ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳ ಸಂಘದಿಂದ ಮುಷ್ಕರ

0

ಮೂಲಭೂತ ಸೌಲಭ್ಯ ನೀಡಿ ಕಾರ್ಯಭಾರದ ಒತ್ತಡ ಕಡಿಮೆ ಮಾಡಿ, ಜೀತದಾಳು ಪದ್ದತಿಯಿಂದ ಮುಕ್ತಿನೀಡಿ’-ನರಿಯಪ್ಪ ಮಠದ್

ಪುತ್ತೂರು:ಮುನಷ್ಯನ ಜನನದಿಂದ ಮರಣದ ತನಕ ಎಲ್ಲಾ ಸೇವೆ ನೀಡುತ್ತಿರುವ ಗ್ರಾಮ ಆಡಳಿತಾಧಿಕಾರಿಗಳಿಗೆ ಜನರ ಸಮಸ್ಯೆಗಳಿಗೆ ಸ್ಪಂಧಿಸಲು ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ನಮ್ಮ ಕೆಲಸದ ಕಾರ್ಯಭಾರದ ಒತ್ತಡ ಕಡಿಮೆ ಮಾಡಿ, ನಮಗೆ ಜೀತದಾಳು ಪದ್ದತಿಯಿಂದ ಮುಕ್ತಿ ನೀಡಿ, ಕರ್ತವ್ಯ ನಿರ್ವಹಿಸಲು ಪೂರಕವಾದ ಆರೋಗ್ಯಕರ ವಾತಾವರಣ ಸೃಷ್ಟಿಸಿಕೊಡುವಂತೆ ಗ್ರಾಮ ಆಡಳಿತಾಧಿಕಾರಿಗಳ ರಾಜ್ಯ ಸಂಘದ ಪ್ರತಿನಿಧಿ ನರಿಯಪ್ಪ ಮಠದ್ ಆಗ್ರಹಿಸಿದರು.


ಮೂಲಭೂತ ಸೌಲಭ್ಯ ಒದಗಿಸಿ, ಕಾರ್ಯಭಾರ ಕಡಿಮೆ ಮಾಡುವುದು ಸೇರಿದಂತೆ ಹಲವು ಬೇಡಿಕಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳ ಸಂಘದಿಂದ ಸೆ.26ರಿಂದು ರಾಜ್ಯದಾದ್ಯಂತ ಏಕ ಕಾಲದಲ್ಲಿ ನಡೆಯುವ ಅನಿರ್ಧಿಷ್ಟಾವಧಿ ಮುಷ್ಕರದ ಅಂಗವಾಗಿ ಪುತ್ತೂರು ತಾಲೂಕು ಸಮಿತಿಯಿಂದ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ನಡೆದ ಮುಷ್ಕರವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಗ್ರಾಮ ಆಡಳಿತಾಧಿಕಾರಿಗಳು ಎಲ್ಲಾ ಇಲಾಖೆಗಳಿಗೂ ಮಾತೃ ಇಲಾಖೆ. 36 ಇಲಾಖೆಗಳಿಗೆ ಜಾಗ ಮಂಜೂರುಗೊಳಿಸುವ ಗ್ರಾಮ ಆಡಳಿತಾಧಿಕಾರಿಗಳ ಕಚೇರಿಗೆ ಸ್ವಂತ ಜಾಗವಿಲ್ಲ. ಕಟ್ಟಡವೂ ಇಲ್ಲ. ಸರಕಾರ ಹಲವಾರು ಯೋಜನೆಗಳನ್ನು ಸರಕಾರದಿಂದ ಗ್ರಾಮ ಮಟ್ಟದಲ್ಲಿ ತಲುಪಿಸುವಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಕಾರ್ಯ ಪ್ರಮುಖವಾಗಿದ್ದರೂ ನಮಗೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ಮೊಬೈಲ್ ಆಪ್, ಕಂಪ್ಯೂಟರ್‌ಗಳ ಮೂಲಕ ದಾಖಲಿಸಲು ಸೂಚಿಸಿದ್ದರೂ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್, ಸ್ಕ್ಯಾನರ್, ಪ್ರಿಂಟರ್ ನೀಡದೇ ಮಹತ್ತರವಾದ ಕಾರ್ಯಗಳನ್ನು ಮಾಡಲು ಮೇಲಿಂದ ಮೇಲೆ ಒತ್ತಡ ಹಾಕುತ್ತಿದ್ದು ರಾಜ್ಯದ ಎಲ್ಲಾ ಗ್ರಾಮ ಆಡಳಿತಾಧಿಗಕಾರಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದರು.


ಕಾರ್ಯಾಭಾರದ ಒತ್ತಡದಿಂದಾಗಿ 1 ವರ್ಷದ ಅವಧಿಯಲ್ಲಿ ಕೆಲವರು ಸಾವನ್ನಪ್ಪಿದ್ದಾರೆ. ಮಾನಸಿಕವಾಗಿ, ದೈಹಿಕವಾಗಿ ಜರ್ಜರಿತವಾಗಿದ್ದಾರೆ. ಹಲವಾರು ಮಾರಕ ಖಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಸರಕಾರಿ ನೌಕರರಿಗಿರುವ ನಿರ್ದಿಷ್ಠ ಜಾಬ್‌ಚಾರ್ಟ್ ನಮಗಿಲ್ಲ. ಕಚೇರಿಯ ಸಮಯದ ಅವಧಿ 5.30ರ ನಂತರವೂ ಮುಕ್ತವಾಗಿ ಮನೆಗೆ ಹೋಗುವಂತಿಲ್ಲ. ಮನೆಯರೊಂದಿಗೆ ಬೆರೆಯುವ ಅವಕಾಶವಿಲ್ಲ. ನಮಗೆ ವೈಯಕ್ತಿಕ ಜೀವನವಿಲ್ಲ. ಬೆಳಿಗ್ಗೆಯಿಂದ ಸಂಜೆ ತನಕ ದುಡಿಯಲು ಮಾತ್ರ ಒತ್ತಡ ಹಾಕುತ್ತಿದ್ದಾರೆ. ಚುನಾವಣೆ, ತುರ್ತು ಸಮಯದಂತೆ ರಜಾ ದಿನಗಳಲ್ಲಿಯೂ ಕೆಲಸ ಮಾಡಬೇಕಾದ ಅನಿವಾಯತೆಯಿದೆ. ರ‍್ಯಾಂಕಿಂಗ್ ಪದ್ದತಿಯಿಂದಾಗಿ ನಮ್ಮನ್ನು ಜೀತದಾಳುಗಳಂತೆ ದುಡಿಸುತ್ತಿದ್ದಾರೆ. ಇದೆಲ್ಲವುಗಳಿಂದ ನಮಗೆ ಮುಕ್ತಿ ನೀಡಿ. ಮೂಲಭೂತ ಸೌಲಭ್ಯಗಳನ್ನು ಸರಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಅವಕಾಶ ಮಾಡಿಕೊಡುವಂತೆ ನರಿಯಪ್ಪ ಮಠದ್ ಆಗ್ರಸಿದರು.


ತಾಲೂಕು ಸಂಘದ ಕಾರ್ಯದರ್ಶಿ ಜಯಚಂದ್ರ ಮಾತನಾಡಿ, ನಾವು ಯಾವುದೇ ಕೆಲಸ ಮಾಡಲು ಸಿದ್ದರಿದ್ದೇವೆ. ಆದರೆ ಕರ್ತವ್ಯ ನಿರ್ವಹಿಸಲು ಪೂರಕವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಅಂತರ್‌ಜಿಲ್ಲಾ ವರ್ಗಾವಣೆಯನ್ನು ರದ್ದುಮಾಡಿ ಅವರವರ ಸ್ವಂತ ಊರಿನಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕು. ಪತಿ-ಪತ್ನಿ ಪ್ರಕರಣಗಳನ್ನು ಪರಿಶೀಲಿಸಿ ವರ್ಗಾವಣೆಗೆ ಅವಕಾಶ ನೀಡಬೇಕು. ಕೆಲಸ ಅವಧಿಯನ್ನು ನಿಗಧಿ ಪಡಿಸಬೇಕು ಎಂದರು. ನಮಗೆ ಹತ್ತು ಹೆಚ್ಚು ಪಟ್ಟು ಕೆಲಸ ಮಾಡಲು ಒತ್ತಡ ಹಾಕುತ್ತಿದ್ದಾರೆ. ಅಂಕಿ ಅಂಶ ಆಗಾಗ ಕೇಳುತಿದ್ದು ಮೊಬೈಲ್ ನೋಡಿ ನಮ್ಮ ಕಣ್ಣಿಗೆ ಸಮಸ್ಯೆ ಉಂಟಾಗಿದೆ. ಅಧಿಕ ಒತ್ತಡದಿಂದಾಗಿ ಕಂದಾಯ ಇಲಾಖೆಯ ಶೇ.68 ಮಂದಿಗೆ ಬಿ.ಪಿ., ಶುಗರ್ ಖಾಯಿಲೆಯಿದೆ. ಹೀಗಾಗಿ ಸರಕಾರದ ಮಟ್ಟದಲ್ಲಿ ಪರಿಶೀಲಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಿ, ನಾವು 01 ಎರಡು ಪಟ್ಟು ಕೆಲಸ ಮಾಡಲು ಸಿದ್ದರಿದ್ದೇವೆ ಎಂದು ತಿಳಿಸಿದರು.


ಗ್ರಾಮ ಆಡಳಿತಾಧಿಕಾರಿಗಳ ತಾಲೂಕು ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ, ಉಪಾಧ್ಯಕ್ಷೆ ಸುಜಾತ ರೈ, ಖಜಾಂಜಿ ಅಶ್ವಿನಿ ಕೆ., ಸಂಘಟನಾ ಕಾರ್ಯದರ್ಶಿ ಶರಣ್ಯ ಸೇರಿದಂತೆ ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳು ಮುಷ್ಕರದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here