ಬಜತ್ತೂರು: ಮುದ್ಯ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತೆಯಾದ ಶಿಲಾಶಾಸನದಲ್ಲಿ ಕುತೂಹಲಕಾರಿ ಅಂಶ ಬಯಲಿಗೆ!

0

‘ಶಾಸನ-ಶೋಧನ-ಅಧ್ಯಯನ-ಸಂರಕ್ಷಣಾ’ ಯೋಜನೆಯಡಿಯಲ್ಲಿ 17ನೇ ಶತಮಾನದ ಶಾಸನ ಅಧ್ಯಯನ

ಉಪ್ಪಿನಂಗಡಿ: ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ನಡೆಸುವಂತಹ ‘ಶಾಸನ-ಶೋಧನ-ಅಧ್ಯಯನ-ಸಂರಕ್ಷಣಾ’ ಯೋಜನೆಯಡಿಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಮುದ್ಯ ಎಂಬಲ್ಲಿ ಇರುವ ಪುರಾತನ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಲಭ್ಯವಾದ ಸುಮಾರು 17ನೇ ಶತಮಾನದ (ಸುಮಾರು 307 ವರ್ಷದ) ಕನ್ನಡ ಶಿಲಾಶಾಸನವನ್ನು ಸಂಶೋಧಕರಾದ ಡಾ. ಉಮಾನಾಥ ಶೆಣೈ ಅವರ ನೇತೃತ್ವದಲ್ಲಿ ಯುವ ಅಧ್ಯಯನಕಾರರಾದ ಶ್ರೀಶಾವಾಸವಿ (ವಿದ್ಯಾಶ್ರೀ ಎಸ್) ತುಳುನಾಡ್ ಹಾಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ರವರ ಸಹಕಾರದೊಂದಿಗೆ ಅಧ್ಯಯನ ಮಾಡಲಾಯಿತು.


ಶಾಸನದ ಸ್ವರೂಪ:
ಪತ್ತೆಯಾದ ಶಿಲಾ ಶಾಸನವು ಸುಮಾರು 37 ಇಂಚು ಎತ್ತರ 21 ಇಂಚು ಅಗಲವಾಗಿದೆ. ಶಾಸನದ ಮುಂಭಾಗದಲ್ಲಿ 18 ಸಾಲುಗಳು ಹಾಗೂ ಹಿಂಭಾಗದಲ್ಲಿ 9 ಸಾಲುಗಳನ್ನು ಒಳಗೊಂಡ ಬರಹವನ್ನು ಕನ್ನಡ ಲಿಪಿಯಲ್ಲಿ ಕೆತ್ತಲಾಗಿದೆ. ಶಾಸನದ ಶಿರೋಭಾಗದ ಮಂಟಪದಲ್ಲಿ ಶಿವಲಿಂಗದ ಆಕೃತಿಯನ್ನು ಹಾಗೂ ಬಲ, ಎಡಭಾಗದಲ್ಲಿ ಸೂರ್ಯ, ಚಂದ್ರ ಹಾಗೂ ದೀಪಗಳನ್ನು ಕೆತ್ತಲಾಗಿದೆ. ಶಾಸನದ ಹಿಂಭಾಗದಲ್ಲಿ ಬಾಲವನ್ನು ಎತ್ತಿ ಮುಖವನ್ನು ಹಿಂದಕ್ಕೆ ತಿರುಗಿಸಿದ ಭಂಗಿಯಲ್ಲಿರುವ ನೆಗಳೆ (ಶಾರ್ದೂಲ) ಹಾಗೂ ಅದರ ಎಡಬಲ ಭಾಗದಲ್ಲಿ ಐದು ಎಸಳಿನ ಹೂವನ್ನು ಕೆತ್ತಲಾಗಿದೆ.


ಶಾಸನದ ಪೂರ್ಣ ಪಾಠ ಇಂತಿದೆ
ಸ್ವಸ್ತಿ ಶ್ರೀ ಮಹಾಗಣಪತಯೇ ನಮಃ ಕ
ಶಕ ವರುಷ 16441 51 ಸಂದ ವಿಷ್ಣು
ಸಂವತ್ಸರದ ತುಲಾ ಬೃಹಸ್ಪತಿ ಸಿಂಹ ಮಾಸಂ 21ನೆಯ ಶು| ಶ್ರೀ ಮದ(ಹ)
ಗಡಿಯಂಕ ಸಿಂಗ ಕುಜುಂಬ ಶೆಟ್ಟಿಯರಾದ
ಕರನೆಯ ಬೆಡತಿಯರು ಮಾಣಿಕ್ಕಳ ಡೊಂಬ
ಳಿಯ ಆಳ್ವ ನಾರಣ ಶೆಟ್ಟಿ ಹೇಳಿ ಮಾಡಿಸಿದ ಧರ್ಮ್ಮ
ಬಲ್ಯಾಳು ಹೊಸತಾಗಿ ಮಾಡಿಸಿದ ನಾಯಿಲದ ಕಳ
ಭೂಮಿಯ ಫಲ ಮುಂತಾಗಿ ಮೆದುಗೆಯ ದಸ್ತಾಂನ
ದಲಿ ವರುಷ ಪ್ರತಿ ಸೋಣೆ ತಿಂಗಳಲಿ ದಿನ ಮೂ
ವತ್ತು ದಿನಂಪ್ರತಿ ಬಂದಯಿಸಕ್ಕೆ ಬ್ರಾಂಹಣ
ಭೋಜನವಾಚಂದ್ರಾರ್ಕ್ಕವಾಗಿ ನಡೆಸುದು ಈ
ಧರ್ಮ್ಮವನ್ನು ನಾಳ ಬಾಳುವರು ಪಾಲಿಸಿ ನಡೆಸು
ವರು ಯೀ ತುಳು ರಾಜ್ಯಕ್ಕೆ ಅಧೀಕರಿಸಿದ ಧರ್ಮ್ಮ
ವನು ಬಲ್ಲಾಳು ಮಾಡಿಡದಕ್ಕಿಲ್ಲಾರು ಕಂದಕವನೆ
ಸವರಿಗೆ ಸಾವಿರ ಕಪಿಲೆಯಂ ಬ್ರಾಂಹಣರಂ
ಮಗು ತಾಯಿ ತಂದೆಯರಂ ವಾರಣಾಸಿಯಲು
ವಧಿಸಿದ ಪಾಪವದು ಪೀಠದಲಿ ಶಿವಕಳೆಯ
ಯೆತ್ತುಗಳ ಪಾದೆಯ ಮ
ಹಾ ಧರ್ಮ್ಮ ಶಾಸನಮಂ ಬರೆ
ದವನು ಕನ್ನೋರ್ಗದ ಕವಿ ಗಜಾರಿ
ಕುಶಲಂಗೋಯ ಸೇನೆಭೋರ ಮ
ಗ ಕೇಶವನಾಥನ ಬರಹ ಯೀ
ಮಹಾಧರ್ಮ್ಮಮಂ ಕಲ್ಲಿಗೇರೆಸಿ
ಸಮರ್ಪಿಸಿದ ಬೆಲ್ಲಾರೆ ಗೂರಿ
ಗೌಡ ನಾರಣ ಶೆಟ್ಟಿ ಹಲ ನಿಲ್ಲಿ
ಸಿದ ಮಂಗಳ ಮಹಾ ಶ್ರೀ


ಶಾಸನದ ಸಾರಾಂಶ :
ಸ್ವಸ್ತಿ ಶ್ರೀ ಮಹಾಗಣಪತಿಯೇ ನಮಃ ಎಂಬ ಪ್ರಾರ್ಥನಾ ಶ್ಲೋಕದಿಂದ ಪ್ರಾರಂಭವಾಗುವ ಈ ಕನ್ನಡ ಶಾಸನವನ್ನು ಶಕ ವರುಷ 1644 ಅಂದರೆ ಕ್ರಿಸ್ತಶಕ 1722 ವಿಕೃತಿ ನಾಮ ಸಂವತ್ಸರದ ತುಲಾ ಬೃಹಸ್ಪತಿ ಸಿಂಹ ಮಾಸದಲ್ಲಿ ಸ್ಥಾಪಿಸಲಾಗಿದೆ. ಈ ಶಾಸನದ ಪ್ರಕಾರ ವರ್ಷಂಪ್ರತಿ ಮೆದುಗೆ ದೇವಸ್ಥಾನಕ್ಕೆ ಸೋಣ ತಿಂಗಳಲ್ಲಿ ಅಥವಾ ಶ್ರಾವಣ ಮಾಸದಲ್ಲಿ ಮೂವತ್ತು ದಿನಗಳಲ್ಲಿ ದಿನಂಪ್ರತಿ ಬರುವ ಬ್ರಾಹ್ಮಣರಿಗೆ ಅವರು ಬಂದ ಸಮಯಕ್ಕೆ ಬಲ್ಲಾಳರು ಹೊಸತಾಗಿ ಮಾಡಿಸಿದ ನಾಯಿಲದ ಕೆಳ ಭೂಮಿಯ ಫಲದಲ್ಲಿ ಭೋಜನವನ್ನು ನೀಡಬೇಕು. ಈ ಧರ್ಮವನ್ನು ನಾಯಿಲದಲ್ಲಿ ಬಾಳುವವರು ಅಚಂದ್ರಾರ್ಕವಾಗಿ ಪಾಲಿಸಿಕೊಂಡು ಬರತಕ್ಕದ್ದು. ಇದನ್ನು ಈ ತುಳು ರಾಜ್ಯಕ್ಕೆ ಅಧೀಕರಿಸಿದ ಬಲ್ಲಾಳರು ಮಾಡಿಲ್ಲವೆಂದು ಯಾರಾದರೂ ಬೇಧ ಮಾಡಿದರೆ ಅಥವಾ ಕಂದಕವನ್ನು ಏರ್ಪಡಿಸಿದರೆ ಅವರಿಗೆ ಸಾವಿರ ಕಪಿಲೆಯನ್ನು, ಬ್ರಾಹ್ಮಣರನ್ನು, ಮಗು, ತಾಯಿ, ತಂದೆಯರನ್ನು ವಾರಣಾಸಿಯಲ್ಲಿ ವಧಿಸಿದ ಪಾಪ ತಗಲುವುದು ಎಂಬ ಶಾಪಾಶಯವಿದೆ. ಪೀಠದಲ್ಲಿ ಶಿವಕಳೆಯಿರುವ, ಎತ್ತುಗಳ ಪಾದೆಯ ಈ ಧರ್ಮಶಾಸನವನ್ನು ನಾರಣ ಶೆಟ್ಟಿ ಎಂಬುವವರು ಹೇಳಿ, ಕೇಶವನಾಥ ಎಂಬವರಲ್ಲಿ ಬರೆಸಿ ಸಮರ್ಪಿಸಿದರು ಎಂಬುದಾಗಿದೆ.


ಇದರಲ್ಲಿ ಗಡಿಯಂಕ ಸಿಂಗ ಕುಜುಂಬ ಶೆಟ್ಟಿ, ಮಾಣಿಕ್ಕಳ ಡೊಂಬಳಿಯ ಆಳ್ವ, ನಾರಣ ಶೆಟ್ಟಿ, ಬೆಲ್ಲಾರೆ ಗೂರಿ ಗೌಡ, ಕನ್ನರ್ಗದ ಕವಿ ಗಜಾರಿ ಕುಶಲಂಗೋಯ (ಕುಶ ಅಂಣಯ) ಸೇನೆಭೋರ ಇತ್ಯಾದಿ ವ್ಯಕ್ತಿನಾಮ ಮತ್ತು ತುಳು ರಾಜ್ಯ, ವಾರಣಾಸಿ, ಮಾಣಿಕ್ಕಳ, ನಾಯಿಲ, ಎತ್ತುಗಳ ಪಾದೆ, ಬೆಲ್ಲಾರೆ ಸ್ಥಳನಾಮಗಳು ಕಂಡು ಬರುತ್ತವೆ.


ಜೀರ್ಣೋದ್ದಾರ ಕಾಲದಲ್ಲಿ ಪತ್ತೆಯಾದ ಮೂರ್ತಿ :
ಈ ದೇವಸ್ಥಾನದ ಜೀರ್ಣೋದ್ಧಾರ ಮಾಡುವ ಸಮಯದಲ್ಲಿ ಭೂಮಿಯ ಒಳಗೆ ಒಂದು ಸಣ್ಣ ಪಂಚ ಲೋಹದ ಮೂರ್ತಿಯು ಲಭ್ಯವಾಗಿದ್ದು, ಸದೃಢ ಮೈಕಟ್ಟಿನ, ಅಲಂಕೃತ ಕುದುರೆ ಏರಿ ಕುಳಿತ ಭಂಗಿಯಲ್ಲಿದೆ. ಮೂರ್ತಿಯು ಪುರುಷನಾಗಿದ್ದು, ಬಲ ಕೈಯಲ್ಲಿ ಹರಿತವಾದ ಖಡ್ಗದ ಆಕಾರದ ಆಯುಧವನ್ನು ಹಿಡಿದಿದ್ದು, ಮೂರ್ತಿಯ ಎರಡು ಕೈ ಮಣಿ ಗಂಟು ಹಾಗೂ ಕೈ ರಟ್ಟೆಯಲ್ಲಿ ಆಭರಣವನ್ನು ಧರಿಸಿದ್ದು, ಎರಡು ಕಾಲುಗಳಲ್ಲಿ ಖಡಗ ಧರಿಸಿದ್ದಾನೆ. ಮೂರ್ತಿಯ ಕಿವಿಯಲ್ಲಿ ಕರ್ಣಕುಂಡಲಗಳಿದ್ದು, ಉದ್ದನೆಯ ಕಿರೀಟಧಾರಿಯಾಗಿ ನೋಡಲು ವೀರಯೋಧನಂತೆ ಕಾಣುತ್ತಾನೆ. ಮೂರ್ತಿ, ಕುದುರೆಯ ಎತ್ತರ ಸುಮಾರು 3 ಇಂಚು ಎತ್ತರ ಇರಬಹುದು.


ಶಾಸನ ತಜ್ಞ ಹಾಗೂ ವಿಗ್ರಹ ತಜ್ಞರಾದ ಡಾ. ವೈ. ಉಮಾನಾಥ ಶೆಣೈ ಅವರ ಪ್ರಕಾರ ಇದು ಸುಮಾರು ಹದಿನಾರನೆಯ ಶತಮಾನಕ್ಕೆ ಸಂಬಂಧಿಸಿದಾಗಿದ್ದು, ಜೈನ ಸಂಪ್ರದಾಯದ ಬ್ರಹ್ಮದೇವರ ಮೂರ್ತಿ. ಇದು ಸ್ಥಳೀಯ ಜೈನ ಬಲ್ಲಾಳ ಅರಸರು ಈ ದೇವಾಲಯಕ್ಕೆ ಕೊಟ್ಟದ್ದಿರಬೇಕು. ಇದು ಪಂಚಲಿಂಗೇಶ್ವರನ ದೇವಾಲಯವಾಗಿರುವುದರಿಂದ ಶಕ್ತಿ ಪರಾಕ್ರಮಗಳ ಜೈನ ಬ್ರಹ್ಮ ದೇವರ ಮೂರ್ತಿಯನ್ನು ಇಲ್ಲಿಗೆ ಕೊಟ್ಟಿರುವುದು ತೀರ ಸಹಜವೇ ಆಗಿದೆ ಎನ್ನುತ್ತಾರೆ.ಈ ಶಾಸನ ಅಧ್ಯಯನ ಮಾಡುವ ಸಮಯದಲ್ಲಿ ದೇವಸ್ಥಾನದ ಭಜಕರಾದ ನಟ್ಟಿ ವೇಣುಗೋಪಾಲ ನಾಯಕ್, ನಾರಾಯಣ ಪೂಜಾರಿ, ಶರತ್ ಕುಮಾರ್ ದಾಮೋದರ ಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here