ನೊಂದು ನೋವಿನಲ್ಲಿ ಬರುವವರಿಗೆ ಸ್ಪಂದನೆ ನೀಡಿ-ಆರೋಗ್ಯ ರಕ್ಷಾ ಸಮಿತಿ ಪ್ರಥಮ ಸಭೆಯಲ್ಲಿ ವೈದ್ಯರುಗಳಿಗೆ ಶಾಸಕರ ಸೂಚನೆ

0

ಪುತ್ತೂರು ಸರಕಾರಿ ಆಸ್ಪತ್ರೆಗೆ ರೂ. 2 ಕೋಟಿ ಅನುದಾನ
ಪುತ್ತೂರಿಗೆ ಬರಲಿದೆ ರೂ.15 ಕೋಟಿಯ ಆಯುಷ್ ಆಸ್ಪತ್ರೆ

ಪುತ್ತೂರು:ಜನರು ನೊಂದು ನೋವಿನಲ್ಲಿ ಬರುವ ಜಾಗ ಅಂತ ಇದ್ರೆ ಅದು ಆಸ್ಪತ್ರೆ ಮತ್ತು ಪೊಲೀಸ್ ಸ್ಟೇಷನ್.ಆದರೆ ಪೊಲೀಸ್ ಠಾಣೆಗೆ ಹೆದರಿ ಹೋಗುವವರಿದ್ದಾರೆ.ಆಸ್ಪತ್ರೆಗೆ ನೋವು ತೆಗೆದುಕೊಂಡು ಬರುವವರು ಇದ್ದಾರೆ.ಇಂತಹ ಸಂದರ್ಭದಲ್ಲಿ ಆಸ್ಪತ್ರೆಗೆ ಬರುವವರಿಗೆ ಸ್ಪಂದನೆ ಸಿಗಬೇಕು.ಆಸ್ಪತ್ರೆಯ ಸಮಸ್ಯೆಯೂ ನನಗೆ ಗೊತ್ತಿದೆ.ಆದರೂ ನೊಂದು ಬಂದವರಿಗೆ ಮೊದಲ ಸ್ಪಂದನೆ ನೀಡಿ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಆಸ್ಪತ್ರೆಯ ವೈದ್ಯರುಗಳಿಗೆ ತಿಳಿಸಿದರು.


ಸರಕಾರಿ ಆಸ್ಪತ್ರೆಯಲ್ಲಿ ಜೂ.18ರಂದು ಸಂಜೆ ನಡೆದ ನೂತನ ಆರೋಗ್ಯ ರಕ್ಷಾ ಸಮಿತಿಯ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಅಸ್ಪತ್ರೆಯ ಕುಂದುಕೊರತೆಯ ಸಭೆ ನಡೆಸಿ ಅವರು ಮಾತನಾಡಿದರು. ಆಸ್ಪತ್ರೆಯ ವೈದ್ಯರನ್ನು ದೂರುವುದಿಲ್ಲ. ಅವರು ನಾಲ್ಕು ಜನ ವೈದ್ಯರ ಕೊರತೆ ಇದ್ದರೂ ಉತ್ತಮ ಸೇವೆ ನೀಡುತ್ತಿದ್ದಾರೆ.ಆದರೂ ಕೆಲವೊಂದು ಪರಿಸ್ಥಿತಿಯಲ್ಲಿ ಜನರಿಗೆ ಅರ್ಥ ಆಗದೆ ನಿಮ್ಮ ಮೇಲೆಯೇ ಕೋಪಗೊಳ್ಳುತ್ತಾರೆ.ಅಂತಹ ಸಂದರ್ಭದಲ್ಲಿ ನೀವು ಅವರೊಂದಿಗೆ ಉತ್ತಮ ಸ್ಪಂದನೆ ಕೊಡಿ.ಸಮಾಜದಲ್ಲಿ, ಅರ್ಧ ವೈದ್ಯರ ಸಮಾಧಾನ ಮತ್ತು ಅರ್ಧ ವೈದ್ಯರು ನೀಡುವ ಔಷಧಿಯಿಂದ ರೋಗಿಯ ಖಾಯಿಲೆ ಗುಣಮುಖವಾಗುತ್ತದೆ. ಇದನ್ನು ಅರಿತು ನೀವು ಕೆಲಸ ಮಾಡಿ ಎಂದ ಅವರು ಪುತ್ತೂರು ಸರಕಾರಿ ಆಸ್ಪತ್ರೆ ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಿರುವುದು ಉತ್ತಮ ವಿಚಾರ.ಇದು ಗುಡ್ ಜಾಬ್ ಎಂದರು.


ಪುತ್ತೂರು ಸರಕಾರಿ ಆಸ್ಪತ್ರೆಗೆ ರೂ. 2 ಕೋಟಿ ಅನುದಾನ:
ಪುತ್ತೂರು ಸರಕಾರಿ ಆಸ್ಪತ್ರೆಗೆ ಒಟ್ಟು ರೂ.2 ಕೋಟಿ ಅನುದಾನ ಬಂದಿದೆ.ಅನುದಾನ ಬೇರೆ ಬೇರೆ ರೀತಿಯಲ್ಲಿ ಬಂದಿರಬಹುದು.ಆದರೆ ನಮಗೆ ಅದು ಒಟ್ಟಾಗಿ ಕಾಣುತ್ತದೆ.ಈಗಾಗಲೇ ರೂ. 1.40 ಕೋಟಿ ಆಸ್ಪತ್ರೆಯ ಕಾಮಗಾರಿಗಳಿಗೆ ಬಂದಿದೆ.ಅದರಲ್ಲಿ ಆಸ್ಪತ್ರೆಯ ಎಲ್ಲಾ ದುರಸ್ತಿ ಕಾರ್ಯಗಳು ನಡೆಯಬೇಕಾಗಿದೆ.ರೂ.50 ಲಕ್ಷ ಲ್ಯಾಬ್‌ಗೆ ಬಂದಿದೆ. ಇದರಲ್ಲಿ ಲ್ಯಾಬ್ ಪರಿಪೂರ್ಣ ಆಗಬೇಕು. ಸ್ಕ್ಯಾನಿಂಗ್ ಮೆಷಿನ್ ಖರೀದಿಸಲು ರೂ. 27 ಲಕ್ಷ ಇದೆ. ರೆಡಿಯೋಲಿಜಿಸ್ಟ್ ರಾಽಕಾ ಅವರು ಕಂಪೆನಿಯಿಂದ ಈ ಕುರಿತು ಮಾಹಿತಿ ಪಡೆದುಕೊಳ್ಳಿ ಎಂದು ಶಾಸಕರು ಹೇಳಿದರಲ್ಲದೆ ಆಸ್ಪತ್ರೆಯ ಬೇಡಿಕೆಯಂತೆ ತುರ್ತು 50 ಬೆಡ್ ಹೆಚ್ಚುವರಿ ಮಾಡಲು ಪ್ರಸ್ತಾವನೆ ಕಳುಹಿಸಲು ತಿಳಿಸಿದರು.


ಪುತ್ತೂರಿಗೆ ಆಯುಷ್ ಆಸ್ಪತ್ರೆಗೆ ರೂ. 15 ಕೋಟಿ:
ಪುತ್ತೂರಿನಲ್ಲಿ ಆಯುಷ್ ಆಸ್ಪತ್ರೆಗಾಗಿ ಈಗಾಗಲೇ ಎರಡು ಕಡೆ ಜಾಗ ನೋಡಿ ಅಗಿದೆ.ನಾಳೆಯೇ ಅದರ ಮುಖ್ಯ ಅಽಕಾರಿ ಬರುತ್ತಾರೆ.ಅದಕ್ಕೆ ಪ್ರಸ್ತಾವನೆ ತಕ್ಷಣ ಸಲ್ಲಿಸುವ ಕೆಲಸ ಆಗಬೇಕು.ರೂ. 15 ಕೋಟಿ ಅದಕ್ಕೆ ಮಂಜೂರು ಆಗುತ್ತದೆ.ಇದರಲ್ಲಿ 50 ಬೆಡ್‌ನ ಆಸ್ಪತ್ರೆಯೂ ಬರುತ್ತದೆ.ಮ್ಯಾನ್ ಪವರ್ ಬರುತ್ತದೆ ಎಂದು ಶಾಸಕರು ಸಭೆಯಲ್ಲಿ ಪ್ರಸ್ತಾಪಿಸಿದರು.


ಸಮಸ್ಯೆ ಇದ್ದರೆ ಗಮನಕ್ಕೆ ತನ್ನಿ:
ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರು ಮಾತನಾಡಿ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆಯಲ್ಲಿ ತೊಂದರೆ ಆದಾಗ ಸಾರ್ವಜನಿಕರಿಗೆ ಸೌಮ್ಯದಿಂದ ಉತ್ತರ ಕೊಡಬೇಕಾಗುತ್ತದೆ.ಏನಾದರೂ ಸಮಸ್ಯೆ ಬಂದಾಗ ಗಮನಕ್ಕೆ ತನ್ನಿ. ವೈದ್ಯರು ಮತ್ತು ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.


ತುರ್ತು ಸಂದರ್ಭವೂ ಲ್ಯಾಬ್ ಚಾಲಿತ:
ಆಸ್ಪತ್ರೆಯ ಲ್ಯಾಬ್ ಸಂಜೆ ಗಂಟೆ 4.30ಕ್ಕೆ ಬಂದ್ ಆಗುತ್ತದೆ.ರಾತ್ರಿ ಬಂದ ರೋಗಿಗಳಿಗೆ ಲ್ಯಾಬ್ ಸೌಲಭ್ಯ ಹೇಗೆ ಎಂದು ಶಾಸಕರು ಪ್ರಶ್ನಿಸಿದರು.ಉತ್ತರಿಸಿದ ಆಸ್ಪತ್ರೆಯ ವೈದ್ಯಾಧಿಕಾರಿ ಲ್ಯಾಬ್‌ನಲ್ಲಿ ಮೂವರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಲ್ಯಾಬ್ ಟೆಕ್ನೀಷಿಯನ್ ಕೊರತೆ ಇದೆ.ಹಾಗಾಗಿ ಸಂಜೆ ತುರ್ತು ಸಂದರ್ಭ ಅವರು ಬಂದು ಸಹಕಾರ ನೀಡುತ್ತಿದ್ದಾರೆ ಎಂದರು.


ಶವಾಗಾರ ಕೊಠಡಿ ಬಳಿ ದಾರಿ ದೀಪ ಸಮಸ್ಯೆ:
ಶವಾಗಾರಕ್ಕೆ ಹೋಗುವ ದಾರಿಯಲ್ಲಿ ದಾರಿ ದೀಪದ ಸಮಸ್ಯೆ ಕುರಿತು ಆಸ್ಪತ್ರೆಯ ಆಡಳಿತಾಕಾರಿ ಶಾಸಕರ ಗಮನಕ್ಕೆ ತಂದರು.ತಕ್ಷಣ ಶಾಸಕರು ಪೌರಾಯುಕ್ತರಿಗೆ ಸೂಚನೆ ನೀಡಿದರು. ಪೌರಾಯುಕ್ತ ಮಧು ಎಸ್ ಮನೋಹರ್ ಅವರು ನಾಳೆಯೇ ದಾರಿ ದೀಪ ಅಳವಡಿಸಿ ಕೊಡುವುದಾಗಿ ಭರವಸೆ ನೀಡಿದರು. ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರು ಒಬ್ಬರೇ ಇದ್ದು ಅವರಿಗೆ ತುಂಬಾ ಒತ್ತಡವಿದೆ ಎಂದು ಶಾಸಕರ ಗಮನಕ್ಕೆ ತರಲಾಯಿತು.


ಅನುಮತಿ ಪಡೆದು ಪ್ರವೇಶ:
ಆಸ್ಪತ್ರೆಗೆ ಅನೇಕ ಮಂದಿ ಹೊರಗಿನಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯ ಸಹಿತ ಮಾತನಾಡಿಸಲು ಬರುತ್ತಾರೆ.ಆದರೆ ಅವರು ಗುಂಪು ಗುಂಪಾಗಿ ಬರುವಾಗ ರೋಗಿಳಿಗೆ ತೊಂದರೆ ಆಗುತ್ತದೆ.ಈ ನಿಟ್ಟಿನಲ್ಲಿ ಆಸ್ಪತ್ರೆಯಿಂದ ಅನುಮತಿ ಪಡೆದು ಒಳಪ್ರವೇಶಿಸುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಈ ಕುರಿತು ನಾಮ-ಲಕ ಅಳವಡಿಸುವ ಕಾರ್ಯಕ್ಕೂ ಅನುಮೋದನೆ ನೀಡಲಾಯಿತು.


ಗಲಾಟೆ ಮಾಡಿದರೆ ಪೊಲೀಸರಿಗೆ ದೂರು ನೀಡಿ:
ಆಸ್ಪತ್ರೆಗೆ ಬಂದು ವೈದ್ಯರ ಸಿಬ್ಬಂದಿಗಳ ಮತ್ತು ಇತರ ವಿಚಾರದಲ್ಲಿ ಸುಮ್ಮನೆ ಗಲಾಟೆ ಮಾಡಿದರೆ ಹಿಂದು ಮುಂದೆ ನೋಡದೆ ಪೊಲೀಸರಿಗೆ ದೂರು ನೀಡಿ. ಪೊಲೀಸರು ಕೂಡಾ ತಕ್ಷಣ ಆಸ್ಪತ್ರೆಯ ಸಮಸ್ಯೆ ವಿಚಾರದಲ್ಲಿ ಸ್ಪಂದನೆ ನೀಡಿ ಪರಿಹಾರ ಮಾಡಿ ಎಂದು ಇನ್‌ಸ್ಪೆಕ್ಟರ್ ಸತೀಶ್ ಜಿ.ಜೆ ಅವರಿಗೆ ಶಾಸಕರು ಸೂಚಿಸಿದರು.


ಕನಿಷ್ಠ 50 ಬೆಡ್ ಆದರೂ ಹೆಚ್ಚುವರಿ ಬೇಕಾಗಿದೆ:
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಅಶಾ ಜ್ಯೋತಿ ಅವರು ಆಸ್ಪತ್ರೆಯ ಕುಂದುಕೊರತೆಯ ಕುರಿತು ಮಾಹಿತಿ ನೀಡಿದರು. ತಾಲೂಕು ಮಟ್ಟದ ಆಸ್ಪತ್ರೆಯಾಗಿದ್ದು 15 ಮಂದಿ ವೈದ್ಯರು ಇಲ್ಲಿ ಬೇಕಿತ್ತು. ಆದರೆ ಈಗ 11 ಮಂದಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ನಾಲ್ಕು ಹುದ್ದೆ ಖಾಲಿ ಇದೆ. ಶಸಚಿಕಿತ್ಸೆ, ಕ್ಯಾಶುವಲಿಟಿ ವೈದ್ಯರು ಬೇಕಾಗಿದ್ದಾರೆ.

ದಿನಕ್ಕೆ 600ರಷ್ಟು ಹೊರ ರೋಗಿಗಳು, 40 ರಿಂದ 70 ಒಳರೋಗಿಗಳು ಬರುತ್ತಾರೆ. ತಿಂಗಳಿಗೆ ಸುಮಾರು 80 ರಿಂದ ನೂರರಷ್ಟು ಹೆರಿಗೆ ಆಗುತ್ತಿದೆ. ನಮ್ಮಲ್ಲಿ ಒಳ್ಳೆಯ ಫಿಸಿಯೋಥೆರಪಿ ಇದೆ. ಅಲ್ಲಿಗೂ ಸುಮಾರು ದಿನಕ್ಕೆ 40 ಮಂದಿ ಬರುತ್ತಾರೆ. ಡಯಾಲಿಸಿಸ್ 13 ಮೆಷಿನ್ ವರ್ಕಿಂಗ್ ಇದೆ. ದಿನಕ್ಕೆ 45 ರೋಗಿಗಳಿಗೆ ಡಯಾಲಿಸಿಸ್ ಸೌಲಭ್ಯ ಆಗುತ್ತಿದೆ. ವೈಟಿಂಗ್ ಲಿಸ್ಟ್‌ನಲ್ಲಿ ಯಾರೂ ಇಲ್ಲ. ಪ್ರತಿ 2ನೇ ಮತ್ತು 4ನೇ ಶುಕ್ರವಾರ ವಿಕಲಚೇತನರ ಆರೋಗ್ಯ ತಪಾಸಣೆ, ಪ್ರತಿ ತಿಂಗಳ 2ನೇ ಮಂಗಳವಾರ ಮಾನಸಿಕ ರೋಗಿಗಳ ತಪಾಸಣೆ ನಡೆಯುತ್ತದೆ. ಆಸ್ಪತ್ರೆಯಲ್ಲಿ ಕ್ಯೂ ಕಡಿಮೆ ಮಾಡಲು ಟೋಕನ್ ವ್ಯವಸ್ಥೆ ಮಾಡಿದ್ದೇವೆ. ರೋಗಿಗಳ ಸಂಖ್ಯೆ ಜಾಸ್ತಿಯಾಗಿದೆ ನಮಗೆ ಕನಿಷ್ಟ 50 ಬೆಡ್ ಆದರೂ ಹೆಚ್ಚುವರಿ ಬೇಕಾಗಿದೆ ಎಂದು ಹೇಳಿದರು. ಡಾ ಜಯದೀಪ್ ಅವರು2022-23ನೇ ವರ್ಷದ ಆದಾಯ, ವೆಚ್ಚವನ್ನು ಸಭೆಗೆ ಮಂಡಿಸಿದರು. ಆಸ್ಪತ್ರೆಯ ಒಳರೋಗಿ ಹೊರ ರೋಗಿ, ಇತರ ಮೂಲದಿಂದ ಬರುವ ಹಣ ಕುರಿತು ಮಾಹಿತಿ ನೀಡಿದರು. ಆರೋಗ್ಯ ರಕ್ಷಾ ಸಮಿತಿ ಸದಸ್ಯ ಮುಕೇಶ್ ಕೆಮ್ಮಿಂಜೆ ಅವರು ಮಾತನಾಡಿ ಜನನ ಪ್ರಮಾಣ ಪತ್ರ ತಿದ್ದುಪಡಿಯಲ್ಲಿ ತೊಂದರೆ ಆಗುತ್ತಿರುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದರು.ಅದನ್ನು ಸರಿ ಪಡಿಸುವ ಕುರಿತು ಶಾಸಕರು ಆಸ್ಪತ್ರೆಗೆ ಸೂಚಿಸಿದರು.

ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಸುದೇಶ್ ಶೆಟ್ಟಿ, ಅಸ್ಕರ್ ಆನಂದ್, ಸಿದ್ದೀಕ್ ಸುಲ್ತಾನ್, ವಿಕ್ಟರ್ ಪಾಯಸ್, ಅನ್ವರ್ ಕಬಕ ವಿವಿಧ ಸಲಹೆ ನೀಡಿದರು. ತಹಸೀಲ್ದಾರ್ ಪುರಂದರ ಹೆಗ್ಡೆ, ಪೌರಾಯುಕ್ತ ಮಧು ಎಸ್ ಮನೋಹರ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ತಾ.ಪಂ ಕಾರ್ಯನಿರ್ವಾಹಕ ಅಽಕಾರಿ ನವೀನ್ ಭಂಡಾರಿ ಹೆಚ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಹೆಚ್ ಐ ವಿ ಅಧಿಕಾರಿ ತಾರಾನಾಥ ಕಾರ್ಯಕ್ರಮ ನಿರೂಪಿಸಿದರು.ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಆರೋಗ್ಯ ರಕ್ಷಾ ಸಮಿತಿ ಜಿಲ್ಲಾ ಸಮಿತಿ ಸದಸ್ಯ ದಾಮೋದರ್ ಮುರ, ಸರಕಾರಿ ಆಸ್ಪತ್ರೆಯ ಜಿಲ್ಲಾ ಮಟ್ಟದ ಅಧಿಕಾರಿಗಳಾದ ರಾಜೇಶ್, ಗುರುಪ್ರಸಾದ್, ಪುಡಾ ಸದಸ್ಯ ನಿಹಾಲ್ ಶೆಟ್ಟಿ, ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರುಗಳು ಸಭೆಯಲ್ಲಿ ಉಪಸ್ಥಿತರಿದ್ದರು. ರಕ್ಷಾ ಸಮಿತಿ ಸದಸ್ಯೆ ಅರುಣಾ ಡಿ ಗೈರಾಗಿದ್ದಾರು.

ಸುದ್ದಿ ವರದಿ ಫಲಶ್ರುತಿ
ಸಾಂತ್ವನ ಕೇಂದ್ರ ದುರಸ್ತಿಗೆ ಸೂಚನೆ
ಈ ಹಿಂದೆ ಪುತ್ತೂರಿನಲ್ಲಿ ಶಾಸಕರ ಕಚೇರಿ ಬಳಿಯೇ ಇರುವ ಸಾಂತ್ವನ ಕೇಂದ್ರದ ದುಃಸ್ಥಿತಿ ಕುರಿತು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು.ಇದೀಗ ಶಾಸಕರು ಮತ್ತೊಮ್ಮೆ ನಗರಸಭೆಗೆ ಸಾಂತ್ವನ ಕೇಂದ್ರ ದುರಸ್ತಿಗೆ ಸೂಚಿಸಿದ್ದಾರೆ.ಮಹಿಳೆಯರಿಗಾಗಿ ಇರುವ ಸಾಂತ್ವನ ಕೇಂದ್ರದ ಕಟ್ಟಡ ಪಾಳು ಬಿದ್ದಿದೆ.ಅದನ್ನು ದುರಸ್ತಿ ಮಾಡಬೇಕು. ಇದರ ಪೂರ್ಣ ಜವಾಬ್ದಾರಿಯನ್ನು ನಗರಸಭೆ ವಹಿಸಿಕೊಂಡು ಅದನ್ನು ದುರಸ್ತಿ ಮಾಡಿ ಕೊಡಬೇಕು.ಇದನ್ನು ಹೇಳಿ ನಾನು ತುಂಬಾ ಸಮಯ ಆಗಿದೆ. ಇನ್ನೂ ದುರಸ್ತಿ ಆಗಿಲ್ಲ ಎಂದು ಶಾಸಕರು ಹೇಳಿದಾಗ ಪೌರಾಯುಕ್ತರು, ಇಲ್ಲಾ ನಾವು ಮಾಡಿಕೊಡುತ್ತೇವೆ ಎಂದರು. ನಾವು ಸಮಾಜದಲ್ಲಿ ಎಲ್ಲಾ ವಲಯ ನೋಡಬೇಕು. ಬರಿ ರಸ್ತೆ ಮತ್ತು ಲೈಟ್ ಹಾಕಿದರೆ ಸಾಲದು ಎಂದು ಶಾಸಕರು ಹೇಳಿದರು.

ಮೆಡಿಕಲ್ ಕಾಲೇಜಿಗೆ ಪ್ರಥಮ, ಆಸ್ಪತ್ರೆ ಅಪ್‌ಗ್ರೇಡ್‌ಗೆ ದ್ವಿತೀಯ ಆದ್ಯತೆ
ಪುತ್ತೂರು ಸರಕಾರಿ ಆಸ್ಪತ್ರೆಯನ್ನು 300 ಬೆಡ್‌ನ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲು ಈ ಹಿಂದೆಯೇ ಪ್ರಸ್ತಾವನೆ ಕಳುಹಿಸಲಾಗಿದೆ.ಆದರೆ ನಮಗೆ ಮೆಡಿಕಲ್ ಕಾಲೇಜು ಆದರೆ ಹೆಚ್ಚುವರಿ ಬೆಡ್‌ನ ಅವಶ್ಯಕತೆ ಇರುವುದಿಲ್ಲ. ಹಾಗಾಗಿ ಮೇಲ್ದರ್ಜೆಗೆ ಏರಿಸಲು ಸ್ವಲ್ಪ ಗೊಂದಲವಿದೆ.ಸೇಡಿಯಾಪು ಸಮೀಪ 40 ಎಕ್ರೆ ಜಾಗ ಸರಕಾರಿ ವೈದ್ಯಕೀಯ ಆಸ್ಪತ್ರೆಗೆ ಮೀಸಲು ಇರಿಸಲಾಗಿದೆ. ಈ ಹಿಂದೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ.ರೂ.250 ಕೋಟಿ ಅನುದಾನ ಕೇಳಿದ್ದೇವೆ. ಮುಖ್ಯಮಂತ್ರಿಗಳಿಗೆ ಕಳೆದ ಬಜೆಟ್‌ನಲ್ಲಿ ಹೊಂದಾಣಿಕೆ ಮಾಡಲು ಆಗಿಲ್ಲ. ಈ ವರ್ಷದ ಬಜೆಟ್‌ನಲ್ಲಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಹಾಗಾಗಿ 300 ಬೆಡ್ ಆಸ್ಪತ್ರೆಗೆ ಪ್ರಸ್ತಾವನೆ ಮಾಡೋದಾ ಅಥವಾ ಮೆಡಿಕಲ್ ಕಾಲೇಜಿನ ಪ್ರಸ್ತಾವನೆ ಮಾಡೋದಾ ಎಂಬುದು ಇಲ್ಲಿ ಮುಖ್ಯ. ನನ್ನ ಪ್ರಕಾರ ಮುಂದಿನ ಆರ್ಥಿಕ ವರ್ಷದಲ್ಲಿ ಮೆಡಿಕಲ್ ಕಾಲೇಜು ಸಿಕ್ಕಿಲ್ಲ ಎಂದರೆ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ 2ನೇ ಆಪ್ಷನ್ ಇಡೋಣ-
ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here