ಕಬಕದಲ್ಲಿ ಟ್ರಾಫಿಕ್ ಪೊಲೀಸರಿಂದ ನಿತ್ಯ ಕಿರುಕುಳ- ಸಾರ್ವಜನಿಕರಿಂದ ಶಾಸಕರಿಗೆ ದೂರು

0

ಪುತ್ತೂರು: ಪುತ್ತೂರು ಟ್ರಾಫಿಕ್ ಪೊಲೀಸರಿಂದ ಕಬಕದ ಸಾರ್ವಜನಿಕರಿಗೆ ನಿತ್ಯ ಕಿರುಕುಳ ಆಗುತ್ತಿದ್ದು, ಇದರ ವಿರುದ್ದ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕಬಕದ ಸಾರ್ವಜನಿಕರ ನಿಯೋಗವೊಂದು ಶಾಸಕ ಅಶೋಕ್ ರೈ ಅವರಿಗೆ ಮನವಿ ಮಾಡಿದೆ.
ಸ್ಥಳೀಯ ಮುಂದಾಳು ಮೋಹನ್ ಗುರ್ಜಿನಡ್ಕ ನೇತೃತ್ವದಲ್ಲಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಪ್ರತೀ ದಿನ ಬೆಳಿಗ್ಗೆ 8.30ಕ್ಕೆ ಕಬಕಕ್ಕೆ ಬರುವ ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ನೆಪದಲ್ಲಿ ಬೈಕ್ ಸವಾರರಿಗೆ ನಿತ್ಯ ತೊಂದರೆ ನೀಡುತ್ತಿದ್ದಾರೆ. ಬೆಳಿಗ್ಗೆ ಶಾಲಾ ಮಕ್ಕಳನ್ನು ಬಸ್ಸಿಗೆ ಬಿಡಲು ಪೋಷಕರು ಮಕ್ಕಳನ್ನು ಬೈಕಿನಲ್ಲಿ ಕೂರಿಸಿಕೊಂಡು ಬರುವಾಗಲೂ ಅಡ್ಡಗಟ್ಟುವ ಪೊಲೀಸರು ಮಕ್ಕಳಿಗೆ ಹೆಲ್ಮೆಟ್ ಇಲ್ಲ ಎಂದು ಹೇಳಿ 500 ದಂಡ ವಿಧಿಸುತ್ತಿದ್ದಾರೆ. ಇದರಿಂದ ಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯುಂಟಾಗುತ್ತಿದೆ. ಪೊಲೀಸರ ಕಿರಿಕಿರಿಯಿಂದ ಸಾರ್ವಜನಿಕರು ಹೈರಾಣಾಗಿದ್ದು, ಇವರ ವಿರುದ್ದ ಕ್ರಮಕೈಗೊಳ್ಳುವಂತೆ ಮತ್ತು ಸಾರ್ವಜನಿಕರಿಗೆ ವಿನಾ ಕಾರಣ ತೊಂದರೆ ನೀಡದಂತೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ಸ್ವೀಕರಿಸಿದ ಶಾಸಕರು ಸಾರ್ವಜನಿಕರಿಗೆ ವಿನಾ ಕಾರಣ ತೊಂದರೆ ನೀಡದಂತೆ ಸೂಚನೆಯನ್ನು ನೀಡಿದ್ದಾರೆ.

LEAVE A REPLY

Please enter your comment!
Please enter your name here