ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯದಲ್ಲಿ ಸೋಮವಾರದಿಂದ ಯೋಗ ತರಬೇತಿ ಕಾರ್ಯಕ್ರಮ ಆರಂಭಗೊಂಡಿತು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಕಾರ್ಯಕ್ರಮವನ್ನು ಉದ್ಘಾಟಿಸಿದರು.
![](https://puttur.suddinews.com/wp-content/uploads/2024/06/News-Photo-Yoga-Classes-Inauguration.jpg)
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ಮನಸ್ಸು ಮತ್ತು ದೇಹದ ಸಂಯೋಗವೇ ಯೋಗ. ಇದರ ಭಾಗವಾದ ಸುದರ್ಶನ ಕ್ರಿಯಾ ಯೋಗವನ್ನು ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡುವಂತೆ ತರಬೇತಿ ನೀಡಲಾಗುತ್ತದೆ. ಇದರ ಅಭ್ಯಾಸದಿಂದ ಒಬ್ಬ ವ್ಯಕ್ತಿಯು ಸನಾತನ ಧರ್ಮದ ನಿಜವಾದ ಅನುನಾಯಿಯಾಗುತ್ತಾನೆ ಎಂದು ನುಡಿದರು.
ನಕರಾತ್ಮಕ ಭಾವನೆಗಳಾದ ಸಿಟ್ಟು ಗೊಂದಲಗಳು ಮನುಷ್ಯನ ಉಸಿರಾಟದ ವೇಗವನ್ನು ಹೆಚ್ಚಿಸುತ್ತವೆ. ಹಾಗೂ ಧನಾತ್ಮಕ ಭಾವನೆಗಳು ಉಸಿರಾಟವನ್ನು ನಿಧಾನವಾಗಿಸುತ್ತವೆ. ನಿಧಾನವಾದ ಉಸಿರಾಟದ ಕ್ರಮವನ್ನು ಆಳವಡಿಸಿಕೊಂಡ ಮನುಷ್ಯನ ಆಯುಷ್ಯ ವೃದ್ಧಿಯಾಗುತ್ತದೆ ಹಾಗೂ ವೇಗವಾದ ಉಸಿರಾಟದ ಕ್ರಿಯೆಯಿಂದ ಮನುಷ್ಯನ ಆಯಸ್ಸು ಕ್ಷೀಣಿಸುತ್ತದೆ ಎಂದು ಉದಾಹರಣೆ ಸಹಿತ ಮಕ್ಕಳಿಗೆ ವಿವರಿಸಿದರಲ್ಲದೆ ಜ್ಞಾನದ ಮೊದಲ ಹೆಜ್ಜೆ ಪ್ರಾಣಯಾಮ, ಇದರಿಂದ ಏಕಾಗ್ರತೆ, ನಮ್ಮನ್ನು ನಾವೇ ಗೆಲ್ಲುವ ಸಾಮರ್ಥ್ಯ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಜ್ಞಾನದ ಬತ್ತಳಿಕೆಯಲ್ಲಿ ಪ್ರಜ್ಞಾ ಯೋಗವನ್ನು ಆಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ನಟ್ಟೋಜ ಹಾಗೂ ಯೋಗ ಶಿಕ್ಷಕಿ ಶರಾವತಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಧೃತಿ ಭಟ್ ಪ್ರಾರ್ಥಿಸಿದರು. ಪ್ರಾಚಾರ್ಯೆ ಸುಚಿತ್ರ ಪ್ರಭು ಸ್ವಾಗತಿಸಿ ಉಪಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ. ಎಸ್. ವಂದಿಸಿದರು. ಜೀವಶಾಸ್ತ್ರ ಉಪನ್ಯಾಸಕ ವಿಷ್ಣು ಪ್ರದೀಪ್ ನಿರೂಪಿಸಿದರು.