್ರಾಚ್ ಮಾಡಿದಾಗ ಮೊದಲ ಬಹುಮಾನವಾದ 14,51,೦೦೦ ರೂ. ನಗದು ಬಹುಮಾನದ ನಂಬರ್ ಅದಾಗಿತ್ತು. ಇದು ಮೋಸದ ಜಾಲವೆಂದೂ ನಮಗೆ ತಿಳಿದರೂ, ಆ ಕಾರ್ಡ್ ಅನ್ನು ನಾವು ಅವರಿಗೆ ಕಳುಹಿಸಿದೆವು. ಆಗ 501 ರೂ. ನಮಗೆ ಕಳುಹಿಸಿ ಹಾಗೂ ಸರಕಾರದಿಂದ ಅಧಿಕೃತವಾಗಿ ನೀಡಲಾದ ಯಾವುದಾದರೂ ಐಡಿ ಕಾರ್ಡ್ ಕಳುಹಿಸಿ ಎಂದು ಅಲ್ಲಿಂದ ಉತ್ತರ ಬಂತು. ಇದು ಸಂಪೂರ್ಣ ಮೋಸದ ಜಾಲ. ಒಂದು ವೇಳೆ ಅವರು ಕೇಳಿದ ಹಣವನ್ನು ಅವರ ಅಕೌಂಟ್‌ಗೆ ಹಾಗೂ ಐಡಿ ಕಾರ್ಡ್ ಅನ್ನು ಅವರಿಗೆ ಕಳುಹಿಸಿದ್ದರೆ, ಆ ಅಕೌಂಟ್‌ನಲ್ಲಿದ್ದ ಹಣವೆಲ್ಲಾ ವಂಚಕರ ಪಾಲಾಗುತ್ತಿತ್ತು. ಮಹಿಳೆಯರನ್ನೇ ಇಂತಹ ವಂಚಕರು ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದ್ದು, ಸಾಮಾನ್ಯವಾಗಿ ಕೆಲವರು ನಮಗೆ ಬಹುಮಾನ ಬಂದಿದೆಯಲ್ವಾ? ಅವರು ಕೇಳಿದ 501 ರೂಪಾಯಿ ಸಣ್ಣ ಮೊತ್ತವಲ್ವಾ? ಎಂದು ಕಳುಹಿಸಿಬಿಡುತ್ತಾರೆ. ಅಲ್ಲದೇ, ಐಡಿ ಅಂದ ತಕ್ಷಣ ಆಧಾರ್ ಕಾರ್ಡ್ ಅನ್ನೇ ಕಳುಹಿಸುತ್ತಾರೆ. ಹಾಗಾಗಿ ಸುಲಭವಾಗಿ ಈ ವಂಚನಾ ಜಾಲದ ಬಲೆಗೆ ಸಿಲುಕಿಕೊಳ್ಳುತ್ತಾರೆ. ವಂಚಕರು ಬೇರೆ ಬೇರೆ ವಿಧದಲ್ಲಿ ಅವರ ಖೆಡ್ಡಾಕ್ಕೆ ಬೀಳಿಸಲು ಯತ್ನಿಸುತ್ತಿದ್ದು, ಆದ್ದರಿಂದ ಹೆಜ್ಜೆ ಹೆಜ್ಜೆಗೂ ನಾವು ಎಚ್ಚರವಾಗಿರುವುದು ಅಗತ್ಯ ಎಂದಿದ್ದಾರೆ.

LEAVE A REPLY

Please enter your comment!
Please enter your name here