ಪಾಂಗಳಾಯಿ ಬೆಥನಿ ಆ.ಮಾ.ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲಾ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟ

0

ಬೆಥನಿ ಆ.ಮಾ. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕಿಯರ ತಂಡ ಪ್ರಥಮಪ್ರಾಥಮಿಕ ಮತ್ತು ಪೌಢ ಶಾಲಾ ಬಾಲಕರ ವಿಭಾಗದಲ್ಲಿ ಇಂದ್ರಪ್ರಸ್ಥ ಉಪ್ಪಿನಂಗಡಿ ಪ್ರಥಮ

ಪುತ್ತೂರು: ದ.ಕ.ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆ ಪಾಂಗಳಾಯಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ, ಬಾಲಕಿಯರ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟವು ಸೆ.18ರಂದು ದರ್ಬೆ ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.


ಜಿಲ್ಲೆಯ ಪ್ರಾಥಮಿಕ ಶಾಲಾ ಬಾಲಕರ 7 ತಂಡ, ಬಾಲಕಿಯರ 7 ತಂಡಗಳು, ಪ್ರೌಢಶಾಲಾ ವಿಭಾಗದ ಬಾಲಕರ 7 ತಂಡ ಹಾಗೂ ಬಾಲಕಿಯರ 7 ತಂಡಗಳು ಸೇರಿದಂತೆ ಒಟ್ಟು 28 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಪುತ್ತೂರು ತಾಲೂಕಿನ ಇಂದ್ರಪ್ರಸ್ಥ ಉಪ್ಪಿನಂಗಡಿ ಪ್ರಥಮ, ಮಂಗಳೂರು ದಕ್ಷಿಣದ ಸೈಂಟ್ ರೇಮಂಡ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಹಿ.ಪ್ರಾ ಶಾಲೆ ಪಥಮ, ಮಹಾಲಿಂಗೇಶ್ವರ ಶಾಲೆ ಸುರತ್ಕಲ್ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಬಾಲಕರ ವಿಭಾಗದಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ಇರಾಝ್ ಉತ್ತಮ ಎಸೆತಗಾರ, ಶಿಶಿರ್ ಉತ್ತಮ ಹಿಡಿತಗಾರ, ಮಂಗಳೂರು ಸೈಂಟ್ ರೇಮಂಡ್‌ನ ಮಾಯಾಂಕ್ ಸವ್ಯಸಾಚಿ ಪ್ರಶಸ್ತಿ, ಬಾಲಕಿಯರ ವಿಭಾಗದಲ್ಲಿ ಬೆಥನಿಯ ನಿರೀಕ್ಷಾ ಶೆಟ್ಟಿ ಉತ್ತಮ ಎಸೆತಗಾರ, ಆಯಿಷತ್ ಹಿಬಾ ಉತ್ತಮ ಹಿಡಿತಗಾರ, ಸುರತ್ಕಲ್ ಮಹಾಲಿಂಗೇಶ್ಚರದ ಆರ್ವಿ ಸವ್ಯಸಾಚಿ ಪ್ರಶಸ್ತಿ ಪಡೆದುಕೊಂಡರು.


ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಪುತ್ತೂರಿನ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯ ಪ್ರಥಮ,ಮಂಗಳೂರು ಉತ್ತರದ ಚೈತನ್ಯ ಪ್ರೌಢ ಶಾಲೆ ದ್ವಿತೀಯ,ಬಾಲಕಿಯರ ವಿಭಾಗದಲ್ಲಿ ದರ್ಬೆ ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪ್ರಥಮ, ಸುರತ್ಕಲ್ ಮಹಾಲಿಂಗೇಶ್ವರ ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಬಾಲಕರ ವಿಭಾಗದಲ್ಲಿ ಇಂದ್ರಪ್ರಸ್ಥದ ಅಹಮ್ಮದ್ ಶಬೀರ್ ಯು.ಪಿ ಉತ್ತಮ ಎಸೆತಗಾರ, ಚೈತನ್ಯ ಶಾಲಾ ಮಹಮ್ಮದ್ ಸಹದ್ ಉತ್ತಮ ಹಿಡಿತಗಾರ, ಇಂದ್ರಪ್ರಸ್ಥದ ಅಕ್ಷಯ್ ಶೆಟ್ಟಿ ಸವ್ಯಸಾಚಿ, ಬಾಲಕಿಯರ ವಿಭಾಗದಲ್ಲಿ ಬೆಥನಿಯ ನಿಹಾರಿಕಾ ಉತ್ತಮ ಎಸೆತಗಾರ, ವೈಗಾ ಎಂ. ಉತ್ತಮ ಹಿಡಿತಗಾರ, ಸುರತ್ಕಲ್ ಮಹಾಲಿಂಗೇಶ್ವರದ ಜಾನ್ವಿ ಸವ್ಯಸಾಚಿ ಪ್ರಶಸ್ತಿ ಪಡೆದುಕೊಂಡರು. ವಿಜೇತರು ಸುಳ್ಯದಲ್ಲಿ ನಡೆಯಲಿರುವ ಮೈಸೂರು ವಿಭಾಗ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.

4 ವಿಭಾಗಗಳಲ್ಲಿಯೂ ಚಾಂಪಿಯನ್ ಆದ ಪುತ್ತೂರು ತಾಲೂಕು…!
ಪ್ರಾಥಮಿಕ, ಪ್ರೌಢಶಾಲಾ ವಿಭಾಗದ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ನಡೆದ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಎಲ್ಲಾ 4 ವಿಭಾಗಗಳಲ್ಲಿಯೂ ಪುತ್ತೂರು ತಾಲೂಕು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಪುತ್ತೂರು ತಾಲೂಕಿನ ಇಂದ್ರಪ್ರಸ್ಥ ಉಪ್ಪಿನಂಗಡಿ, ಬಾಲಕಿಯರ ವಿಭಾಗದಲ್ಲಿ ದರ್ಬೆ ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಹಿ.ಪ್ರಾ ಶಾಲೆ, ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಪುತ್ತೂರಿನ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯ, ಬಾಲಕಿಯರ ವಿಭಾಗದಲ್ಲಿ ದರ್ಬೆ ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ.


ಕ್ರೀಡಾ ಮೆರವಣಿಗೆ: ಪಂದ್ಯಾಟದ ಪ್ರಾರಂಭದಲ್ಲಿ ಅತಿಥಿ, ಅಭ್ಯಾಗತರು ಹಾಗೂ ಟ್ರೋಫಿಯನ್ನು ಶಾಲಾ ಆವರಣದಿಂದ ಮೆರವಣಿಗೆಯ ಮೂಲಕ ಕ್ರೀಡಾಂಗಣಕ್ಕೆ ಕರೆತರಲಾಯಿತು. ನಗರ ಸಭಾ ಅಧ್ಯಕ್ಷೆ ಲೀಲಾವತಿಯವರು ಪರಿವಾಳ ಹಾರಿ ಬಿಡುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿ ಶುಭಹಾರೈಸಿದರು.ಪಂದ್ಯಾಟದ ಚೆಂಡನ್ನು ಡ್ರೋನ್ ಮುಖಾಂತರ ಹಾರಿಸಿಕೊಂಡು ಬಂದು ಕ್ರೀಡಾಂಗಣಕ್ಕೆ ಸುತ್ತ ತರುವ ಮೂಲಕ ಪಂದ್ಯಾಟಕ್ಕೆ ವಿನೂತನ ಶೈಲಿಯಲ್ಲಿ ಚಾಲನೆ ನೀಡಲಾಯಿತು.


ಸಾಂಪ್ರದಾಯ ಕ್ರೀಡೆಗಳ ಜೊತೆಗೆ ಕಂಬಳಕ್ಕೂ ಅಡಿಪಾಯ ದೊರೆಯಬೇಕು-ಜುಬಿನ್ ಮೊಹಾಪಾತ್ರ: ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಮಾತನಾಡಿ, ಜೀವನದಲ್ಲಿ ಸಾಮೂಹಿಕ ನಾಯಕತ್ವ ಹಾಗೂ ತಂಡದ ಮೂಲಕ ಸಾಧಿಸುವ ಮನೋಭಾವನೆಗಳು ಮೂಡುವಲ್ಲಿ ಕ್ರೀಡೆ ಸಹಕಾರಿಯಾಗುತ್ತದೆ. ಸ್ಪರ್ಧಾತ್ಮಕ ಮನೋಭಾವದಿಂದಾಗಿಯೇ ಸ್ವಾತಂತ್ರ್ಯಾ ನಂತರ ಭಾರತದಲ್ಲಿಯೂ ಇಸ್ರೋ ಸಂಸ್ಥೆ ಪ್ರಾರಂಭಿಸಿ ಚಂದ್ರಯಾನ ನಡೆಸುವ ಮೂಲಕ ಇಂದು ಭಾರತ ಸೂಪರ್ ಪವರ್ ದೇಶವಾಗಿರುವುದು ಮಾತ್ರವಲ್ಲದೇ ಅತೀ ಕಡಿಮೆ ವೆಚ್ಚದಲ್ಲಿ ಚಂದ್ರಯಾನ ಮಾಡುವ ಮೂಲಕ ಇತಿಹಾಸ ಸೃಷ್ಠಿಸಿದೆ ಎಂದರು. ಒಂದೇ ಕ್ರೀಡೆಗೆ ಆದ್ಯತೆ ನೀಡಿದರೆ ಉಳಿದ ಕ್ರೀಡೆಗಳಲ್ಲಿ ಸಾಧನೆ ಮಾಡುವುದು ಅಸಾಧ್ಯ. ವಾಲಿಬಾಲ್, ತ್ರೋಬಾಲ್‌ನಂತೆ ಸಾಂಪ್ರದಾಯಿಕ ಕ್ರೀಡೆಗಳಾದ ಕಬಡ್ಡಿ, ಖೋ-ಖೋ ಗಳ ಜೊತೆಗೆ ಜಿಲ್ಲೆಯ ಕಂಬಳಕ್ಕೂ ಅಡಿಪಾಯ ದೊರೆಯಬೇಕು. ಅವುಗಳ ಬೆಳವಣಿಗೆಯಾಗಬೇಕು. ಕ್ರೀಡೆಗಳಲ್ಲಿ ಭಾಗವಹಿಸುವ ಮುಖಾಂತರ ಜೀವನದಲ್ಲಿ ಕ್ರೀಡೆಯ ಜೊತೆಗೆ ಉತ್ತಮ ವಿಚಾರಗಳ ಅಭಿವೃದ್ಧಿ, ಜೀವನದಲ್ಲಿ ಸ್ಪರ್ಧಾತ್ಮಕ ಮನೋಭಾವನೆಯ ಜೊತೆಗೆ ನಮ್ಮ ಶಾರೀರಿಕ, ಮಾನಸಿಕ ಆರೋಗ್ಯದ ಬೆಳವಣಿಗೆಗೂ ಕ್ರೀಡೆ ಸಹಕಾರಿಯಾಗಿದೆ ಎಂದರು.


ಕ್ರೀಡೆ ಮೂಲಕ ಎಲ್ಲರೂ ಒಂದೇ ಎಂಬ ಭಾವನೆ-ಪಂಜಿಗುಡ್ಡೆ ಈಶ್ವರ ಭಟ್: ಮುಖ್ಯ ಅತಿಥಿಯಾಗಿದ್ದ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ಜಾತಿ, ಧರ್ಮದ ಹೆಸರಿನಲ್ಲಿ ಬಡಿದಾಡಿಕೊಳ್ಳುತ್ತಿರುವ ಸಮಾಜದಲ್ಲಿ ಕ್ರೀಡೆಯು ಈ ಎಲ್ಲಾ ಭಾವನೆಗಳನ್ನು ಬಿಟ್ಟು ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸುತ್ತದೆ. ಭಾರತವು ಜನಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು ಕ್ರೀಡೆಯಲ್ಲಿಯೂ ಮುಂದೆ ಬರಬೇಕು. ಇದಕ್ಕೆ ಪೂರಕವಾದ ಎಲ್ಲಾ ರೀತಿಯ ಪ್ರೋತ್ಸಾಹಗಳನ್ನು ನೀಡಬೇಕಾದ ಅವಶ್ಯಕತೆಯಿದೆ ಎಂದು ಹೇಳಿದರಲ್ಲದೆ, ಇಲ್ಲಿನ ಜಿಲ್ಲಾ ಮಟ್ಟದ ಪಂದ್ಯಾಟವು ರಾಜ್ಯ ಮಟ್ಟದ ಮಾದರಿಯಲ್ಲಿ ಸಂಯೋಜನೆಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಕ್ರೀಡಾ ಪ್ರತಿಭೆಗಳು ದೇಶದ ತಾರೆಗಳಾಗಿ ಬೆಳೆಯಬೇಕು-ಬಾಲಚಂದ್ರ ಕೆಮ್ಮಿಂಜೆ: ನಗರ ಸಭಾ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಮಾತನಾಡಿ, ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಎಲ್ಲರನ್ನೂ ಸೇರಿಸಿಕೊಳ್ಳುವ ಮೂಲಕ ಬಹಳಷ್ಟು ಸುಂದರವಾಗಿ ಮೂಡಿಬಂದಿದೆ. ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯವಾಗಿದೆ. ಕ್ರೀಡಾಪಟುಗಳಲ್ಲಿ ಕ್ರೀಡಾ ಸ್ಪೂರ್ತಿ ಬೆಳೆದು ದೇಶದ ತಾರೆಗಳಾಗಿ ಬೆಳೆಯಬೇಕು ಎಂದರು.


ಕಠಿಣ ಪರಿಶ್ರಮದಿಂದ ಗೆಲ್ಲುವ ಛಲವಿರಬೇಕು-ಡಾ|ಮಾರಿಯೋಲ: ಬೆಥನಿ ಸಂಸ್ಥೆಯ ಮಂಗಳೂರು ಪ್ರಾಂತ್ಯದ ಶಿಕ್ಷಣ ಸಂಯೋಜಕಿ ಡಾ|ಮಾರಿಯೋಲ ಮಾತನಾಡಿ, ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ 28 ತಂಡಗಳು ಬೆಥನಿ ಶಾಲಾ ಆವರಣದಲ್ಲಿ ಸಂಗಮವಾಗಿವೆ.ಇಲ್ಲಿ ಕ್ರೀಡಾ ಪ್ರತಿಭೆಗಳಿಗೆ ಉತ್ತಮ ವಾತಾವರಣವಿದೆ. ಪಂದ್ಯಾಟದಲ್ಲಿ ಉತ್ತಮ ಸ್ಪರ್ಧೆಯೊಂದಿಗೆ ಕಠಿಣ ಪರಿಶ್ರಮದಿಂದ ಗೆದ್ದುಬರುವ ಛಲವನ್ನು ರೂಡಿಸಿಕೊಳ್ಳಬೇಕು ಎಂದರು.


ವಿದ್ಯಾರ್ಥಿಗಳಿಂದ ಇನ್ನಷ್ಟು ಸಾಧನೆಯಾಗಲಿ-ಲೀಲಾವತಿ ಅಣ್ಣು ನಾಯ್ಕ: ಅಧ್ಯಕ್ಷತೆ ವಹಿಸಿದ್ದ ನಗರ ಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಮಾತನಾಡಿ, ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿದ್ದಾರೆ.ಇಲ್ಲಿನ ವಿದ್ಯಾರ್ಥಿಗಳು ಇನ್ನಷ್ಟು ಸಾಧನೆ ಮಾಡಲಿ. ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸುವಂತಾಗಲಿ ಎಂದರು.


ನಗರ ಸಭಾ ಸದಸ್ಯೆ ವಿದ್ಯಾ ಆರ್ ಗೌರಿ, ಪೌರಾಯುಕ್ತ ಮಧು ಎಸ್ ಮನೋಹರ್, ಉದ್ಯಮಿ ಶಿವರಾಮ ಆಳ್ವ, ರೋಡ್ರಿಗಸ್ ಚಿಕನ್ ಮ್ಹಾಲಕಿ ಗ್ಲಾಡಿಯಸ್ ರೋಡ್ರಿಗಸ್, ಅಮೆಚೂರು ಕಬಡ್ಡಿ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ದಯಾನಂದ ಕೋರ್ಮಂಡ, ಪುತ್ತೂರು ವರ್ತಕ ಸಂಘದ ಮಾಜಿ ಅಧ್ಯಕ್ಷ ಜಾನ್ ಕುಟಿನ್ಹಾ, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಉಮೇಶ್ ನಾಯಕ್, ಅಮರ್ ಅಕ್ಬರ್ ಆಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿಯ ರಝಾಕ್ ಬಪ್ಪಳಿಗೆ, ಸಿಟಿ ಆರ್ಟ್ಸ್ ಸ್ಪೋರ್ಟ್ಸ್ ಕ್ಲಬ್‌ನ ಗೌರವಾಧ್ಯಕ್ಷ ಮೋಹನದಾಸ ರೈ, ಅಧ್ಯಕ್ಷ ಬಿ.ಜಿ ಜುನೈದ್, ಉದ್ಯಮಿ ಮಹಮ್ಮದ್ ಅಯ್ಯೂಬ್, ಇರ್ದೆ ಉಪ್ಪಳಿಗೆ ಸರಕಾರಿ ಪ್ರೌಢಶಾಲಾ ನಿವೃತ್ತ ಮುಖ್ಯಗುರು ನಾರಾಯಣ, ಪದ್ಮಶ್ರೀ ಮೆಡಿಕಲ್‌ನ ಮ್ಹಾಲಕ ತಾರಾನಾಥ ರೈ ಬಿ., ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ವಸಂತ ಮೂಲ್ಯ, ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸೀತಾರಾಮ ಗೌಡ ಮಿತ್ತಡ್ಕ, ತಾಲೂಕು ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸುಧಾಕರ ರೈ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸ್ಟ್ಯಾನಿ ಪ್ರವೀಣ್ ಮಸ್ಕರೇನಸ್, ಶಿಕ್ಷಣ ಸಂಯೋಜಕರಾದ ಹರಿಪ್ರಸಾದ್, ದೈಹಿಕ ಶಿಕ್ಷಣ ಪರಿವೀಕ್ಷಕ ಚಕ್ರಪಾಣಿ ಹಾಗೂ ಅಮೃತಕಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸನ್ಮಾನ: ಜಿಲ್ಲಾ ಮಟ್ಟದ ಪಂದ್ಯಾಟವನ್ನು ಯಶಸ್ವಿಯಾಗಿ ಸಂಘಟಿಸಿದ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯಗುರು ಭಗಿನಿ ಶಾಂತಿ ಬಿ.ಎಸ್., ದೈಹಿಕ ಶಿಕ್ಷಣ ಶಿಕ್ಷಕರಾದ ಹರೀಶ್, ನಿರಂಜನ್, ಅಕ್ಷಯ್, ಮೂವತ್ತು ಸಾವಿರ ವೆಚ್ಚದ ನಾಲ್ಕು ಟ್ರೋಫಿ ಕೊಡುಗೆ ನೀಡಿದ ದಾನಿಗಳಾದ ಸ್ಪೋರ್ಟ್ಸ್ ವರ್ಲ್ಡ್‌ನ ರಝಾಕ್ ಬಪ್ಪಳಿಗೆ, ಸಿಟಿ ಆರ್ಟ್ಸ್ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ, ಉದ್ಯಮಿ ಮೋಹನದಾಸ್ ರೈ ಹಾಗೂ ಅಧ್ಯಕ್ಷ ಗುತ್ತಿಗೆದಾರ ಬಿ.ಜಿ ಜುನೈದ್, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಲಿಟ್ಲ್ -ವರ್ ಶಾಲಾ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ರಘುನಾಥ ರೈ, ಇಸ್ಮಾಯಿಲ್ ಶಾಫಿ, ತ್ರೋಬಾಲ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಬೆಥನಿ ಶಾಲಾ ವಿದ್ಯಾರ್ಥಿಗಳಾದ ರಿಯಾ ಜೆ.ರೈ, -ತಿಮತ್ ಹಫೀದಾ, ಮಹಮ್ಮದ್ ಶಾನ್, ಪೃಥ್ವಿ, ವೈಗಾ ಎಂ, ತನಿಷಾ ರೈ, ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಅವನಿ ರೈ, ವೈಶಾಲಿ ಕೆ., ವೈಷ್ಣವಿ, ಡಿಯೋರ ಐನಿಶ್ ರೆಬೆಲ್ಲೋ, ಸೊಹಾನಿ ಕುಟಿನ್ಹಾ, ಆಯಿಷತ್ ಹಿಬಾ, ನಿರೀಕ್ಷಾ, ಚೈತನ್ಯ ಹಾಗೂ ನಿಶಾರವರನ್ನು ಸನ್ಮಾನಿಸಲಾಯಿತು. ಪಂದ್ಯಾಟದ ಪ್ರಾಯೋಜಕರನ್ನು ಗೌರವಿಸಲಾಯಿತು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಬೆಥನಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕಿ ಭಗಿನಿ ಪ್ರಶಾಂತಿ ಬಿ.ಎಸ್ ಸ್ವಾಗತಿಸಿದರು. ಜಿಲ್ಲಾ ದೈಹಿಕ ಶಿಕ್ಷಣಾಽಕಾರಿ ಭುವನೇಶ್ವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಥನಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯಗುರು ಸೆಲಿನ್ ಪೇತ್ರ ಬಿ.ಎಸ್., ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ರಘುನಾಥ ರೈ, ಇಸ್ಮಾಯಿಲ್ ಶಾಫಿ, ಮಕ್ಕಳ ಸುರಕ್ಷಾ ಸಮಿತಿ ಉಪಾಧ್ಯಕ್ಷರಾದ ಸುನೀತಾ ಪಿರೇರಾ, ಪ್ರತೀಕ್ಷಾ ಪೈ, ರಾಮಚಂದ್ರ ಭಟ್ ಅತಿಥಿಗಳನ್ನು ಶಾಲು ಹಾಕಿ, ಹೂ ನೀಡಿ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿ, ಬೆಥನಿ ಪ್ರೌಢಶಾಲಾ ಮುಖ್ಯಗುರು ಶಾಂತಿ ಬಿ.ಎಸ್ ವಂದಿಸಿದರು.

LEAVE A REPLY

Please enter your comment!
Please enter your name here