ಮಾಯಿದೆ ದೇವುಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ʼರಕ್ಷಕ- ಶಿಕ್ಷಕರ ಸಮಾವೇಶ 2024-25ʼ

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ರಕ್ಷಕ-ಶಿಕ್ಷಕರ ಸಮಾವೇಶವನ್ನು ಜು.13ರಂದು ನಡೆಸಲಾಯಿತು.

ಶಾಲಾ ಸಹಶಿಕ್ಷಕರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶಾಲಾ ಮುಖ್ಯೋಪಾಧ್ಯಾಯಿನಿಯವರು ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಪನ್ಮೂಲ ವ್ಯಕ್ತಿಯಾದ ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ಪೋಷಕರಲ್ಲಿ ಪೋಷಕತ್ವ ಜಾಗೃತವಾಗಬೇಕು ಮತ್ತು ಮಕ್ಕಳನ್ನು ಯಾವ ರೀತಿ ಬೆಳೆಸಬೇಕು ಹಾಗೂ ಅವರಿಗಾಗಿ ಸಮಯವನ್ನು ಹೇಗೆ ಮೀಸಲಿಡಬೇಕು ಮತ್ತು ಪೋಷಕರು ತಮ್ಮ ಮಕ್ಕಳ ತಪ್ಪುಗಳನ್ನು ವಿಮರ್ಶಿಸಿ ತೀರ್ಮಾನಕ್ಕೆ ಬರಬೇಕು ಎಂದು ಉತ್ತಮ ನಿದರ್ಶನಗಳ ಮೂಲಕ ಸಭೆಯಲ್ಲಿ ಪ್ರಸ್ತುತಪಡಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಚಾಲಕರಾದ ಅತಿ ವಂದನೀಯ ಲಾರೆನ್ಸ್ ಮಸ್ಕರೇನ್ಹಸ್ ಅವರು ಮಾತನಾಡಿ, ಶಾಲೆಯ ನವೀಕರಣದ ಕಾಮಗಾರಿಗೆ ಸಹಕರಿಸಿದ ಎಲ್ಲಾ ದಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಮಕ್ಕಳಿಗೆ ಪ್ರೀತಿಯ ಮೌಲ್ಯಗಳನ್ನು ಕಲಿಸಿಕೊಡಿ ಎಂದು ಕರೆಕೊಟ್ಟರು. ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರು ಹಿತನುಡಿಗಳನ್ನಾಡಿದರು.
ಸಭೆಯಲ್ಲಿ 2024-25ನೇ ಸಾಲಿಗೆ ನೂತನ ರಕ್ಷಕ- ಶಿಕ್ಷಕ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪ್ರತಿ ತರಗತಿಗಳಿಂದ ಒಬ್ಬೊಬ್ಬ ಪೋಷಕರನ್ನು ಸದಸ್ಯರನ್ನಾಗಿ ಸೂಚಿಸಿ ಅನುಮೋದನೆ ನೀಡಲಾಯಿತು. ಆಯ್ಕೆಯಾದ ಪದಾಧಿಕಾರಿಗಳಲ್ಲಿ ಜಯಂತ್ ಉರ್ಲಾಂಡಿ ಇವರು ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿ ಮತ್ತು ಅಕ್ಷತಾ ರೈ ಇವರನ್ನು ಜೊತೆ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.
ಮಕ್ಕಳ ಸುರಕ್ಷಾ ಸಮಿತಿಗೆ ಉಪಾಧ್ಯಕ್ಷರಾಗಿ ಸಂಹಿತಾ ಪಿ. ಇವರು ಆಯ್ಕೆಗೊಂಡರು. ಮುಖ್ಯ ಶಿಕ್ಷಕರು ಮತ್ತು ಸಂಚಾಲಕರ ಮೇಲ್ವಿಚಾರಣೆಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಜಾನೆಟ್ ಡಿಸೋಜ ಇವರು ಶಾಲೆಯ ಪೂರ್ಣ ಪರಿಚಯ ನೀಡಿ, ಶೈಕ್ಷಣಿಕ ಮಾಹಿತಿಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಚರ್ಚ್ ಆಡಳಿತ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ತಾ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಹ ಶಿಕ್ಷಕರಾದ ಸುಬ್ಬರಾಜ ಶಾಸ್ತ್ರಿ ವರದಿ ವಾಚಿಸಿದರು. ಜೂಲಿಯೆಟ್ ತಾವ್ರೋ ಇವರು ಲೆಕ್ಕಪತ್ರ ಮಂಡಿಸಿದರು. ಸಹ ಶಿಕ್ಷಕಿ ಪ್ರೀಮಾ ರೋಚ್ ಧನ್ಯವಾದ ಸಮರ್ಪಿಸಿದರು. ಸಹ ಶಿಕ್ಷಕಿ ಸೌಮ್ಯ ಟಿ. ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಶಿಕ್ಷಕ ಶಿಕ್ಷಕೇತರ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here